ಕೊಪ್ಪದಲ್ಲಿ ರಾತ್ರೋರಾತ್ರಿ ಒಂಟಿ ಮನೆಗೆ ನುಗ್ಗಿ ಸಿನಿಮೀಯ ರೀತಿ ದರೋಡೆ
ಚಿಕ್ಕಮಗಳೂರು, ಮಾರ್ಚ್ 7: ಮಲೆನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೇತೋಟದ ಒಂಟಿ ಮನೆಯಲ್ಲಿ ಸಿನೀಮಿಯ ರೀತಿಯಲ್ಲಿ ದರೋಡೆ ನಡೆದಿದೆ.
ಗುಡ್ಡೇತೋಟದ ವಿಜಯರಾಘವನ್ ಎಂಬುವರ ಒಂಟಿ ಮನೆಗೆ ರಾತ್ರಿ ನುಗ್ಗಿದ 20 ಜನರ ತಂಡ ಮನೆಯ ಬಾಗಿಲನ್ನು ಮುರಿದು ಮನೆಯಲ್ಲಿದ್ದ ನಾಲ್ಕು ಜನರ ಕೈಕಾಲುಗಳನ್ನು ಕಟ್ಟಿಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿ ದರೋಡೆ ನಡೆಸಿದೆ.
Video: ಬ್ಯಾಂಕ್ ಲೂಟಿಗೆ ಬಂದು, ಸೈರನ್ ಸೌಂಡ್ ಗೆ ಕಾಲ್ಕಿತ್ತ ಭೂಪ
ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಎರಡು ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮುಖಕ್ಕೆ ಮಾಸ್ಕ್ ಹಾಕಿ ದರೋಡೆಕೋರರು ದಾಳಿ ನಡೆಸಿರುವುದಾಗಿ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ ಮಾಡಲಾಗಿದ್ದು, ಈಗಾಗಲೇ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಪ್ರಕರಣದಿಂದ ಇಡೀ ಮಲೆನಾಡಿನಲ್ಲಿ ಆತಂಕ ಮನೆಮಾಡಿದೆ.