Charmadi Ghat Rain: ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆ: ರಸ್ತೆಗೆ ಉರುಳಿದ ಬಂಡೆಗಳು!
ಚಿಕ್ಕಮಗಳೂರು ಆಗಸ್ಟ್ 22: ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬಂಡೆಗಳು ಧರೆಗುರುಳಿವೆ. ಅಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲೇ ಗುಡ್ಡಗಳ ಕುಸಿತ ಕೂಡ ಸಂಭವಿಸಿದ್ದು ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರಿನ ಹಲವೆಡೆ ಅಧಿಕ ಮಳೆಯಾಗುತ್ತಿದ್ದು ರಸ್ತೆಯಲ್ಲಿ ಸಂಚಾರ ಮಾಡಲು ಸವಾರರು ಆತಂಕಗೊಂಡಿದ್ದಾರೆ.
ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವುದರಿಂದ ಈ ಮಾರ್ಗವಾಗಿ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ. ಆದರೆ ಇಂದು ಚಾರ್ಮಾಡಿ ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಭೂಕುತದ ಜೊತೆಗೆ ಬಂಡೆಗಳು ಉರುಳಿ ರಸ್ತೆಗೆ ಬಿದ್ದಿದ್ದು ವಾಹನ ಸವಾರರಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ನೀರು ರಸ್ತೆಯಲ್ಲೇ ತುಂಬಿ ಹರಿಯುತ್ತಿದೆ. ಮಳೆ ನೀರಿನ ಜೊತೆ ಕಲ್ಲುಗಳು ರಸ್ತೆಗೆ ತೇಲಿ ಬರುತ್ತಿವೆ. ಜೊತೆಗೆ ಗುಡ್ಡ ಕುಸಿದು ರಸ್ತೆಗೆ ಬಂಡೆ ಕಲ್ಲುಗಳು ಉರುಳಿ ಬಿದ್ದಿವೆ. ವಿಷಯ ತಿಳಿದ ತಕ್ಷಣ ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನ ಸಂಚಾರ ಎಂದಿನಂತೆ ಇದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ.
ಕರ್ನಾಟಕದ ನಾನಾ ಭಾಗದಲ್ಲಿ ಆರು ದಿನ ಮಳೆ
ಪೂರ್ವ ಅರಬ್ಬೀ ಸಮುದ್ರದ ಲಕ್ಷದೀಪ ಪ್ರದೇಶದಲ್ಲಿ ಸರ್ಕ್ಯುಲೇಷನ್ ಇದೆ. ಇದರ ಪ್ರಭಾವದಿಂದಾಗಿ ಕರಾವಳಿಯಲ್ಲಿ 22, 23, 24 ಹಾಗೂ 25ರಂದು ಧಾರಾಕಾರ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದ ಕೆಲವು ಕಡೆ ಭಾರೀ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್ 23, 24, 25, 26, 27ರಂದು ಭಾರೀ ಮಳೆ ಮುನ್ಸೂಚನೆ ಹಿನ್ನಲೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಆರು ದಿನಗಳ ಕಾಲ ಹವಾಮಾನ ಹೀಗೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಕರಾವಳಿ ಭಾಗದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಮಳೆಯ ಜೋತೆಗೆ ಗಾಳಿಯೂ ವೇಗವಾಗಿ ಬೀಸಲಿರುವ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಗಾಳಿಯ ವೇಗ ಗಂಟೆಗೆ 35 ಕಿಮೀ ನಿಂದ 55 ಕಿಮೀವರೆಗೆ ಇರಲಿದೆ. ಹೀಗಾಗಿ ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ 48 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಆರಂಭದಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ಅತಿ ಹೆಚ್ಚು ಮಳೆ ದಾಖಲಾಗಿದ್ದು ಎಲ್ಲಿ?
ಶಿವಮೊಗ್ಗದ ತ್ಯಾಗರ್ತಿಯಲ್ಲಿ ಎಂಟು ಸೆಂಟಿ ಮೀಟರ್ ಮಳೆ ಸುರಿದಿದ್ದು, ಆಗಸ್ಟ್ 21ರಂದು ದಾಖಲಾದ ಅತಿ ಹೆಚ್ಚು ಮಳೆಯ ಪ್ರಮಾಣವಾಗಿದೆ. ಚಿತ್ರದುರ್ಗದ ನಾಯಕಹಟ್ಟಿ, ತುಮಕೂರಿನ ಬರಗೂರಿನಲ್ಲಿ ಏಳು ಸೆ.ಮೀ ಮಳೆಯಾಗಿದೆ. ಹೊನ್ನಾಳಿ, ರಾಯಲ್ಪಾಡಿನಲ್ಲಿ ಐದು ಸೆ.ಮೀ ಮಳೆ ಸುರಿದಿದೆ. ಆಗುಂಬೆ, ಹಾಸನ, ಚನ್ನಗಿರಿ, ದೊಡ್ಡಬಳ್ಳಾಪುರ, ಕುರಗೋಡು, ಮಧುಗಿರಿಯಲ್ಲಿ ನಾಲ್ಕು ಸೆಂ.ಮೀ ಮಳೆಯಾಗಿದೆ.












Click it and Unblock the Notifications