ಆಗಸ್ಟ್ 14ರವರೆಗೂ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತ
ಚಿಕ್ಕಮಗಳೂರು, ಆಗಸ್ಟ್ 10: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಗುಡ್ಡ ಕುಸಿತ, ಭೂಕುಸಿತದ ಅವಘಡಗಳು ಇನ್ನೂ ಮುಂದುವರೆಯುತ್ತಿರುವ ಕಾರಣ ಚಾರ್ಮಾಡಿ ಘಾಟ್ ಸಂಚಾರವನ್ನು ಆಗಸ್ಟ್ 14ರವರೆಗೂ ನಿರ್ಬಂಧಿಸಲಾಗಿದೆ.
ಈ ಮಾರ್ಗದಲ್ಲಿ ಪದೇ ಪದೇ ಗುಡ್ಡ ಕುಸಿತ ಉಂಟಾಗುತ್ತಿರುವುದರಿಂದ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಘಾಟ್ ನ ಹಲವೆಡೆ ಗುಡ್ಡಗಳು ಕುಸಿದ ಕಾರಣ ಕಳೆದ ನಾಲ್ಕು ದಿನಗಳಿಂದಲೂ ಚಾರ್ಮಾಡಿ ಘಾಟ್ ನಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಗುಡ್ಡ ಕುಸಿತವಾದ ಕಡೆ ಮಣ್ಣು ತೆರವು ಕಾರ್ಯಾಚರಣೆಯೂ ನಡೆಯುತ್ತಲೇ ಇದೆ. ಒಂದರ ನಂತರ ಒಂದರಂತೆ ಗುಡ್ಡ ಕುಸಿಯುತ್ತಿರುವುದರಿಂದ ತೆರವು ಕಾರ್ಯಾಚರಣೆಯೂ ವಿಳಂಬವಾಗುತ್ತಿದೆ. ಮಳೆ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಆಗಸ್ಟ್14ರವರೆಗೂ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಭದ್ರಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ನೀರಿನ ಆರ್ಭಟಕ್ಕೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿ ಖಾಂಡ್ಯ- ಬಾಳಗದ್ದೆ ತೂಗು ಸೇತುವೆ ಕೊಚ್ಚಿಹೋಗಿದೆ. ಹೀಗಾಗಿ ಬಾಳಗದ್ದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಭದ್ರಾ ನದಿ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಈ ಸೇತುವೆ ಕೊಚ್ಚಿ ಹೋಗಿರುವುದು ಐವತ್ತಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ.












Click it and Unblock the Notifications