ಚಿಕ್ಕಮಗಳೂರಿನಲ್ಲಿ ದೇವಿರಮ್ಮ ದರ್ಶನ: 3000 ಅಡಿಯ ಬೆಟ್ಟ ಏರಿದ ಸಾವಿರಾರು ಭಕ್ತರು!
ಚಿಕ್ಕಮಗಳೂರು, ನವೆಂಬರ್ 3: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಜಿಲ್ಲಾಡಳಿತದ ನಿರ್ಬಂಧ ನಡುವೆಯೂ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಿಂಡಿಗಾ ದೇವಿರಮ್ಮ ಬೆಟ್ಟಕ್ಕೆ ಪ್ರತಿವರ್ಷದಂತೆ ಈ ವರ್ಷವು ಭಕ್ತಸಾಗರವೇ ಹರಿದು ಬಂದಿತು. ರಾಜ್ಯದ ವಿವಿಧ ಭಾಗದ ಸಾವಿರಾರು ಮಂದಿ ಭಕ್ತರು ಮೂರು ಸಾವಿರ ಅಡಿಯ ಕಡಿದಾದ ಬೆಟ್ಟವೇರಿ ದೇವಿಯ ದರ್ಶನ ಪಡೆದುಕೊಳ್ಳುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಕೋವಿಡ್-19 ಹಿನ್ನೆಲೆ ಜಿಲ್ಲಾಡಳಿತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸದಂತೆ ಮನವಿ ಮಾಡಿಕೊಂಡಿತ್ತು. ಇದರ ಜೊತೆಗೆ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಟೋಕನ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದ್ಯಾವುದನ್ನು ಲೆಕ್ಕಿಸದೆ ಭಕ್ತರ ದಂದು ದೇವಿರಮ್ಮ ಬೆಟ್ಟವೇರಿ ದೇವಿಯ ದರ್ಶನ ಪಡೆದರು.
ನ.3ರಿಂದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ: ಕೋವಿಡ್ ಮಾರ್ಗಸೂಚಿ ಅನ್ವಯ
ಮಂಗಳವಾರ ರಾತ್ರಿಯಿಂದಲೇ ಬೆಟ್ಟವೇರಲು ಆರಂಭಿಸಿದ ಭಕ್ತರು ಬುಧವಾರ ಸಂಜೆವರೆಗೂ ಬೆಟ್ಟವೇರಿ ದೇವಿಗೆ ಭಕ್ತಿಯನ್ನು ಸಮರ್ಪಸಿದರು. ಮಂಗಳವಾರ ರಾತ್ರಿಯಿಂದ ಚಿಕ್ಕಮಗಳೂರು ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆ, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಇತರೆ ಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ಬೆಟ್ಟವೇರಿದರು.
ಬೈಕ್ ಹಾಗೂ ಕಾರುಗಳಲ್ಲಿ ಭಕ್ತರ ಆಗಮನ
ರಾಜ್ಯದ ವಿವಿಧೆಡೆಯಿಂದ ಬೈಕ್ ಹಾಗೂ ಕಾರುಗಳಲ್ಲಿ ಆಗಮಿಸಿದ ಭಕ್ತರು ಕಡಿದಾದ ಕಲ್ಲು ಮುಳ್ಳುಗಳ ದಾರಿಯಲ್ಲಿ ಆಯಾಸವನ್ನು ಲೆಕ್ಕಿಸದೆ ಉತ್ಸಾಹದಿಂದ ಬೆಟ್ಟ ಏರಿದರು. ಬರಿಗಾಲಿನಲ್ಲಿ ಬೆಟ್ಟವೇರುವುದು ಇಲ್ಲಿನ ಪದ್ಧತಿಯಾಗಿದ್ದು, ಹರಕೆ ಹೊತ್ತವರು ಕಟ್ಟಿಗೆಯನ್ನು ಹೆಗಲ ಮೇಲೆ ಹೊತ್ತು ದಟ್ಟವಾದ ಬೆಟ್ಟವನ್ನು ಹತ್ತಿದರು. ಕೆಲ ಭಕ್ತರು ಹೂವು ಹಣ್ಣು, ಎಣ್ಣೆಬಟ್ಟೆಯನ್ನು ದೇವಿರಮ್ಮ ದೇವಿಗೆ ಅರ್ಪಿಸಿ ಸಂತೃಪ್ತರಾದರು.
ಹರಕೆ ಹೊತ್ತವರು ಉಪವಾಸದಿಂದ ಬೆಟ್ಟವೇರಿ ದೇವಿಗೆ ಹರಕೆ ತೀರಿಸಿ ಬೆಟ್ಟದಿಂದ ಇಳಿದ ನಂತರ ಆಹಾರ ಸೇವಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಕೋವಿಡ್ ನಿರ್ಬಂಧದ ನಡುವೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದುಕೊಂಡರು.
ಭಕ್ತರ ನಿಯಂತ್ರಣಕ್ಕಾಗಿ ಚೆಕ್ಪೋಸ್ಟ್
ಕೋವಿಡ್-19 ಹಿನ್ನೆಲೆಯಲ್ಲಿ ಭಕ್ತರನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮಲ್ಲೇನಹಳ್ಳಿ ಪ್ರವೇಶಿಸುತ್ತಿದ್ದಂತೆ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಪಾಸ್ ಹೊಂದಿಲ್ಲ ಜನರನ್ನು ತಡೆದು ವಿಚಾರಿಸಿದರು. ಬಿಂದಿಗ ದೇವಿರಮ್ಮ ದೇವಸ್ಥಾನ ಪ್ರವೇಶದ್ವಾರ ಹಾಗೂ ಬೆಟ್ಟಕ್ಕೆ ಸಾಗುವ ಪ್ರತಿ ತಿರುವಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಿಗಿ ಭದ್ರತೆ ನಡುವೆ ತಮ್ಮನ್ನು ಬೆಟ್ಟವೇರಲು ಬಿಡುವಂತೆ ಭಕ್ತರು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರ ನಡುವೆ ಪೊಲೀಸರ ಕಣ್ಣು ತಪ್ಪಿಸಿ ಬೆಟ್ಟದದಾರಿ ಹಿಡಿಯುತ್ತಿದ್ದು ಕಂಡು ಬಂತು.
ದೇವಿರಮ್ಮ ದರ್ಶನಕ್ಕೆ ಬೆಟ್ಟ ಏರಿದ ಭಕ್ತಸಾಗರ
ಇಡೀ ಬೆಟ್ಟ ಹಸಿರು ಹುಲ್ಲಿನ ಹಾಸಿನ ನಡುವೆ ಮಂಜು ಆವೃತ್ತವಾಗಿತ್ತು. ವಾಹನಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿದ ಭಕ್ತರು ಅಲ್ಲಿಂದ 4 ಕಿ.ಮೀ ದೂರದ ರಸ್ತೆಯಲ್ಲಿ ಸಾಗಿ ಕಾಫಿ ತೋಟದ ಒಳಗಿನಿಂದ ಬೆಟ್ಟವೇರನ್ನೇರುವ ಸಂದರ್ಭದಲ್ಲಿ ಮಂಜು ಮುಸುಕಿದ ವಾತಾವರಣ ಭಕ್ತರಿಗೆ ವಿಶೇಷ ಅನುಭವ ನೀಡಿತ್ತು. ಭಾರೀ ಪ್ರಮಾಣದ ಮಂಜು ಆವರಿಸಿದ್ದರಿಂದ ಕಾಲುದಾರಿ ಜಾರು ಬಂಡಿಯಂತಾಗಿತ್ತು. ಇದರ ನಡುವೆ ಎದ್ದುಬಿದ್ದು ಭಕ್ತರು ಕಷ್ಟಪಟ್ಟು ಬೆಟ್ಟವೇರಿದರು. ಕಡಿದಾದ ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಹಗ್ಗವನ್ನು ನೀಡಿ ಭಕ್ತರು ಬೆಟ್ಟವೇರಲು ನೆರವಾದರೂ. ಕಡಿದಾದ ಬೆಟ್ಟವೇರಿದ ಭಕ್ತರು ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಹುಲ್ಲುಹಾಸಿನ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕಂಡು ಬಂತು. ಬೆಟ್ಟದ ಬುಡದ ಬಿಂಡಿಗ ದೇವೀರಮ್ಮನ ದೇವಸ್ಥಾನದಲ್ಲೂ ಭಕ್ತರ ಸಮೂಹ ಕೂಡಿತ್ತು.
ದೇವಿರಮ್ಮ ದೇವಿ ದರ್ಶನ ಪಡೆದ ಶಾಸಕ ಸಿ.ಟಿ ರವಿ
ನಕರ ಚತುದರ್ಶಿ ಹಿಂದಿನ ದಿನ ಬೆಟ್ಟಹತ್ತಿ ದೇವಿರಮ್ಮ ದರ್ಶನ ಪಡೆದು ದೀಪಾವಳಿ ಹಬ್ಬ ಆಚರಿಸುವುದು ಇಲ್ಲಿನ ವಾಡಿಕೆಯಾಗಿದೆ. ಅದರೆಂತೆ ಶಾಸಕ ಸಿ.ಟಿ.ರವಿ ಪ್ರತಿವರ್ಷ ದೇವಿರಮ್ಮ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಿ.ಟಿ.ರವಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದುಕೊಂಡರು. ನಾಡಿನ ಜನತೆಗೆ ದೇವಿಯು ಸುಖ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.