ಕುರುಬ ಸಮುದಾಯ ಅವಹೇಳನ ಮಾಡಿದ ಸಿ ಟಿ ರವಿಯವರಿಗೆ ಎಚ್ಚರಿಕೆ ಸಂದೇಶ
ಚಿಕ್ಕಮಗಳೂರು, ನವೆಂಬರ್ 2: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಶಾಸಕ ಸಿ.ಟಿ.ರವಿ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ಕುರುಬ ಸಮಾಜವನ್ನು ಅಪಮಾನ ಮಾಡಿದ್ದಾರೆ. ಸಿ.ಟಿ.ರವಿ ಸಮುದಾಯದ ಕ್ಷಮೆ ಕೆಳಬೇಕು ಇಲ್ಲದಿದ್ದರೇ ಮುಂಬರುವ ದಿನಗಳಲ್ಲಿ ಸಮುದಾಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಎಚ್ಚರಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಕುರುಬರ ಸಂಘ ಮತ್ತು ತಾಲ್ಲೂಕು ಕುರುಬರ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ಹನುಮಂತಪ್ಪ ವೃತ್ತದಿಂದ ಆಜಾದ್ಪಾರ್ಕ್ ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆಸಿ ಶಾಸಕ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಜಾದ್ಪಾರ್ಕ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
'ಟೊಪ್ಪಿ ಧರಿಸಲು ಯಾರಿಗೆ ಹುಟ್ಟಿರಬೇಕು'? ಸಿ.ಟಿ. ರವಿ ಟ್ವೀಟ್
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲಾ ಸಮುದಾಯಕ್ಕೆ ಸೇರಿದವರು. ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಂತವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಗೆ ಮಹತ್ವವಿದೆ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿ.ಟಿ.ರವಿ ಸಂಸ್ಕಾರವನ್ನು ಮರೆತು ನಾಲಿಗೆ ಹರಿಬಿಟ್ಟಿದ್ದು, ಜಿಲ್ಲೆಯ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸಿದ್ಧರಾಮಯ್ಯ ಅನ್ಯಧರ್ಮದ ಟೋಪಿ ಹಾಕಿದ್ದಕ್ಕೆ ಅವರ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದಾರೆ. ಅವರ ಪಕ್ಷದ ನಾಯಕರು ಅನ್ಯಧರ್ಮದ ಟೋಪಿ ಹಾಕಿದ್ದಾರಲ್ಲ ಸಿ.ಟಿ.ರವಿ ಅದರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಕ್ಷಮೆ ಕೇಳದಿದ್ದರೆ ರಾಜಕೀಯ ಅವನತಿ:
ತಮ್ಮ ತಪ್ಪು ಅರಿತು ಸಮುದಾಯದ ಕ್ಷಮೆ ಕೇಳುವ ಬದಲು ತಮ್ಮ ಹಿಂಬಾಲಕರನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿದ್ದು, ಇದು ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಚಾರವಾಗಿದೆ. ಅವರು ಸಮುದಾಯದ ಕ್ಷಮೆ ಕೇಳಬೇಕು. ಮುಂದಿನ ದಿನಗಳಲ್ಲಿ ಇದೇ ರೀತಿ ತಮ್ಮ ನಾಲಿಗೆಯನ್ನು ಹರಿಬಿಟ್ಟರೇ, ಸಮುದಾಯದವರು ಸಹಿಸಲು ಸಾಧ್ಯವಿಲ್ಲ. ರಾಜಕೀಯವಾಗಿ ಅವನತಿ ಕಾಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಧೈರ್ಯವಿದ್ದರೆ ಪ್ರಧಾನಮಂತ್ರಿಯನ್ನು ಪ್ರಶ್ನೆ ಮಾಡಲಿ:
ಆರ್ಎಸ್ಎಸ್ ಹಿನ್ನೆಲೆ ಉಳ್ಳವರು ಮಾತು ಎತ್ತಿದರೆ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಮೊದಲು ಸಿ.ಟಿ.ರವಿಯವರನ್ನು ಕರೆದು ಬುದ್ಧಿಹೇಳಿ. ಹಣಬಲದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಹಂಕಾರದಿಂದ ಈ ರೀತಿ ವರ್ತಿಸುತ್ತಿದ್ದು, ಜನರು ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು. ದೇಶದಲ್ಲಿ ಉದ್ಯೋಗ ಸೃಷ್ಠಿ ಸೇರಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಅನೇಕ ಭರವಸೆಗಳು ಇದುವರೆಗೂ ಈಡೇರಿಲ್ಲ, ಸಿ.ಟಿ.ರವಿಯವರು ಧೈರ್ಯವಿದ್ದರೆ ಪ್ರಧಾನಮಂತ್ರಿಯವರನ್ನು ಪ್ರಶ್ನಿಸಲಿ ಎಂದು ಹೇಳಿದರು.
ಸಿ.ಟಿ. ರವಿ ಪ್ರತಿಕ್ರಿಯೆ:
"ನನ್ನನ್ನು ಜಾತಿ ಹೆಸರಲ್ಲಿ ಖಳನಾಯಕನನ್ನಾಗಿ ಮಾಡುವ ಸಂಚು ನಡೆಯುವುದಿಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಅಂದ್ರೆ ಯಾರು ಬರುವುದಿಲ್ಲ ಎಂದು ಜಾತಿಯನ್ನು ಮುಂದಿಟ್ಟಿದ್ದಾರೆ. ಆದರೆ ಇವತ್ತಿಗೂ ಅತಿಹೆಚ್ಚು ಕುರುಬ ಸಮುದಾಯದ ಜನರು ನನ್ನ ಜೊತೆಗೆ ಇದ್ದಾರೆ" ಎಂದು ಶಾಸಕ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ನನಗೆ ಕುರುಬ ಸಮಾಜದ ಬಗೆಗೆ ಗೌರವ ಇದೆ. ನನ್ನ ಜೊತೆಗೂ ಸಮುದಾಯದವರು ಇದ್ದಾರೆ, ಏಕೆಂದರೆ ಅವರು ನಂಬಿಕಸ್ಥರು. ಯಾರು ಕನಕದಾಸ, ಸಂಗೊಳ್ಳಿ ರಾಯಣ್ಣನ ಮೇಲೆ ನಂಬಿಕೆ ಇಟ್ಟಿದ್ದಾರೋ ಅವರೆಲ್ಲರೂ ಸಹ ಹಿಂದುತ್ವದ ಮೇಲೂ ನಂಬಿಕೆ ಇಟ್ಟಿರುತ್ತಾರೆ, ಆ ಎಲ್ಲಾ ಕುರುಬರೂ ನನ್ನ ಜೊತೆಗೆ ಇದ್ದಾರೆ. ಆ ಕಾರಣದಿಂದಲೇ ಕಳೆದ ನಾಲ್ಕು ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ನಾನು ಗೆದ್ದಿದ್ದೇನೆ ಎಂದು ಪ್ರತಿಭಟನಾಕಾರರಿಗೆ ತಿರುಗೇಟು ನೀಡಿದರು.
ನಾನು ಟ್ವೀಟ್ ಮಾಡಿದ್ದು ತಪ್ಪು ಅನಿಸಿದರೆ ಸಿದ್ಧರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಂಬಳಿ ಹಾಕಿದ್ದರ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಪ್ರತಿಭಟನೆ ಮಾಡಿದವರಿಗೆ ಅನಿಸಬೇಕಿತ್ತು. ನನಗೆ ಭಾಷೆ ಮತ್ತು ಸಂಸ್ಕೃತಿಯ ಪಾಠ ಹೇಳುವ ಮೊದಲು ದೇಶದ ಪ್ರಧಾನಿ ಬಗ್ಗೆ ಮಾಜಿ ಸಿದ್ಧರಾಮಯ್ಯ ಅವರು ಮೋದಿ ಹೆಬ್ಬೆಟ್ಟು ಎಂದು ಮಾತನಾಡಿದ್ದು ಸರಿಯೇ ಎಂದು ಪ್ರಶ್ಬಿಸಿದರು.
ಕರ್ನಾಟಕದಿಂದ ಆಚೆಗೆ ಸಿದ್ಧರಾಮಯ್ಯ ಅವರನ್ನು ಗುರತಿಸುವವರು ಯಾರು?, ಆದರೆ ಜಗತ್ತಿನ ಬಹುತೇಕ ದೇಶಗಳಿಗೆ ಮೋದಿ ಹೋದರೆ ಮೋದಿ ಮೋದಿ ಎಂದು ಸಂತೋಷದಿಂದ ಸ್ವಾಗತಿಸಿ ಉದ್ಘಾರ ಹಾಕುತ್ತಾರೆ ಅಂತಹವರ ಬಗ್ಗೆ ಹೆಬ್ಬೆಟ್ಟು ಎಂಬುದು ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.
ಕಂಬಳಿ ಹೊದಿಯುವುದು ಒಂದು ಜಾತಿಗೆ ಕಾರಣವಾದರೆ ಟೋಪಿ ಹಾಕಲು ಒಂದು ಜಾತಿ ಇರಬೇಕಲ್ವಾ ಎಂದು ನಾನು ಹೇಳಿದ್ದೆ. ಆಗಿದ್ದರೆ ಕಂಬಳಿ ಹೊದಿಯುವುದು ಒಂದು ಜಾತಿ ಅಂತಾ ಹೇಳಿದ್ದು ಅವರ ತಪ್ಪು ಎಂದು ಹೇಳಿದರೆ, ನನ್ನ ಮಾತು ಸಹ ತಪ್ಪು ಎಂದು ಹೇಳುತ್ತೇನೆ. ನಾನು ಜಾತಿ ಬೇದ ಮಾಡಿಲ್ಲ. ನಾನು ಶಾಸಕನಾಗುವ ಮೊದಲು ಊರೂರಲ್ಲಿ ಜಾತಿ ಜಗಳಗಳು ನಡೆಯುತ್ತಿದ್ದವು. ನಾನು ಶಾಸಕನಾದ ಮೇಲೆ ಅವೆಲ್ಲವೂ ನಿಂತಿವೆ. ಎಲ್ಲಾ ಸಮುದಾಯದ ಜನರಿಗೆ ರಾಜಕೀಯ ಪ್ರಾತಿನಿಧ್ಯ ಹಾಗೂ ಅಧಿಕಾರ ನೀಡುವ ಜೊತಗೆ ಗ್ರಾಮಗಳನ್ನು ಅಭಿವೃದ್ಧಿಗೊಳಿಸಿದ್ದೇವೆ.
ಮೊದಲು ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಕ್ಷದ ಹಿರಿಯ ಮುಖಂಡ ಈಶ್ವರಪ್ಪ ಹಾಗೂ ಅವರಿಗೆ ರಾಜಕೀಯ ಅಸ್ತಿತ್ವ ಕೊಟ್ಟಂತಹ ದೇವೇಗೌಡ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದರೆ ಆಮೇಲೆ ನನ್ನ ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
Recommended Video