ನಾಯಿಯಂತೆ ಬಾಲ ಅಲ್ಲಾಡಿಸಿಕೊಂಡು ಕುಂಯಿ.. ಕುಂಯಿ.. ಅಂತಾ ಬರೋದು ಕಾಂಗ್ರೆಸ್ನ ಸಂಸ್ಕೃತಿ: ಸಿ.ಟಿ. ರವಿ
ಚಿಕ್ಕಮಗಳೂರು, ಜನವರಿ, 05: ಮುಖ್ಯಮಂತ್ರಿ ಬಾಲ ಅಲ್ಲಾಡಿಸಿಕೊಂಡು ಬರುವ ಸಂಸ್ಕೃತಿ ಕಾಂಗ್ರೆಸ್ನಲ್ಲಿ ಮಾತ್ರ ಇರುವುದು. ಆ ರೀತಿಯ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯನ್ನು ತಮ್ಮ ಆಡಳಿತದ ಪಾಲಿದಾರರು ಎಂದು ಭಾವಿಸುತ್ತಾರೆ ಅಂತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಮರಿ ಇದ್ದಂತೆ ಎಂಬ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ತಿರುಗೇಟು ನೀಡಿದ ಸಿ.ಟಿ.ರವಿ, ನಾಯಿಬಾಲ ಅಲ್ಲಾಡಿಸಿದಂತೆ ಕುಂಯಿ, ಕುಂಯಿ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನು ಅವರ ಹೈಕಮಾಂಡ್ ಹಾಗೆಯೇ ನಡೆಸಿಕೊಳ್ಳುವುದು ಎಂದರು. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬುದು ಲಕೋಟೆಯಲ್ಲಿ ಬರುವ ಪದ್ಧತಿ ಇದೆ. ನಮ್ಮಲ್ಲಿ ಆ ರೀತಿ ಇಲ್ಲ. ರಾಜ್ಯ ಕಂಡ ಅಪರೂಪದ ಪ್ರಭಾವಿ ನಾಯಕರಾಗಿದ್ದ ವಿರೇಂದ್ರ ಪಾಟೀಲ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಿಕೊಂಡು ವಾಪಾಸ್ ಹೋಗುವಾಗ ರಾಜೀವ್ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸುವ ಆದೇಶ ನೀಡಿ ಹೋಗಿದ್ದರು ಎಂದು ಟೀಕಿಸಿದರು.
ಪ್ರತಿಯೊಬ್ಬರಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮೊದಲ ಬಾರಿ ನೀತಿ ಆಯೋಗದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಮುಂದಿನ ಯೋಜನೆಗಳನ್ನು ರೂಪಿಸುವ ಪಾಲುದಾರಿಕೆ ಸಿಕ್ಕಿದೆ. ಜಿಎಸ್ಟಿ ಕೌನ್ಸಿಲ್ನಲ್ಲಿ ತೆರಿಗೆ ಸುಧಾರಣೆ ಮತ್ತು ನೀತಿ ನಿರೂಪಣೆಗಳ ಬಗ್ಗೆ ತೀರ್ಮಾನ ನಡೆಯುತ್ತದೆ. ಇಲ್ಲಿ ಮುಖ್ಯಮಂತ್ರಿಗಳೂ ಸೇರಿದಂತೆ ರಾಜ್ಯದ ಹಣಕಾಸು ಇಲಾಖೆ ಸಚಿವರು ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಕಾಂಗ್ರೆಸ್ನಂತಹ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಸಿದ್ದರಾಮಯ್ಯ ಅವರು ಹಾಗೆ ಭಾವಿಸಿರಬಹುದು, ಅದು ಅವರ ತಪ್ಪು ಕಲ್ಪನೆಯಾಗಿದೆ. ಹಾಗೆಯೇ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚುನಾವಣಾ ರಾಜಕೀಯದಿಂದ ದೂರವಿದ್ದು, ಅವರು ಅನುಭವಿ, ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ಹಾಗೆಯೇ ಅವರು ಮಾರ್ಗದರ್ಶನ ಮಾಡುತ್ತಾರೆ. ಅವರ ನಿವೃತ್ತಿ ಬಗ್ಗೆ ನನಗೆ ತಿಳಿದಿಲ್ಲ ಎಂದರು.

ಪಕ್ಷದ ನಿರ್ಣಯವನ್ನು ಪಾಲಿಸುತ್ತೇನೆ
ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡದೇ ಲವ್ ಜಿಹಾದ್ ತಡೆಯಲು ಗಮನಹರಿಸಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೇಳಿಕೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಅವರು, ಈ ಸಂಬಂಧ ನನಗೆ ತಿಳಿದಿಲ್ಲ. ಯಾವ ವೇದಿಕೆಯಲ್ಲಿ ಅವರು ಹೇಳಿದ್ದಾರೆ ಎಂದು ಗೊತ್ತಿಲ್ಲ. ಆದ್ದರಿಂದ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಇನ್ನು ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಟಿಕೆಟ್ ಬಯಸಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಆಕಾಶ ನೋಡಲು ನೂಕು ನುಗ್ಗಲು ಮಾಡಬೇಕೇ? ಟಿಕೆಟ್ ಅನ್ನು ಎಲ್ಲಾ ಕಾರ್ಯಕರ್ತರು ಕೇಳಬಹುದು, ಅದಕ್ಕೆ ಅವಕಾಶವಿದೆ. ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶವಿದೆ. ಅದರಲ್ಲಿ ತಪ್ಪಿಲ್ಲ. ಅವರು ಕೇಳುವ ಮುಂಚೆಯೇ ನನಗೂ ತಿಳಿಸಿದ್ದರು. ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷ ನಿರ್ಧಾರ ಮಾಡುತ್ತದೆ. 1994 ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಟಿಕೆಟ್ ಕೇಳಿಲ್ಲ. ಪಕ್ಷದ ಅಪೇಕ್ಷೆ ಮೇರೆಗೆ ಮಂತ್ರಿಗಿರಿಯನ್ನೇ ಬಿಟ್ಟಿದ್ದೇನೆ. ಪಾರ್ಟಿ ನಿರ್ಣಯವನ್ನು ಪಾಲಿಸುತ್ತೇನೆ ಎಂದರು.












Click it and Unblock the Notifications