ಶೀಘ್ರವೇ ಚಿಕ್ಕಮಗಳೂರು-ತಿರುಪತಿ ವಯಾ ಬೆಂಗಳೂರು ಹೊಸ ರೈಲು
ಚಿಕ್ಕಮಗಳೂರು, ಡಿಸೆಂಬರ್ 15: ರೈಲುಗಳ ವಿಚಾರದಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಶಾಪಗ್ರಸ್ತ ಎಂದೇ ಹೇಳಬೇಕು. ಜಿಲ್ಲೆಯ ಬಯಲುಸೀಮೆ ವ್ಯಾಪ್ತಿಯಲ್ಲಿ ರೈಲುಗಳ ಸಂಪರ್ಕ ಉತ್ತಮವಾಗಿದೆ. ಆದರೆ ಮಲೆನಾಡು ಭಾಗದಲ್ಲಿ ಅಷ್ಟಾಗಿ ರೈಲುಗಳಿಲ್ಲ. ಚಿಕ್ಕಮಗಳೂರು ನಿಲ್ದಾಣಕ್ಕೆ ಪ್ರತಿದಿನ ಬರುವುದು 4 ರೈಲುಗಳು ಮಾತ್ರ. ಇಂತಹ ನಿಲ್ದಾಣವನ್ನು ಈಗ 26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ನಗರದ ರೈಲು ಸಂಪರ್ಕ ಉತ್ತಮಗೊಳಿಸಲು ಯೋಜನೆ ರೂಪಿಸಿದ್ದಾರೆ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಸಂಸದರ ಫೇಸ್ಬುಕ್ ಪೋಸ್ಟ್: ಚಿಕ್ಕಮಗಳೂರು-ತಿರುಪತಿ ವಯಾ ಬೆಂಗಳೂರು ಹೊಸ ರೈಲು ಓಡಿಸಬೇಕು ಎನ್ನುವುದು ಸಂಸದರ ಬೇಡಿಕೆಯಾಗಿದೆ. ಇದರಿಂದಾಗಿ ಚಿಕ್ಕಮಗಳೂರು-ಬೆಂಗಳೂರು ಸಂಪರ್ಕ ಸುಲಭವಾಗುವ ಜೊತೆಗೆ ಪುಣ್ಯಕ್ಷೇತ್ರ ತಿರುಪತಿಗೆ ಸಂಚಾರ ನಡೆಸುವ ಭಕ್ತರಿಗೆ ಸಹ ಅನುಕೂಲವಾಗಲಿದೆ ಎನ್ನುವುದು ಸಂಸದರ ಬೇಡಿಕೆಯಾಗಿದೆ.
ಸಚಿವ ವಿ. ಸೋಮಣ್ಣ ಭೇಟಿ ಕುರಿತು ಸಂಸದರು ಪೋಸ್ಟ್ ಹಾಕಿದ್ದು, 'ಚಿಕ್ಕಮಗಳೂರು-ತಿರುಪತಿ ನಡುವೆ ಹೊಸ ರೈಲು ಮಂಜೂರಾತಿಗೆ ರೈಲ್ವೆ ಸಚಿವರಾದ ಶ್ರೀ ವಿ. ಸೋಮಣ್ಣರವರ ಜೊತೆಗೆ ಚರ್ಚಿಸಲಾಯಿತು. ಚಿಕ್ಕಮಗಳೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಹಿಂದುಗಳ ಪವಿತ್ರ ಯಾತ್ರಾಸ್ಥಳವಾದ ತಿರುಪತಿಗೆ ನೂತನ ರೈಲನ್ನು ಮಂಜೂರು ಮಾಡಬೇಕೆಂದು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿ ಮನವಿ ನೀಡಲಾಯಿತು' ಎಂದು ಹೇಳಿದ್ದಾರೆ.
'ಈಗಿರುವ ಸ್ಥಿತಿಯಲ್ಲಿ ಚಿಕ್ಕಮಗಳೂರು ಜನತೆಗೆ ಮತ್ತಷ್ಟು ರೈಲ್ವೆ ಸೇವೆಯ ಅಗತ್ಯವಿದ್ದು, ನೂತನ ರೈಲ್ವೆ ಯೋಜನೆ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ ಎಂದು ವಿವರಿಸಲಾಯಿತು. ಸ್ಥಳದಲ್ಲಿ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ತಯಾರಿಕೆಗೆ ನೂತನ ರೈಲ್ವೆ ಮಂಜೂರಾತಿಗೆ ಕಡತ ಮಂಡಿಸುವಂತೆ ಸಚಿವ ಸೋಮಣ್ಣ ನಿರ್ದೇಶನ ನೀಡಿದ್ದಾರೆ' ಎಂದು ಸಂಸದರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸದ್ಯ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಬೆಳಗ್ಗೆ ಮತ್ತು ಸಂಜೆ 2 ರೈಲುಗಳು ಆಗಮಿಸುತ್ತವೆ. ಬೆಂಗಳೂರಿನಿಂದ ಬರುವ ರೈಲು ರಾತ್ರಿ 8.30ಕ್ಕೆ ಆಗಮಿಸುತ್ತದೆ. ರೈಲು ನಿಲ್ದಾಣಕ್ಕೆ ಬಸ್ ಸೇವೆ, ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯಗಳು ಪ್ರಯಾಣಿಕರ ಸ್ನೇಹಿಯಾಗಿಲ್ಲ.
ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ತರೀಕೆರೆ, ಅಜ್ಜಂಪುರದಲ್ಲಿ ರೈಲು ಸಂಪರ್ಕ ಉತ್ತಮವಾಗಿದೆ. ಶಿವಮೊಗ್ಗ, ಉತ್ತರ ಕರ್ನಾಟಕ ಕಡೆ ಸಾಗುವ ಹಲವು ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರಿಗೆ ಸಹ ಅನುಕೂಲವಾಗಿದೆ. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ರೈಲು ಸಂಪರ್ಕ ಅಷ್ಟಾಗಿ ಇಲ್ಲ.
ಜುಲೈ 18ರಂದು ಸಚಿವ ವಿ. ಸೋಮಣ್ಣ ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಅಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಕುರಿತು ಮಾಹಿತಿಯನ್ನು ಪಡೆದಿದ್ದರು. ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿ, ಮೂಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಕಾಮಗಾರಿ ಪರಿಶೀಲಿಸಿದ್ದರು.
ಚಿಕ್ಕಮಗಳೂರು ರೈಲು ನಿಲ್ದಾಣದ ಅಭಿವೃದ್ಧಿಗೆ 26 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕೇಂದ್ರದ ರೈಲು ನಿಲ್ದಾಣದಲ್ಲಿ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ರೈಲು ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹೇಳಿದ್ದರು.
ಪ್ರಯಾಣಿಕರ ಕಾಯುವ ಕೊಠಡಿ, ಪುರುಷ ಮತ್ತು ಮಹಿಳೆಯರ ಶೌಚಾಲಯ, ಸಣ್ಣ ರೆಸ್ಟೋರೆಂಟ್, ಟಿಕೆಟ್ ಕೌಂಟರ್ ಸೇರಿದಂತೆ ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಗಾಗಿ ಮುಕ್ತಾಯಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದರು.












Click it and Unblock the Notifications