ಚಿಕ್ಕಮಗಳೂರು, ಚಿತ್ರದುರ್ಗ ಸುದ್ದಿ; ಕ್ಯಾಬ್ ಚಾಲಕನಿಗೆ ಥಳಿತ, ಅಪಘಾತ
ಚಿಕ್ಕಮಗಳೂರು, ನವೆಂಬರ್27 : ಶಾಲಾ ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಿದ ಕ್ಯಾಬ್ ಚಾಲಕನನ್ನು ಕಂಬಕ್ಕೆ ಕಟ್ಟಿ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಡೂರು ತಾಲೂಕಿನ ರಾಜಪ್ಪ ಎನ್ನುವಾತ ಕಡೂರಿನಿಂದ ಶಿಕ್ಷಕರನ್ನು ತನ್ನ ವ್ಯಾನ್ನಲ್ಲಿ ಸಿದ್ದರಹಳ್ಳಿಗೆ ಕರೆದುಕೊಂಡು ಬಂದು ಸಂಜೆ ಮತ್ತೆ ಕರೆದೊಯ್ಯುತ್ತಿದ್ದರು. ಹೀಗೆ ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ ರಾಜಪ್ಪ, ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಮುರುಘಾ ಶ್ರೀ ಪ್ರಕರಣ: ಎಡಿಜಿಪಿಗೆ ಪತ್ರ ಬರೆದ ಮಠದ ವಕ್ತಾರ
ಶಾಲೆಯೊಳಗೆ, ಬಾತ್ ರೂಮಿನಲ್ಲಿ ವಿದ್ಯಾರ್ಥಿಗಳ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಶಾಲೆಯ ಶಿಕ್ಷಕರ ಬಳಿ ಹೇಳಿಕೊಂಡಿದ್ದಾರೆ. ಶಿಕ್ಷಕರು ನಿಮ್ಮ ಅಪ್ಪ-ಅಮ್ಮನಿಗೆ ತಿಳಿಸುವಂತೆ ಹೇಳಿದ್ದಾರೆ. ಬಳಿಕ ಪೋಷಕರು ಎಸ್ಡಿಎಂಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
ಆಗ ಶಾಲಾ ಆಡಳಿತ ಮಂಡಳಿ ಕ್ಯಾಬ್ ಚಾಲಕ ರಾಜಪ್ಪನನ್ನು ಕರೆಸಿ ವಿಚಾರಣೆ ನಡೆಸಿದೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ರೊಚ್ಚಿಗೆದ್ದು, ಕ್ಯಾಬ್ ಚಾಲಕನ್ನನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಆರೋಪಿ ಕ್ಯಾಬ್ ಚಾಲಕ ರಾಜಪ್ಪ ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು; ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಕೈನಡು ಗ್ರಾಮದ ಗಿರೀಶ್ (38) ವರ್ಷ, ರವಿಚಂದ್ರ (26) ಹಾಗೂ ವೀರಪ್ಪ (50) ವರ್ಷ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕೈನಡು ಬಳಿ ವೇಗವಾಗಿ ಬಂದ ಟ್ಯಾಂಕರ್ ಬೈಕ್ಗೆ ಡಿಕ್ಕಿಯಾಗಿದೆ. ಅಪಘಾತಕ್ಕೆ ಟ್ಯಾಂಕರ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಸಿಪಿಐ ಶ್ರೀಧರ್ ಶಾಸ್ತ್ರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.