20 ವರ್ಷಗಳ ಬಳಿಕ ಸಿ.ಟಿ ರವಿ ವಿರುದ್ಧ ಬಂಡಾಯದ ಕಹಳೆ: ಟಿಕೆಟ್ಗಾಗಿ ಮನವಿ ಮಾಡಿದ ಕಾರ್ಯಕರ್ತ
ಚಿಕ್ಕಮಗಳೂರು, ಜನವರಿ 3: 20 ವರ್ಷಗಳಿಂದ ಕಾಫಿನಾಡಲ್ಲಿ ಎದುರಾಳಿಯೇ ಇಲ್ಲದೆ ಇರುವ ಶಾಸಕ ಎಂದು ಕರೆಸಿಕೊಂಡಿದ್ದ ಶಾಸಕ ಸಿ.ಟಿ ರವಿ ವಿರುದ್ಧ ಮೊದಲ ಬಾರಿಗೆ ಬಂಡಾಯ ಆರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿದೆ.
15 ವರ್ಷದಿಂದ ಬಾವುಟ ಕಟ್ಟಿದ್ದೇನೆ, ಪಕ್ಷ ಕಟ್ಟಿದ್ದೇನೆ. ನಗರಸಭೆಯಲ್ಲಿ ಅಧ್ಯಕ್ಷನಾಗಿ ನಾಲ್ಕು ಬಾರಿ ಸದಸ್ಯನಾಗಿದ್ದೇನೆ. ನಮಗೂ ಒಂದು ಅವಕಾಶ ನೀಡಿ ಎಂದು ಜಿಲ್ಲಾಧ್ಯಕ್ಷರಿಗೆ ಬಿಜೆಪಿ ಮುಖಂಡರೊಬ್ಬರು ಮನವಿ ಮಾಡಿದ್ದಾರೆ.
ಚಿಕ್ಕಮಗಳೂರಲ್ಲಿ ಬಿಜೆಪಿ ಅಂದರೆ ಸಿ.ಟಿ.ರವಿ, ಸಿ.ಟಿ.ರವಿ ಅಂದರೆ ಬಿಜೆಪಿ ಎಂಬಂತಿತ್ತು. ಆದರೆ ಈ ಬಾರಿ ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಮೊದಲ ಬಾರಿಗೆ ಬಿಜೆಪಿಯಲ್ಲಿ ಸಿ.ಟಿ ರವಿಗೆ ಬದಲು ತಮಗೂ ಒಂದು ಅವಕಾಶ ನೀಡಿ, ನಮಗೂ ಟಿಕೆಟ್ ಕೊಡಿ ಎಂದು ಬಿಜೆಪಿ ಮುಖಂಡ ಎಚ್.ಡಿ ತಿಮ್ಮಯ್ಯ ಮನವಿ ಮಾಡಿದ್ದಾರೆ.

ತಮ್ಮಯ್ಯ ಲಿಂಗಾಯಿತ ಸಮುದಾಯದ ಮುಖಂಡರಾಗಿದ್ದಾರೆ. 15 ಸಾವಿರ ಮತವಿರುವ ಒಕ್ಕಲಿಗ ಸಮುದಾಯದ ಸಿ.ಟಿ.ರವಿಯೇ ನಾಲ್ಕು ಬಾರಿ ಶಾಸಕರಾದರೆ, 40 ಸಾವಿರಕ್ಕೂ ಹೆಚ್ಚು ಮತವಿರುವ ಲಿಂಗಾಯಿತ ಸಮುದಾಯ ವ್ಯಕ್ತಿ ಏಕೆ ಶಾಸಕರಾಗಬಾರದು ಎಂಬ ಕಾರಣಕ್ಕೆ ತಮ್ಮಯ್ಯ ಟಿಕೆಟ್ ಕೇಳಿರಬಹುದು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಆದರೆ 15 ವರ್ಷಗಳಿಂದ ಸಿ.ಟಿ.ರವಿಯ ಜೊತೆಗೆ ಇರುವ ಎಚ್.ಡಿ ತಿಮ್ಮಯ್ಯ ಈ ಬಾರಿ ನಾನೂ ಟಿಕೆಟ್ ಆಕಾಂಕ್ಷಿ. ನನಗೆ ಟಿಕೆಟ್ ನೀಡಬೇಕೆಂದು ಜಿಲ್ಲಾಧ್ಯಕ್ಷರ ಬಳಿ ಮನವಿ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಲಿಂಗಾಯಿತ ಸಮುದಾಯದ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಬಿಜೆಪಿ ಕಚೇರಿ ಪಾಂಚಜನ್ಯಕ್ಕೆ ಬಂದ ಎಚ್.ಡಿ ತಿಮ್ಮಯ್ಯ, ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನನ್ನ ಭೇಟಿಯಾಗಿ ಟಿಕೆಟ್ಗಾಗಿ ಮನವಿ ಮಾಡಿದ್ದಾರೆ. ನಾನು 15 ವರ್ಷದಿಂದ ಪಕ್ಷ ಕಟ್ಟಿ ಬೆಳೆಸಿದ್ದೇನೆ. ವಿವಿಧ ಹುದ್ದೆ ನಿಭಾಯಿಸಿದ್ದೇನೆ. ಹೀಗಾಗಿ ಈ ಬಾರಿ ನನಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮಯ್ಯ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, 'ನಮ್ಮಲ್ಲಿ ಅರ್ಜಿ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲ. ಜಿಲ್ಲಾ ಕೋರ್ ಕಮಿಟಿ ಹಾಗೂ ರಾಜ್ಯ ತಂಡ ಚರ್ಚೆ ಮಾಡುತ್ತದೆ. ಅಂತಿಮವಾಗಿ ಟಿಕೆಟ್ ಫೈನಲ್ ಮಾಡುವುದು ಪಾರ್ಲಿಮೆಂಟರಿ ಬೋರ್ಡ್. ಆದರೆ, ನಾನು ಆಕಾಂಕ್ಷಿ. ನನ್ನನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರೂ ನಾನು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಮನುಷ್ಯನ ಮನಸ್ಸು ನಿರಂತರವಾಗಿ ಹರಿಯುವ ನೀರು. ಅವರ ಅಪೇಕ್ಷೆಯೂ ತಪ್ಪಲ್ಲ. ಬಿಜೆಪಿಯಲ್ಲಿ ಆಂತರಿಕ ಬೇಗುದಿ ಎನ್ನುವುದಿಲ್ಲ. ಫೈನಲ್ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ಒಟ್ಟಾರೆ ಚಿಕ್ಕಮಗಳೂರಲ್ಲಿ 20 ವರ್ಷದಿಂದ ನಾಲ್ಕು ಬಾರಿ ಗೆದ್ದು ಐದನೇ ಬಾರಿಗೆ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದ ಸಿ.ರವಿಗೆ ಬಿಜೆಪಿ ವಲಯದಲ್ಲಿಯೇ ಎದುರಾಳಿ ಹುಟ್ಟಿಕೊಂಡಿರುವುದು ತೀವ್ರ ಸಂಚಲನ ಮೂಡಿಸಿದೆ. ಆದರೆ ಶಾಸಕ ಸಿ.ಟಿ ರವಿ ಬಿಟ್ಟರೇ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಗೆಲುವು ಕಷ್ಟ ಎನ್ನುವುದು ಕೆಲ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.












Click it and Unblock the Notifications