ಭಾನುಮತಿ ಮೋಹಕ್ಕೂ ಬೀಳದ ಒಂಟಿ ಸಲಗ, ಹಾವೇರಿ ಟಸ್ಕರ್ ಕಾಟಕ್ಕೆ ಹೈರಾಣಾದ ಅರಣ್ಯಾಧಿಕಾರಿಗಳು
ಚಿಕ್ಕಮಗಳೂರು, ಆಗಸ್ಟ್ 22: ಹೆಣ್ಣಾನೆ ಮೋಹಕ್ಕೂ ಬೀಳದ ಪುಂಡ ಒಂಟಿ ಸಲಗವೊಂದು ಅರಣ್ಯಾಧಿಕಾರಿಗಳು ಹೈರಾಣುಗುವಂತೆ ಹಿಂಸೆ ಕೊಡುತ್ತಿದ್ದು, ಸಲಗವನ್ನು ಸೆರೆ ಹಿಡಿಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮೇಗುಂದಾ ಹೋಬಳಿಯ ಸುತ್ತಮುತ್ತ ಕಳೆದ ನಾಲ್ಕೈದು ತಿಂಗಳಿಂದ ಪುಂಡಾನೆ ಕಾಟ ಕೊಡುತ್ತಿತ್ತು. ಇಡೀ ರಾತ್ರಿ ದಾಂಧಲೆ ಮಾಡಿ ಹಗಲಲ್ಲಿ ಸುತ್ತಲೂ ಪ್ರಪಾತವಿರುವ ಎತ್ತರದ ಜಾಗದಲ್ಲಿ ನಿಲ್ಲುತ್ತಿದೆ. ಈ ಪುಂಡಾನೆಯನ್ನ ಹಿಡಿಯಲು ಶಿವಮೊಗ್ಗದಿಂದ ಸಾಕಾನೆಗಳನ್ನ ಕರೆಸಿದರೂ ಮೂರು ದಿನದಿಂದ ಕಾರ್ಯಾಚರಣೆ ನಡೆಸಿದರೂ ಪುಂಡಾನೆ ಮಾತ್ರ ಒಂಟಿ ಸಲಗ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದೆ.
11 ಮಾವುತರು, ಐದು ಸಾಕಾನೆಗಳು, ಅಧಿಕಾರಿಗಳು ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ ಸಹಾ ಆನೆ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಈಗಲೂ ಹಗಲಲ್ಲಿ ದಾಂಧಲೆ ನಡೆಸುತ್ತಿರುವ ಸಲಗ ಮೇಗುಂದ ಹೋಬಳಿಯ ಗುಡ್ಡದ ಎತ್ತರಕ್ಕೆ ಹೋಗಿ ನಿಲ್ಲುತ್ತಿದೆ. ಸುತ್ತಲೂ ಪ್ರಪಾತವಿದ್ದು ಬೆದರಿಸಿದರೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಆನೆಯನ್ನು ಬೆದರಿಸಲು ಮುಂದಾಗದೆ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಅಧಿಕಾರಿಗಳು ಸಾಕು ಹೆಣ್ಣಾನೆ ಭಾನುಮತಿ ಮೂಲಕ ಒಂಟಿ ಸಲಗವನ್ನು ಆಕರ್ಷಣೆಗೊಳಗಾಗುವಂತೆ ಮಾಡಿ ಸೆರೆ ಹಿಡಿಯುವ ಪ್ರಯತ್ನ ನಡೆಸಿದದರಾದರೂ ಆ ಪುಂಡಾನೆ ಮಾತ್ರ ಇದ್ಯಾವುದಕ್ಕೆ ಬಗ್ಗುತ್ತಿಲ್ಲ. ಅಧಿಕಾರಿಗಳು ಮೂರು ದಿನದಿಂದ ಉಪಯೋಗವಿಲ್ಲದ ಕಾರ್ಯಚರಣೆ ನಡೆಸುತ್ತಿದ್ದಾರೆ. ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಕೊರಳಿಗೆ ರೇಡಿಯೋ ಕಾಲರ್ ಇದ್ದು ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.
ವೇಳಾಪಟ್ಟಿ ಬದಲಾಯಿಸುವಂತೆ ವಿದ್ಯಾರ್ಥಿಗಳ ಒತ್ತಾಯ
2022-23ರ ಶೈಕ್ಷಣಿಕ ವರ್ಷದ ಮಧ್ಯಂತರ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಕುವೆಂಪು ವಿಶ್ವವಿದ್ಯಾಲಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಪ್ರತಿಭಟನೆ ನಡೆಸಿದರೆ, ಕಡೂರಿನಲ್ಲಿ ಎಬಿವಿಪಿ ವಿದ್ಯಾರ್ಥಿ ಘಟಕ ಪ್ರತಿಭಟನೆ ನಡೆಸಿದೆ. ಇನ್ನೂ ಕಳಸ ಪಟ್ಟಣದಲ್ಲೂ ಕೂಡ ನೂರಾರು ವಿದ್ಯಾರ್ಥಿಗಳು ಕುವೆಂಪು ವಿವಿ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯದ ಇತರ ವಿವಿಗಳಲ್ಲಿ ಏಪ್ರಿಲ್ಗೆ ತರಗತಿಗಳು ಶುರುವಾಗಿದ್ದರೆ, ಕುವೆಂಪು ವಿವಿಯಲ್ಲಿ ತರಗತಿಗಳು ಶುರುವಾಗಿದ್ದೇ ಜೂನ್ 20ರ ಬಳಿಕ. ಆದರೆ, ಇದೀಗ ರಾಜ್ಯದ ಇತರ ವಿವಿಗಳಂತೆ ಕುವೆಂಪು ವಿವಿ ಕೂಡ ಆಗಸ್ಟ್ 30ಕ್ಕೆ ಮೊದಲ ಸೆಮಿಸ್ಟರ್ ಕೊನೆಗೊಳಿಸುವಂತೆ ಸೂಚಿಸಿದೆ. ಆದರೆ, ಇನ್ನೂ ಕೂಡ ತರಗತಿಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಏಕಾಏಕಿ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.











Click it and Unblock the Notifications