ಚಾರ್ಮಡಿ ಘಾಟ್: 9 ತಿಂಗಳ ಹಿಂದೆ ಕೊಲೆಯಾದ ಶವದ ಪತ್ತೆಗಾಗಿ ಪೊಲೀಸರ ಹುಡುಕಾಟ
ಚಿಕ್ಕಮಗಳೂರು, ಜನವರಿ 5: ಕಾಫಿನಾಡಿನ ಚಾರ್ಮಡಿ ಘಾಟ್ನಲ್ಲಿ ಬೆಂಗಳೂರಿನ ಪೊಲೀಸರು ಬೀಡುಬಿಟ್ಟಿದ್ದು, 9 ತಿಂಗಳ ಹಿಂದೆ ಕೊಲೆ ಎಸೆದಿದ್ದ ಶವವನ್ನು ಈಗ ಹುಡುಕಾಡುತ್ತಿದ್ದಾರೆ.
ಸಬ್ಸಿಡಿಯಲ್ಲಿ ಕಾರು ಕೊಡಿಸುತ್ತೇನೆಂದು ಹಣ ಪಡೆದು ಮೋಸ ಮಾಡಿದನೆಂದು ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಎಂಬಾತನನ್ನು ಹಣ ಕೊಟ್ಟವರು ಅಪಹರಿಸಿ, ಹಲ್ಲೆ ಮಾಡಿ ಕೊಲೆಗೈದು ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದರು ಎನ್ನಲಾಗಿದೆ.
ಚಿಕ್ಕಮಗಳೂರು: ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ತಿಳುವಳಿಕೆ ಮೂಡಿಸಿದ ಇಂಜಿನಿಯರ್
ಬೆಂಗಳೂರಲ್ಲಿ ಶರತ್ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು ಬಂಧಿತರ ಮಾಹಿತಿ ಮೇರೆಗೆ ಚಾರ್ಮಾಡಿ ಘಾಟಿಯಲ್ಲಿ ಮೃತದೇಹವನ್ನು ಹುಡುಕಾಡುತ್ತಿದ್ದಾರೆ. ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಹುಡುಕಾಡಿದ್ದರು. ಬಳಿಕ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಅರಣ್ಯದಲ್ಲಿ ಹುಡುಕಾಡುತ್ತಿದ್ದಾರೆ. ಆದರೆ, ಮೃತದೇಹದ ಯಾವುದೇ ಗುರುತು ಪತ್ತೆಯಾಗಿಲ್ಲ. ಆರೋಪಿಗಳನ್ನು ಜೊತೆಯೇ ಕರೆತಂದಿರುವ ಪೊಲೀಸರು ಅವರು ಹೇಳಿದ ಸ್ಥಳಗಳಲ್ಲಿ ಹುಡುಕಾಡುತ್ತಿದ್ದಾರೆ. ಆದರೆ, 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿಯ ಕಗ್ಗತ್ತಲಲ್ಲಿ ಆರೋಪಿಗಳು ಎಲ್ಲಿ ಮೃತದೇಹವನ್ನು ಎಸೆದಿರಬಹುದು ಎಂದು ಪೊಲೀಸರು ಹುಡುಕಾಡುತ್ತಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಹುಡುಕೋದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಸಿಕ್ಕ ಶವಕ್ಕಿಂತ ಮಣ್ಣಿನಲ್ಲಿ ಕರಗಿದ ದೇಹಗಳೇ ಹೆಚ್ಚು. ಯಾಕಂದರೆ ಚಾರ್ಮಾಡಿ ಘಾಟ್ ಸಾವಿರಾರು ಅಡಿ ಪ್ರಪಾತದ ಪ್ರದೇಶ. ದಟ್ಟ ಕಾನನ. ಅಸಂಖ್ಯಾತ ಪ್ರಾಣಿಗಳ ಆವಸ ಸ್ಥಾನ. ಜೊತೆಗೆ ಯತೇಚ್ಛವಾಗಿ ಮಳೆ ಬೀಳುವ ಮಳೆನಾಡು. ಇಂತಹ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಮೃತದೇಹ ಹುಡುಕುವುದು ಕಷ್ಟ ಸಾಧ್ಯ.
ಮೂರನೇ ದಿನ ಕೂಡ ಶೋಧ ಕಾರ್ಯ ಮುಂದುವರಿದಿದ್ದು, ಮೃತದೇಹದ ಶೋಧಕ್ಕಾಗಿ ಎ1 ಹಾಗೂ ಎ2 ಇಬ್ಬರು ಆರೋಪಿಗಳನ್ನು ಸ್ಥಳಕ್ಕೆ ಕರೆತಂದಿರುವ ಪೊಲೀಸರು ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಆದರೆ, ಮೃತದೇಹ ಮಾತ್ರ ಸಿಕ್ಕಿಲ್ಲ. ಆರೋಪಿಗಳು ಒಂದೊಂದು ಬಾರಿ ಒಂದೊಂದು ಜಾಗ ತೋರಿಸುತ್ತಿರುವುದರಿಂದ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಒಮ್ಮೆ ಓರ್ವ ಬಲ ಭಾಗ ಅಂದರೆ ಮತ್ತೋರ್ವ ಎಡಭಾಗ ಎನ್ನುತ್ತಿದ್ದಾನೆ. ಇದು ಪೊಲೀಸರನ್ನು ಅತಂತ್ರಕ್ಕೀಡು ಮಾಡಿದೆ.
ಇನ್ನು ಆರೋಪಿಗಳು ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಎಸೆದಿದ್ದೇವೆ ಎನ್ನುತ್ತಿದ್ದು, ಸ್ಥಳೀಯರು ಮೃತದೇಹ ಸಿಗುವುದು ಅನುಮಾನ ಎಂದಿದ್ದಾರೆ. ಕಾಡುಹಂದಿ ಹಂದಿ ಸೀಳುನಾಯಿಗಳು ಹೆಚ್ಚಿರುವ ಚಾರ್ಮಾಡಿ ಘಾಟ್ನಲ್ಲಿ ಶವವಿರುವ ಗೋಣಿ ಚೀಲವನ್ನು ಪ್ರಾಣಿಗಳು ಎಳೆದೊಯ್ಯವ ಸಾಧ್ಯತೆ ಇದೆ. ತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಮೃತದೇಹಕ್ಕಾಗಿ ಬೆಟ್ಟ-ಗುಡ್ಡ ಹತ್ತು ಇಳಿದು ಹುಡುಕಾಡುತ್ತಿದ್ದಾರೆ.