ಚಿಕ್ಕಮಗಳೂರಿನಲ್ಲಿ ಇಂದು ಬೃಹತ್ ಶೋಭಾಯಾತ್ರೆ: ಭದ್ರತೆ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್
ಚಿಕ್ಕಮಗಳೂರು, ಡಿಸೆಂಬರ್ '7: ದತ್ತಜಯಂತಿ ಅಂಗವಾಗಿ ಬುಧವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಐಜಿಪಿ ಚಂದ್ರಗುಪ್ತ ಮಂಗಳವಾರ ರಾತ್ರಿ ಚಿಕ್ಕಮಗಳೂರು ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ರಾತ್ರಿ 8:30ಕ್ಕೆ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ಪೊಲೀಸ್ ಹಿರಿಯ ಅಧಿಕಾರಿಗಳು, ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಬಂದೋಬಸ್ತ್ ಅನ್ನು ಪರಿಶೀಲಿಸಿದ್ದಾರೆ. ಬಳಿಕ ದತ್ತಪೀಠಕ್ಕೂ ತೆರಳಿ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ.
ಕಾಫಿನಾಡಿನಲ್ಲಿ ದತ್ತಜಯಂತಿ ಸಂಭ್ರಮ, ಚಿಕ್ಕಮಗಳೂರಿನಲ್ಲಿ ಪೊಲೀಸ್ ಹೈ ಅಲರ್ಟ್
ಇನ್ನು ಮಂಗಳವಾರ ಅನುಸೂಯಾ ಜಯಂತಿ ಹಿನ್ನೆಲೆಯಲ್ಲಿ ಸಂಕೀರ್ತನಾ ಯಾತ್ರೆ ನಡೆದಿದ್ದು, ಮಹಿಳಾ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು. ದತ್ತ ಭಕ್ತರು ದತ್ತಪೀಠಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಕಬ್ಬಿಣದ ಮೊಳೆಗಳು ಪತ್ತೆಯಾಗಿದ್ದು, ಇದು ವಿದ್ವಂಸಕ ಕೃತ್ಯ, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ಕುಮಾರ್ ಹಾಗೂ ಐಜಿಪಿ ಚಂದ್ರಗುಪ್ತ ನಗರಕ್ಕೆ ದಿಢೀರ್ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಬುಧವಾರ ನಡೆಯುವ ಶೋಭಾಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನು ದತ್ತಜಯಂತಿ ಹಿನ್ನೆಲೆಯಲ್ಲಿ ಮಂಗಳವಾರ ಅನಸೂಯ ಜಯಂತಿ, ಬುಧವಾರ ಶೋಭಾಯಾತ್ರೆ ನಡೆಯಲಿದ್ದು, ಗುರುವಾರ ದತ್ತಪಾದುಕೆ ದರ್ಶನ ನಡೆಯಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 4,500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.
ನಗರದಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಓರ್ವ ಎಸ್ಪಿ, ನಾಲ್ವರು ಎ.ಎಸ್.ಪಿ. 17 ಡಿವೈಎಸ್ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆ.ಎಸ್.ಆರ್.ಪಿ, 25 ಡಿ.ಆರ್ ಸೇರಿ ಒಟ್ಟು 4500 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜೊತೆಗೆ 150ಕ್ಕೂ ಹೆಚ್ಚು ಸಿಸಿಟಿವಿಗಳು ಕಾರ್ಯನಿರ್ವಹಿಸಲಿವೆ. ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ಗೆ ಬೆನ್ನೆಲುಬಾಗಿದ್ದಾರೆ.