ಹಿಂದೂ- ಮುಸ್ಲಿಂ ಮನಸ್ಥಿತಿಯಿಂದ ಹೊರಬನ್ನಿ, ಸಿ.ಟಿ ರವಿಗೆ ಗೌಸ್ ಮುನೀರ್ ಸಲಹೆ
ಚಿಕ್ಕಮಗಳೂರು, ಅಕ್ಟೋಬರ್, 13: ಗಲಭೆಕೋರರು ಹಾಗೂ ಆತಂಕವಾದಿಗಳೇ ಈ ದೇಶವನ್ನು ಆಳುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದರಿಂದ ದೇಶಕ್ಕೆ ಆತಂಕ ಇದೆಯಾ? ಎಂದು ಪ್ರಶ್ನಿಸಿಸುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಎಸ್.ಡಿ.ಪಿ.ಐ. ಅಧ್ಯಕ್ಷ ಗೌಸ್ ಮುನೀರ್ ಶಾಸಕ ಸಿ.ಟಿ.ರವಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಎಲ್ಲಾ ವಿಚಾರದಲ್ಲೂ ಹಿಂದೂ-ಮುಸ್ಲಿಂ ಎಂದು ಹೇಳಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತೇವೆ
"ಸಿ.ಟಿ.ರವಿ ಅವರೇ, ನೀವು ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗಿ. ಚುನಾವಣೆ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಎಂಬ ಮಾನಸಿಕತೆಯಿಂದ ಹೊರ ಬನ್ನಿ," ಎಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು. ಇನ್ನು ಇದೇ ವೇಳೆ ಹಿಜಾಬ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಭಿನ್ನ-ಭಿನ್ನ ತೀರ್ಪು ನೀಡಿದ್ದಾರೆ. ಭಿನ್ನ ಅಭಿಪ್ರಾಯ ಕೂಡ ಪ್ರಜಾಪ್ರಭುತ್ವದ ಸೌಂದರ್ಯವೇ ಆಗಿದೆ. ನಾವು ಕೋರ್ಟ್ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಗೌಸ್ ಮುನೀರ್, ಹಿಜಾಬ್ ಹಾಕುವುದರಿಂದ ಮತಾಂಧತೆ, ಆತಂಕ ಹೆಚ್ಚು ಎಂದು ಸಿ.ಟಿ.ರವಿ ಹೇಳುತ್ತಿದ್ದಾರೆ. "ಕೋರ್ಟ್ ಕೊಡುವ ತೀರ್ಮಾನದಲ್ಲೂ ಕೂಡ ಇವರಿಗೆ ಆತಂಕ ಇದೆಯಾ? ಹಾಗಾದರೆ ನಿಮ್ಮ ಸರ್ಕಾರ ಅಷ್ಟೊಂದು ವೀಕ್ ಇದೆಯಾ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಸಿ.ಟಿ.ರವಿಯವರು ಪೊಲೀಸರ ನೈತಿಕ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಗಲಭೆಕೋರರೇ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಗುಡುಗಿದ್ದಾರೆ.