ಪಾದುಕೆ ದರ್ಶನ ಪಡೆದ ಭಕ್ತರು; ಶಾಂತಿಯುತವಾಗಿ ದತ್ತ ಜಯಂತಿಗೆ ತೆರೆ
ಚಿಕ್ಕಮಗಳೂರು, ಡಿಸೆಂಬರ್ 20; ದತ್ತಜಯಂತಿಯ ಕೊನೆಯ ದಿನವಾದ ಭಾನುವಾರ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ದತ್ತಭಕ್ತರು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿರುವ ದತ್ತಾತ್ರೇಯ ಸ್ವಾಮಿಯ ಪಾದುಕೆ ದರ್ಶನ ಪಡೆಯುವ ಮೂಲಕ ದತ್ತಜಯಂತಿಗೆ ಶಾಂತಿಯುತ ತೆರೆಬಿತ್ತು.
ಭಾನುವಾರ ಮುಂಜಾನೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ದತ್ತ ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ. ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು. ಮಾರ್ಗಮಧ್ಯದಲ್ಲಿರುವ ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿದ ದತ್ತಭಕ್ತರು ಕಾಲ್ನಡಿಗೆಯಲ್ಲಿ ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿದರೆ, ಕೆಲವರು ವಾಹನದಲ್ಲೇ ದತ್ತ ಪೀಠದವರೆಗೂ ಸಾಗಿದರು.
ಭಕ್ತರಿಗೆ ಅನುಕೂಲವಾಗುವಂತೆ ಬ್ಯಾರಿಕೇಡ್ಗಳನ್ನು ಅಳಡಿಸಿ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತ ದತ್ತಭಕ್ತರು ಕಬ್ಬಿಣದ ಜಾಲರಿಯಲ್ಲಿ ಇರುಮುಡಿ ಹೊತ್ತು ಸಾಗಿ ಗುಹೆ ಪ್ರವೇಶಿಸಿದರು. ನಂತರ ಇರುಮುಡಿಯನ್ನು ದೇವರಿಗೆ ಅರ್ಪಿಸಿ, ದತ್ತಪಾದುಕೆ ದರ್ಶನ ಪಡೆದುಕೊಂಡರು.

ಸರತಿ ಸಾಲಿನಲ್ಲಿ ಸಾಗುವಾಗ ಜೈ ಶ್ರೀ ರಾಮ್ ಘೋಷಣೆ, ಭಜನೆ ಕೀರ್ತನೆಗಳನ್ನು ಹಾಡಿದರು. ಪ್ರತಿ ಭಕ್ತರಿಗೆ ಜಿಲ್ಲಾಡಳಿತದಿಂದ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದತ್ತಪಾದುಕೆ ದರ್ಶನ ಪಡೆದುಕೊಂಡ ಭಕ್ತರು, ಗುಹೆಯ ಹೊರಭಾಗದಲ್ಲಿ ನಿರ್ಮಿಸಲಾಗಿದ್ದ ಪೆಂಡಾಲ್ನಲ್ಲಿ ನಡೆದ ಧಾರ್ಮಿಕ ಸಭೆ, ದತ್ತಹೋಮ, ಗಣಪತಿ ಹೋಮದಲ್ಲಿ ಪಾಲ್ಗೊಳ್ಳುವ ಮೂಲಕ ದತ್ತಜಯಂತಿಗೆ ತೆರೆ ಎಳೆದರು.
ಪೊಲೀಸರ ತಪಾಸಣೆ; ಚಿಕ್ಕಮಗಳೂರು ನಗರದಿಂದ ದತ್ತಪೀಠಕ್ಕೆ ತೆರಳುವ ವಾಹನಗಳನ್ನು ಕೈಮರ ಚೆಕ್ ಪೋಸ್ಟ್ನಲ್ಲಿ ಪೊಲೀಸರು ತಪಾಸಣೆ ನಡೆಸಿದ ನಂತರ ದತ್ತಪೀಠಕ್ಕೆ ತೆರಳಲು ಅವಕಾಶ ನೀಡಲಾಯಿತು. ದತ್ತಪೀಠಕ್ಕೆ ತೆರಳುವ ಮಾರ್ಗದದ್ದಕ್ಕೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ದೊಡ್ಡಗಾತ್ರದ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಬಹುತೇಕ ದತ್ತಮಾಲಾಧಾರಿಗಳು ಕಾರು, ಬೈಕ್, ಟಿಟಿವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು.
ದತ್ತಭಕ್ತರು ತಮ್ಮ ವಾಹನಗಳನ್ನು ಕೇಸರಿ ಬಾವುಟ ಮತ್ತು ಭಾಗಧ್ವಜ ಕಟ್ಟಿ, ಹನುಮಂತ ಮತ್ತು ಶ್ರೀರಾಮನ ಪೋಟೋವನ್ನಿಟ್ಟು ಹೂವುಗಳಿಂದ ಅಲಂಕರಿಸಿ ಬೃಹತ್ ಗಾತ್ರದ ಧ್ವನಿವರ್ಧಕಗಳನ್ನು ಅಳವಡಿಸಿ ಜೈ ಶ್ರೀರಾಮ್ ಮತ್ತು ಭಕ್ತಿಗೀತೆಗಳನ್ನು ಹಾಕಿ ಭಾರೀ ಸದ್ದು ಮಾಡುತ್ತಾ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿರುವ ಅತ್ತಿಗುಂಡಿ ಗ್ರಾಮದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದತ್ತ ಜಯಂತಿ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಅಹಿತಕರ ಘಟನೆಗೆ ಅವಕಾಶ ನೀಡದಂತೆ ಹೆಚ್ಚಿನ ಪೊಲೀಸರನ್ನು ನಿಜಯೋಜನೆ ಮಾಡಲಾಗಿತ್ತು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎನ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎಚ್. ಅಕ್ಷಯ್, ಎಎಸ್ಪಿ ಶೃತಿ, ಉಪವಿಭಾಗಾಧಿಕಾರಿ ಡಾ. ಎಚ್. ಎಲ್. ನಾಗರಾಜ್, ತಹಶೀಲ್ದಾರ್ ಡಾ. ಕೆ. ಜೆ. ಕಾಂತರಾಜ್, ಮುಜರಾಯಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಇತರೆ ಅಧಿಕಾರಿಗಳು ಸ್ಥಳದಲ್ಲಿರು.












Click it and Unblock the Notifications