ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ ಪ್ರಕರಣ: 7 ಜನರ ಬಂಧನ
ಚಿಕ್ಕಮಗಳೂರು, ಸೆಪ್ಟೆಂಬರ್ 3: "ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಲಾಗಿದೆ," ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದರು.
ಶುಕ್ರವಾರ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಎಂ.ಎಚ್. ಅಕ್ಷಯ್, "ಚಿಕ್ಕಮಗಳೂರು ತಾಲ್ಲೂಕಿನ ಕಂಬಿಹಳ್ಳಿ ಬಳಿ ಡಿ.ವಿ. ಗಿರೀಶ್ ಮತ್ತು ಸ್ನೇಹಿತರು ಜೀಪ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲ ಯುವಕರು ಮದ್ಯದ ಅಮಲಿನಲ್ಲಿ ಜೀಪಿನಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ಚುಡಾಯಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಇದನ್ನು ಪ್ರಶ್ನಿಸಿದಕ್ಕೆ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದರು. ಬಾಲಕಿಯ ಕೈಹಿಡಿದು ಎಳೆದಾಡಲು ಮುಂದಾಗಿದ್ದರು ಎಂಬ ಆರೋಪದ ಮೇಲೆ 7 ಮಂದಿಯನ್ನು ಬಂಧಿಸಲಾಗಿದೆ," ಎಂದು ಹೇಳಿದರು.
"ಬಂಧಿತ ಆರೋಪಿಗಳು ಟಿಂಬರ್, ಗಣಿ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡು ರಾಜ್ಯದ ವಿವಿಧೆಡೆ ಸಂಚರಿಸುತ್ತಿದ್ದರು. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ಇನ್ಸ್ಪೆಕ್ಟರ್ ಜಿ.ಎನ್. ಸ್ವರ್ಣ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ಕುಮಾರ್ ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾದ ಪಿಎಸ್ಐ ರಫೀಕ್, ಪ್ರೋಬೆಷನರಿ ಡಿವೈಎಸ್ಪಿ ಜಿ. ತಲಕಟ್ಟಿಯವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು," ಎಂದರು.

"ಪೊಲೀಸರ ತಂಡ ಇಬ್ಬರನ್ನು ಬಳ್ಳಾರಿಯಲ್ಲಿ, ಮೂವರನ್ನು ಬೆಂಗಳೂರಿನಲ್ಲಿ, ಸಂತವೇರಿಯಲ್ಲಿ ಓರ್ವ ಆರೋಪಿ ಸೇರಿದಂತೆ 7 ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ," ಎಂದರು.
"ಆರೋಪಿಗಳು ಹೊಸಪೇಟೆ, ಸಂತವೇರಿ ಹಾಗೂ ಕಂಬಿಹಳ್ಳಿಯವರಾಗಿದ್ದು, ಪ್ರವಾಸಿಗರಿಗೆ, ದಾರಿ ಹೋಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಪ್ರಾಪ್ತ ಬಾಲಕಿಯನ್ನು ನಿಂದಿಸಿ ಕೈಹಿಡಿದು ಎಳೆದಾಡಲು ಮುಂದಾದ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳೀಯರು ಈ ರೀತಿಯ ವರ್ತನೆ ತೋರುವುದು ಜಿಲ್ಲೆಗೆ ಕಪ್ಪುಚುಕ್ಕೆಯಿದ್ದಂತೆ. ಇಂತಹ ಹಲ್ಲೆ, ದೌರ್ಜನ್ಯಗಳಿಗೆ ಕಾನೂನು ಕ್ರಮದ ಮೂಲಕ ಕಡಿವಾಣ ಹಾಕಲಾಗುವುದು," ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಎನ್. ಸ್ವರ್ಣ, ಗ್ರಾಮಾಂತರ ಠಾಣೆ ಪಿಎಸ್ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್ಪಿ ಜಿ. ತಲಕಟ್ಟಿ ಇದ್ದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಎಸ್ಐ ಸುರೇಶ್, ಸಿಬ್ಬಂದಿ ಹಾಲಪ್ಪ, ರಮೇಶ್, ಭರತ್, ಭೂಷಣ್, ಸಿದ್ದೇಶ, ಗಿರೀಶ್, ಮಂಜುನಾಥ, ನಾಗರತ್ನಮ್ಮ ಬಸವರಾಜ್ ತಂಡಕ್ಕೆ ಪೊಲೀಸ್ ಪ್ರಶಂಸನ ಪತ್ರ ನೀಡಿ ಗೌರವಿಸಲಾಯಿತು.
ಏನಿದು ಹಲ್ಲೆ ಪ್ರಕರಣ?
ಕ್ಷುಲಕ ಕಾರಣಕ್ಕೆ ಯುವಕರ ಗುಂಪೊಂದು ಪರಿಸರವಾದಿ ಡಿ.ವಿ. ಗಿರೀಶ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಜೀಪನ್ನು ಅಡ್ಡಗಟ್ಟಿ ಥಳಿಸಿರುವ ಘಟನೆ ಸೋಮವಾರ (ಆ.೩೦) ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಡಿ.ವಿ. ಗಿರೀಶ್ ಮತ್ತು ಸ್ನೇಹಿತರು ಜೀಪ್ನಲ್ಲಿ ಆಗಸ್ಟ್ 30 ರಂದು ಕೆಮ್ಮಣ್ಣಗುಂಡಿ ಸಮೀಪದ ಕ್ರಿಸ್ಟೋಫರ್ ಕಟ್ಟೆಹೊಳೆ ಎಸ್ಟೇಟ್ಗೆ ಹೋಗಿ ಸಂಜೆ 5 ಗಂಟೆ ಸಮಯದಲ್ಲಿ ವಾಪಸ್ ಬರುವಾಗ ಸಂತವೇರಿ 2ನೇ ತಿರುವಿನ ರಸ್ತೆ ಬದಿಯಲ್ಲಿ 8 ಜನ ಯುವಕರ ಗುಂಪು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು.
ಜೀಪ್ ಯುವಕರ ಗುಂಪಿನ ಸಮೀಪಕ್ಕೆ ಬರುತ್ತಿದ್ದಂತೆ ಜೀಪ್ನಲ್ಲಿದ್ದ ಸ್ನೇಹಿತನ ಮಗಳಿಗೆ ಚುಡಾಯಿಸಿದ್ದು, ಇದರಿಂದ ಕುಪಿತರಾದ ಡಿ.ವಿ. ಗಿರೀಶ್ ಮತ್ತು ಅವರ ಸ್ನೇಹಿತರು ಯುವಕರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಮಾತನಾಡಿದ್ದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ. ಯುವಕರ ತಂಡ ಪಾನಮತ್ತರಾಗಿದ್ದ ಕಾರಣ, ವಿಚಾರವನ್ನು ಅಲ್ಲಿಗೆ ಕೊನೆಗೊಳಿಸಿ ಜೀಪ್ನಲ್ಲಿ ಪ್ರಯಾಣವನ್ನು ಮುಂದುವರೆಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಯುವಕರ ಗುಂಪು ಜೀಪನ್ನು ಹಿಂಬಾಲಿಸಿಕೊಂಡು ಬಂದು ಕಂಬಿಹಳ್ಳಿ ಬಳಿ ಜೀಪ್ ಅಡ್ಡಗಟ್ಟಿ ಡಿ.ವಿ. ಗಿರೀಶ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಜೀಪ್ನಲ್ಲಿದ್ದ ಸ್ನೇಹಿತನ ಮಗಳ ಕೈಹಿಡಿದು ಎಳೆದಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದರು.
ಈ ಪ್ರಕರಣ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಹಲ್ಲೆ ನಡೆಸಿದವರ ಪತ್ತೆಗೆ ಶೋಧಕಾರ್ಯ ಕೈಗೊಂಡಿದ್ದರು.
ಇನ್ನು ಪರಿಸರ ಉಳಿವಿಗಾಗಿ ಅನೇಕ ವರ್ಷಗಳಿಂದ ಡಿ.ವಿ. ಗಿರೀಶ್ ಶ್ರಮಿಸುತ್ತಿದ್ದು, ಅವರ ಮೇಲಿನ ಹಲ್ಲೆಗೆ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ್ ಜೋಷಿ, ಗೌರವ ವನ್ಯಜೀವಿ ಪರಿಪಾಲಕ ಜಿ. ವಿರೇಶ್, ಸೇರಿದಂತೆ ಹಲವು ಸಂಘಟನೆಗಳು, ಪರಿಸರಾಸಕ್ತರು ಹಾಗೂ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದರು.
Recommended Video
ಪರಿಸರ ಹೋರಾಟಗಾರರಿಗೆ ರಕ್ಷಣೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications