ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ 4 ತಿಂಗಳ ಮಗು ಸಾವು; ವೈದ್ಯರ ವಿರುದ್ಧ ಪೋಷಕರ ಆಕ್ರೋಶ
ಚಿಕ್ಕಮಗಳೂರು, ಡಿಸೆಂಬರ್, 29: ಸೂರಾಪುರ ಗ್ರಾಮದ ಗೋಪಾಲ್, ಮೀನಾಕ್ಷಿ ಎನ್ನುವ ದಂಪತಿಯ 4 ವರ್ಷದ ಮಗುವಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ತಕ್ಷಣ ಮಗುವನ್ನು ಚಿಕ್ಕಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಇದಕ್ಕೆ ಆಕ್ರೋಶಗೊಂಡ ಮಗುವಿನ ಪೋಷಕರು, ವೈದ್ಯರು ಹಾಗೂ ಶೂಶ್ರುಕಿಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ.
ತಾಲೂಕಿನ ಸೂರಾಪುರ ಗ್ರಾಮದ ಗೋಪಾಲ್-ಮೀನಾಕ್ಷಿ ದಂಪತಿಯ ನಾಲ್ಕು ತಿಂಗಳ ಗಂಡು ಮಗು ಸರಿಯಾಗಿ ಹಾಲು ಕುಡಿಯುತ್ತಿರಲಿಲ್ಲ. ತುಂಬಾ ಅಳುತ್ತಿತ್ತು ಎಂದು ಮಧ್ಯಾಹ್ನ (ಡಿಸೆಂಬರ್ 28) 12 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಒಂದು ಗಂಟೆಯ ಬಳಿಕ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ವೈದ್ಯರು ಇಲ್ಲೇ ಇರಬೇಕು. ಮಗುವಿಗೆ ಹಾಲು ಕುಡಿಸಬೇಡಿ ಎಂದು ಹೇಳಿದ್ದರು. ಆದರೆ, ಮಗು ತುಂಬಾ ಅಳುತ್ತಿದ್ದ ಕಾರಣ ನರ್ಸ್ ಹಾಲು ಕುಡಿಸುವಂತೆ ಹೇಳಿದ್ದಾರೆ. ಆಗ ತಾಯಿ ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಿದ್ದಳು. ಹಾಲು ಕುಡಿಸಿದ ಸ್ವಲ್ಪ ಹೊತ್ತಿನ ನಂತರ ಮಗು ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದೆ.

ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು, ಆರೋಪ
ವೈದ್ಯರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಿಲ್ಲ. ವೈದ್ಯರು ಕೂಡಲೇ ನೋಡಿ ಚಿಕಿತ್ಸೆ ನೀಡಿದ್ದರೆ ಮಗು ಉಳಿಯುತ್ತಿತ್ತು. ಮಗುವಿನ ಸಾವಿಗೆ ವೈದ್ಯರು ಹಾಗೂ ನರ್ಸ್ಗಳೇ ಕಾರಣ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೆರಿಗೆ ಆಸ್ಪತ್ರೆಯಲ್ಲಿದ್ದ ನೂರಾರು ಜನ ವೈದ್ಯರು ಹಾಗೂ ನರ್ಸ್ಗಳಿಗೆ ಹಿಡಿಶಾಪ ಹಾಕಿದ್ದಾರೆ.

ಇಬ್ಬರು ವೈದ್ಯರು ಆಸ್ಪತ್ರೆಯಿಂದ ಕಣ್ಮರೆ
ಮಗು ಸಾವನ್ನಪ್ಪಿದ ನಂತರ ನರ್ಸ್ ಹಾಗೂ ಇಬ್ಬರು ವೈದ್ಯರು ಆಸ್ಪತ್ರೆಯಿಂದ ಕಣ್ಮರೆ ಆಗಿದ್ದಾರೆ. ಮಗುವಿನ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಜನರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿದ್ದಂತೆ ಪಿಎಸ್ಐ, ಎಸ್ಐ, ಡಿವೈಎಸ್ಪಿ ಹಾಗೂ ಎಎಸ್ಪಿ ಕೂಡ ಭೇಟಿ ನೀಡಿದ್ದರು. ಬಳಿಕ ಪೊಲೀಸರು ಸಮಾಧಾನವಾಗಿ ಮಾತನಾಡಿ ಎಲ್ಲರನ್ನೂ ಹೊರಗೆ ಕಳಿಸಿದ್ದಾರೆ. ಈ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications