ದತ್ತಮಾಲಾ ಅಭಿಯಾನ: ಹೊಸ ಆಚರಣೆಗೆ ಅವಕಾಶ ಇಲ್ಲ ಎಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ
ಚಿಕ್ಕಮಗಳೂರು, ನವೆಂಬರ್, 11: ಶ್ರೀರಾಮಸೇನೆಯ 18ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ತಿಂಗಳ ಕೊನೆಯಲ್ಲಿ ಭಜರಂಗದಳ-ವಿಎಚ್ಪಿಯದ್ದು ದತ್ತಜಯಂತಿ ನಡೆಯಲಿದೆ. ಇದೇ ನವೆಂಬರ್ ತಿಂಗಳ 13ರಂದು ದತ್ತಪೀಠದಲ್ಲಿ ಮಾಲೆ ಧರಿಸಿರುವ ಸಾವಿರಾರು ದತ್ತಮಾಲಾಧಾರಿಗಳು ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಸಾವಿರಾರು ದತ್ತಮಾಲಾಧಾರಿಗಳು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಆದರೆ ಈ ಮಧ್ಯೆ ಶ್ರೀರಾಮಸೇನೆ ಜಿಲ್ಲಾಡಳಿತದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ. ಆದರೆ ಯಾವುದೇ ಹೊಸ ಆಚರಣೆಗೆ ಅವಕಾಶ ಇಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈಗಾಗಲೇ ನಾಲ್ಕು ವರ್ಷದ ಹಿಂದೆ ಶೋಭಾಯಾತ್ರೆಯ ಮೆರವಣಿಗೆಗೆ ಅನುಮತಿ ನೀಡಿದ್ದಿ, ದತ್ತ ವಿಗ್ರಹವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿತ್ತು. ಶೋಭಾಯಾತ್ರೆಯಲ್ಲಿ ಮೆರವಣಿಗೆಗೆ ಅನುಮತಿ ಸಿಕ್ಕಿದ್ದರಿಂದ ಪೊಲೀಸರ ಭದ್ರತೆಯಲ್ಲಿ ಚಿಕ್ಕಮಗಳೂರು ನಗರಕ್ಕೆ ವಿಗ್ರಹವನ್ನು ತರಲಾಗಿದೆ. ಆದರೆ ಇನಾಂ ದತ್ತಾತ್ರೇಯ ಪೀಠದಲ್ಲಿ ಮಾಂಸದೂಟವನ್ನು ಮಾಡಿದ್ದಾರೆ. ಅಲ್ಲಿ ಹೋಮ ನಡೆಸುವುದಿಲ್ಲ. ಆದ್ದರಿಂದ ಮತ್ತೆ ಅವಕಾಶ ಕೊಡಿ ಅನ್ನುವ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಇದೀಗ ಜಿಲ್ಲಾಡಳಿತ ವಿವಾದಿತ ಸ್ಥಳ ಯಾವುದು, ನಿಷೇಧಿತ ಸ್ಥಳ ಯಾವುದು ಅಂತಾ ಅಧಿಕೃತವಾಗಿ ಹೇಳೀದೆ. ಹಾಗಾಗಿ ಈ ಬಾರಿ ಹೋಮ ಎಲ್ಲಿ ಮಾಡುತ್ತಾರೆ ಅನ್ನವುದು ಯಕ್ಷಪ್ರಶ್ನೆಯಾಗಿದೆ. ಇನ್ನು ಈವರೆಗೆ ಎಲ್ಲೆಲ್ಲಿ ತಂತಿಬೇಲಿ ಹಾಕಲಾಗಿದೆಯೋ ಅವೆಲ್ಲವೂ ವಿವಾದಿತ ಸ್ಥಳ ಎಂದೇ ಬಿಂಬಿತವಾಗಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಅದೇಶ ಏನು?
ಕೋರ್ಟ್ನಲ್ಲಿ ವಿವಾದವಿರುವುದು ಗುಹೆ, ಗೋರಿ ಇರುವ ಸ್ಥಳ, ಹಾಗೂ ಪೂಜಾ ಪದ್ಧತಿ ಮಾತ್ರ. ಇನ್ನುಳಿದ 400 ಮೀಟರ್ ಪ್ರದೇಶ ಸೂಕ್ಷ್ಮ ನಿಷೇಧಿತ ಪ್ರದೇಶವಾಗಿದೆ. ಇದು ಕೂಡ ಜಿಲ್ಲಾಧಿಕಾರಿ ಅದೇಶ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಈ ಬಾರಿಯೂ ನಿಷೇಧಿತ ಪ್ರದೇಶದಲ್ಲಿ ಹೋಮ ನಡೆಸುವುದಕ್ಕೆ ಅನುಮತಿ ನೀಡುವುದು ಅನುಮಾನ ಆಗಿದೆ. ಜಿಲ್ಲಾಧಿಕಾರಿ ಅದೇಶ ಇರುವುದರಿಂದ ಮಂಟಪದಲ್ಲಿಯೇ ತಾತ್ಕಾಲಿಕ ಹೋಮವನ್ನು ಮಾಡುವುದಕ್ಕೆ ಅವಕಾಶ ನೀಡುವ ಸಾದ್ಯತೆ ಹೆಚ್ಚಾಗಿದೆ. ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಶ್ರೀರಾಮಸೇನೆ, ವಿಎಚ್ಪಿ ನಡೆ ನಿಗೂಢ
ಒಟ್ಟಾರೆ ಹೋಮ ಮಾಡುವುದಕೆ ಬೇರೆ ಸ್ಥಳ ನೀಡಿ ಅನ್ನುವ ಮನವಿಯ ಬೆನ್ನಲ್ಲೇ, ವಿವಾದಿತ-ನಿಷೇಧಿತ ಸ್ಥಳ ಅನ್ನುವುದು ಮುನ್ನಲೆಗೆ ಬಂದಿದೆ. ನಿಷೇಧಿತ ಪ್ರದೇಶದಲ್ಲಿಯೇ ಹೋಮಕ್ಕೆ ಅವಕಾಶವನ್ನು ಕೇಳಲಾಗಿದೆ. ಆದರೆ ಜಿಲ್ಲಾಧಿಕಾರಿ ಆದೇಶದಿಂದಲೇ ನಿಷೇಧಿತ ಪ್ರದೇಶ ಘೋಷಣೆ ಆಗಿರುವುದರಿಂದ ಈ ಬಾರಿಯೂ ತಾತ್ಕಾಲಿಕ ಹೋಮ ಮಂಟಪದಲ್ಲಿ ಮಾಡಲು ಅವಕಾಶ ಇದೆ. ಈ ನಿರ್ಧಾರಕ್ಕೆ ಶ್ರೀರಾಮಸೇನೆ, ಭಜರಂಗಳ ಹಾಗೂ ವಿಎಚ್ಪಿಯ ನಡೆ ಏನಿರುತ್ತದೆ ಅನ್ನುವುದು ಮಾತ್ರ ನಿಗೂಢವಾಗಿದೆ.

ನ.13ರ ವರೆಗೆ ನಡೆಯಲಿರುವ ಅಭಿಯಾನ
ದತ್ತಮಾಲ ಅಭಿಯಾನ ನವೆಂಬರ್ 7ರಿಂದ ಆರಂಭವಾಗಿದ್ದು, ನವೆಂಬರ್ 13ರ ವರೆಗೆ ನಡೆಯಲಿದೆ. ಬ್ಯಾನರ್, ಬಂಟಿಂಗ್ಸ್ಗಳನ್ನು ಅಳವಡಿಕೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅವರು ಪರಿಶೀಲಿಸಿ ಅನುಮತಿ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇತ್ತೀಚೆಗಷ್ಟೇ ಹೇಳಿದ್ದರು.

ಮೆರವಣಿಗೆಗೆ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ
ದತ್ತಮಾಲ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ್ದ ಅವರು, ನವೆಂಬರ್ 10ರಂದು ನಡೆಯುವ ದತ್ತ ದೀಪೋತ್ಸವ ಹಾಗೂ 13ರಂದು ನಡೆಯುವ ಮೆರವಣಿಗೆಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಕುಡಿಯುವ ನೀರು, ಪಾರ್ಕಿಂಗ್ ಮತ್ತು ಸ್ವಚ್ಛತಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ನಂತರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿದ್ದು, ಅಭಿಯಾನದ ಸಂದರ್ಭದಲ್ಲಿ ಭಿನ್ನ ಕೋಮಿನ ಭಾವನೆಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.












Click it and Unblock the Notifications