ಹುಳು ಹಿಡಿಯುತ್ತಿದೆ ರಾಶಿರಾಶಿ ಪರಿಹಾರ ಸಾಮಗ್ರಿ, ಜೊತೆಗೆ ಜಿಲ್ಲಾಡಳಿತ ಕೂಡ
ಚಿಕ್ಕಮಗಳೂರು,
ನವೆಂಬರ್ 16: ಊರಿಗೆ ಊರೇ ನೀರಿನಿಂದ ಆವೃತವಾಗಿತ್ತು. ಉಕ್ಕಿ ಹರಿವ ನದಿ ಎಂದಿಗೆ ತನ್ನ ಆರ್ಭಟ ನಿಲ್ಲಿಸೀತೋ ಎಂದು ಕಾತರಿಸುತ್ತಿದ್ದರು ಜನ. ಹಟ ಬಿಡದಂತೆ ಸುರಿಯುತ್ತಿದ್ದ ಮಳೆ ಮನೆ, ಆಸ್ತಿ-ಪಾಸ್ತಿಗಳನ್ನೂ ಜಪ್ತಿ ಮಾಡಿತ್ತು. ಬರಿಗೈಯಲ್ಲಿ ಸಹಾಯಕ್ಕೆ ಎದುರು ನೋಡುತ್ತಾ ನಿಂತಿದ್ದ ಜನರಲ್ಲಿ ಆ ಹೊತ್ತಿನ ಊಟ ಸಿಕ್ಕರೆ ಸಾಕು ಎಂಬ ಚಿಂತೆಯಷ್ಟೇ ಕಾಣುತ್ತಿತ್ತು. id="toptextpromo"> id='are-slot-1' class='oiad oi-axt oiadv'>ಕೆಲವೇ
ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರನ್ನು ಆವರಿಸಿದ್ದ ಪ್ರವಾಹದ ಚಿತ್ರಣವಿದು. ಉತ್ತರ ಕರ್ನಾಟಕ ಸೇರಿದಂತೆ ಮಲೆನಾಡು ಕೂಡ ಜಲಪ್ರಳಯಕ್ಕೆ ನಲುಗಿ ಹೋಗಿದ್ದನ್ನು ಎಂದಿಗೂ ಜನ ಮರೆಯಲು ಸಾಧ್ಯವಿಲ್ಲ. ಇಲ್ಲಿನವರಿಗೆ ಸಹಾಯ ಹಸ್ತ ಚಾಚಿದವರೂ ಕಡಿಮೆಯಿಲ್ಲ. ನಿರೀಕ್ಷೆಗೂ ಮೀರಿ ನೆರವು ಹರಿದುಬಂದಿತ್ತು. ಆದರೆ ಅಂದು ಜನರ ಹೊಟ್ಟೆ ತುಂಬಿಸಲು ಕೊಟ್ಟಿದ್ದ ಆಹಾರ ಸಾಮಗ್ರಿಗಳು ಎಷ್ಟು ಜನರಿಗೆ ತಲುಪಿದವು? ಚಿಕ್ಕಮಗಳೂರು ಜಿಲ್ಲಾಡಳಿತ ಇವುಗಳನ್ನು ಏನು ಮಾಡಿತು? ಇಲ್ಲಿದೆ ಈ ಕುರಿತ ವರದಿ. id='are-slot-2' class='oiad oi-axt oiadv'>
ಮಲೆನಾಡಿನ ಮೇಲೆ ಮಳೆಗೆ ಮುನಿಸು
ಅದೇಕೋ ಗೊತ್ತಿಲ್ಲ. ಈ ಬಾರಿ ಮಲೆನಾಡಿನ ಮೇಲೆ ಮಳೆ ಮುನಿಸಿಕೊಂಡಂತೆ ಕಾಣುತ್ತಿತ್ತು. ಮಳೆಯಿಂದಾಗಿ ಮಲೆನಾಡಿನಲ್ಲಾದ ನಷ್ಟ ಅಷ್ಟಿಷ್ಟಲ್ಲ. ಎಷ್ಟೋ ಮನೆಗಳು ಕೊಚ್ಚಿ ಹೋದವು. ಬೆಳೆಗಳನ್ನು ತುಂಬಿಕೊಂಡಿದ್ದ ಜಮೀನುಗಳಂತೂ ಲೆಕ್ಕವಿಲ್ಲದಂತೆ ನೀರಿನಲ್ಲಿ ಕರಗಿಹೋದವು. ಬಿಡದೇ ಸುರಿಯುತ್ತಿದ್ದ ಮಳೆ ಮನೆಯೊಳಗೆ ಜನರು ನೆಮ್ಮದಿಯಿಂದ ಕೂರಲೂ ಬಿಡಲಿಲ್ಲ. ತಲೆ ಮೇಲಿನ ಸೂರು ಯಾವ ಕ್ಷಣದಲ್ಲಿ ಕಳಚಿ ಬೀಳುವುದೋ ಎಂಬ ಆತಂಕದಲ್ಲೇ ಕಾಲವನ್ನು ದೂಡಿದರು ಕೆಲವರು. ಎಷ್ಟೋ ಮಂದಿ ಮನೆಗಳನ್ನು ಕಳೆದುಕೊಂಡರು, ಅಷ್ಟೇ ಅಲ್ಲ, ಜೀವಗಳೇ ನೀರುಪಾಲಾದವು.

ಗೋದಾಮಿನಲ್ಲಿ ಕೊಳೆಯುತ್ತಿವೆ ಸಾಮಗ್ರಿ
ಮಲೆನಾಡಿಗರ ನೋವಿಗೆ ಸ್ಪಂದಿಸಿದ ಜನರು ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದುಬಂದಿತು. ಆದರೆ ಆ ನೆರವು ಸಂತ್ರಸ್ತರನ್ನು ತಲುಪಿದೆಯೇ? ರಾಶಿ ರಾಶಿ ಬಂದ ಆಹಾರ ಸಾಮಗ್ರಿಗಳು ಎಲ್ಲಿ ಹೋದವು? ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಮಗ್ಗಲಲ್ಲೇ ಇರುವ ವಾರ್ತಾ ಇಲಾಖೆ ಗೋದಾಮಿನಲ್ಲಿ ಟನ್ ಗಟ್ಟಲೆ ಪರಿಹಾರ ಸಾಮಗ್ರಿಗಳು ಕೊಳೆಯುತ್ತಿವೆ. ಪ್ರವಾಹ ಕಳೆದು ನಾಲ್ಕು ತಿಂಗಳಾದರೂ ಈ ನೆರವನ್ನು ನಿರಾಶ್ರಿತರಿಗೆ ಜಿಲ್ಲಾಡಳಿತ ತಲುಪಿಸಿಯೇ ಇಲ್ಲ. ಅಧಿಕಾರಿಗಳ ಅಸಡ್ಡೆಗೆ ಇದಕ್ಕಿಂತ ಉದಾಹರಣೆ ಬೇರೆ ಬೇಕೆ?

ಹುಳು ಹಿಡಿಯುತ್ತಿರುವ ಅಕ್ಕಿ, ಬೇಳೆಕಾಳು
ಜಲಪ್ರಳಯಕ್ಕೆ ಸಿಕ್ಕ ಮಲೆನಾಡಿನ ಹಲವು ಗ್ರಾಮಗಳು ಇಂದಿಗೂ ಸಂಕಷ್ಟದ ಜೀವನ ಸಾಗಿಸುತ್ತಿವೆ. ಪರಿಹಾರ ಕೇಂದ್ರದಿಂದ ಹೊರಕಳಿಸಿದ ಸರ್ಕಾರ, ಬಾಡಿಗೆ ಹಣವನ್ನೂ ಸರಿಯಾಗಿ ನೀಡುತ್ತಿಲ್ಲ. ಪರಿಹಾರ ಕೇಂದ್ರದಿಂದ ಹೊರಬಂದ ಜನ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವಾರ್ತಾ ಇಲಾಖೆಯಲ್ಲಿ ನೆರವಾಗಿ ಬಂದ ಅಕ್ಕಿ, ಬೇಳೆಕಾಳು ಸೇರಿದಂತೆ ಕೆಲ ಆಹಾರ ಪದಾರ್ಥಗಳನ್ನು ಹುಳು ತಿನ್ನುತ್ತಿವೆ. ಜನ ಕಳಿಸಿದ್ದ ಆಹಾರ ಸಾಮಗ್ರಿಗಳನ್ನು ಯಾರಿಗೂ ಪೂರೈಕೆ ಮಾಡಲಾಗಿಲ್ಲ. ಅಗತ್ಯವಿದ್ದವರಿಗೆ ಅವುಗಳನ್ನು ನೀಡುವ ಬದಲು ಕೊಳೆಸಲಾಗುತ್ತಿದೆ. ಹೊಟ್ಟೆ ತುಂಬಿದ ಅಧಿಕಾರಿಗಳು ನಮ್ಮ ಹಸಿವು ಕೇಳಿಸಿಕೊಳ್ಳುವರೇ? ತಿನ್ನುವ ಅನ್ನಕ್ಕೆ ಹುಳ ಹಿಡಿಸಿದ್ದಾರೆಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಾಯ ಮಾಡಿದವರಿಗೆ ಜಿಲ್ಲಾಡಳಿತ ಕೊಟ್ಟ ಸಂದೇಶವೇನು?
ಪ್ರಕೃತಿಯ ವಿಕೋಪದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ಸ್ಥಳಾಂತರ ಮಾಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಮತ್ತೆ ಮೌನಕ್ಕೆ ಶರಣಾಗಿದೆ. ಸ್ಥಳಾಂತರಕ್ಕೆ ಸರ್ಕಾರದ ಷರತ್ತುಗಳನ್ನು ಕೇಳಿದ ಸಂತ್ರಸ್ತರಿಗೆ ಅಡಕತ್ತರಿಯಲ್ಲಿ ಸಿಕ್ಕಿರುವ ಅನುಭವವಾಗಿದೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಅಧಿಕಾರಿಗಳ ವರ್ತನೆ. ಅಷ್ಟೇ ಅಲ್ಲದೇ, ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಒಂದೇ ಉದ್ದೇಶದಿಂದ ತಮ್ಮ ಕಷ್ಟಗಳ ನಡುವೆಯೂ ಪರಿಹಾರ ಸಾಮಗ್ರಿಗಳನ್ನೂ ಎಲ್ಲೆಲ್ಲಿಂದಲೋ ಕಳುಹಿಸಿದ್ದ ಜನರಿಗೆ ಜಿಲ್ಲಾಡಳಿತದ ಈ ವರ್ತನೆ ಯಾವ ರೀತಿ ಸಂದೇಶವನ್ನು ರವಾನಿಸಲಿದೆ?












Click it and Unblock the Notifications