ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ
ಚಿಕ್ಕಮಗಳೂರು, ನವೆಂಬರ್.23: ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕಲು ಹೊರಟರೆ ಸೋಲು ಕಟ್ಟಿಟ್ಟ ಬುತ್ತಿ. ಭೂಗರ್ಭದ ಒಡಲಾಳದಲ್ಲಿ ಅಡಗಿರುವ ಒಂದೊಂದು ಸತ್ಯ ಹೊರಬಂದಾಗಲೂ ದೇವರಿರೋದು ಸತ್ಯ ಅನಿಸುತ್ತದೆ.
ಈ ಮಾತನ್ನು ಈಗ ಇಲ್ಲಿ ಹೇಳಲು ಕಾರಣವೂ ಇದೆ. ಇಲ್ಲೊಂದು ಊರಿದೆ. ಆ ಊರಿನ ಜಾತ್ರೆಯನ್ನ, ಪ್ರಕೃತಿಯ ವಿಚಿತ್ರವನ್ನ ನೀವು ನೋಡಿದರೆ ಮೂಕವಿಸ್ಮಿತರಾಗುತ್ತೀರಾ. ಹೌದು, ಆ ಹುತ್ತಕ್ಕೆ ಸೂರಿಲ್ಲ. ತಡೆಗೋಡೆಗಳೂ ಇಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ.
ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್ ಗಳಿಂದ ಬಂದೋಬಸ್ತ್ ಮಾಡಿದ್ರು ಕೂಡ ದೀಪಾವಳಿ ಅಮಾವಾಸ್ಯೆಯ ನಂತರ ಅಂದರೆ ಮಕ್ಕಳ ಹುಣ್ಣಿಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲೊಂದು ವಿಚಿತ್ರ ನಡೆಯುತ್ತದೆ. ಈ ವಿಚಿತ್ರಕ್ಕೆ ಎಂಥಹ ನಾಸ್ತಿಕರೂ ಕೂಡ ಆಸ್ತಿಕರಾಗದೆ ಇರಲಾರರು.
ಅದೇನಪ್ಪಾ ಅಂದ್ರೆ ಹೊಯ್ಸಳರ ಕಾಲದಿಂದಲೂ ನಡೆದು ಬರುತ್ತಿರುವ ಈ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯ ನಂತರ ಮಕ್ಕಳ ಹುಣ್ಣಿಮೆಯಂದು ನಡೆಯುವ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಹುತ್ತ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತದೆ.
ಹೌದು, ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಾನವಳ್ಳಿ ಉಣ್ಣಕ್ಕಿ ಉತ್ಸವ. ಅಂದಹಾಗೆ ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ.
ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನ ಮೂಕವಿಸ್ಮಿತರನ್ನಾಗಿಸುತ್ತದೆ. ಈ ಪವಾಡವನ್ನು ನೋಡಲೆಂದು ಬಂದವರು ನಂತರ ಅಪ್ಪಟ ನಾಗಪ್ಪನ ಭಕ್ತರಾಗುತ್ತಾರೆ. ಮುಂದೆ ಓದಿ...

ದೇವರ ಕರುವೆಂದು ಕಾಡಿಗೆ ಬಿಡುತ್ತಾರೆ
ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುತ್ತಾರೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದಿದ್ದು, ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯೋ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನು ಕಾಡಿಗೆ ಹೊಡೆಯೋ ಆಚರಣೆ ಬೆಳೆದು ಬಂದಿದೆ.

ಗುರುವಾರ ಅಥವಾ ಭಾನುವಾರ ನಡೆಯಲಿದೆ
ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕ್ತೇವೆಂದು ಹರಕೆ ಕಟ್ಟಿಕೊಂಡರೆ ಎಂಥಹ ಕಷ್ಟವೂ ಕಳೆಯುತ್ತಂತೆ. ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ.

ಹರಕೆ ಈಡೇರುತ್ತದೆ
ಚರ್ಮರೋಗ, ಮಕ್ಕಳಾಗದವರು, ದನಕರು ಸಾಯ್ತಿದ್ರೆ ಅಥವಾ ಆರೋಗ್ಯ ಹದಗೆಟ್ಟಿದ್ರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುವುದರಿಂದ ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ.

ಉತ್ಸವ ಇಂದಿಗೂ ಪ್ರಶ್ನಾತೀತ!
ಒಟ್ಟಾರೆ, ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದೆಯೋ ಅಥವಾ ದೈವಿಶಕ್ತಿಯ ಪ್ರಭಾವವಿದೆಯೋ ಅನ್ನೋದು ಇಂದಿಗೂ ನಿಗೂಢ. ಈ ಹುತ್ತ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದ್ರೆ, ಇದು ಅಲುಗಾಡುವುದರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದಗಳಿವೆ. ಆದರೆ ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ.












Click it and Unblock the Notifications