ಶೃಂಗೇರಿ: ಅಡಿಕೆ ತೋಟಕ್ಕೆ ಎಲೆ ಚುಕ್ಕಿ ರೋಗ; ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ
ಚಿಕ್ಕಮಗಳೂರು, ನವೆಂಬರ್ 10 : ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಎಲೆ ಚುಕ್ಕಿರೋಗ, ಹಳದಿ ಎಲೆ ರೋಗ ತೀವ್ರಗೊಂಡಿದ್ದು, ತನ್ನ ಅಡಿಕೆ ತೋಟಕ್ಕೂ ರೋಗ ಹರಡಿದ್ದರಿಂದ ಬೇಸತ್ತ ಯುವ ರೈತರೊಬ್ಬರು ಬ್ಯಾಂಕ್ ಸಾಲ ತೀರಿಸುವುದು ಹೇಗೆಂದು ನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ವರದಿಯಾಗಿದೆ.
ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮ ಸಮೀಪದ ಕೊಡತಲು ಗ್ರಾಮದ ನಿವಾಸಿ ಅಭಿಲಾಷ್(36) ಆತ್ಮಹತ್ಯೆಗೆ ಶರಣಾದ ಯುವ ರೈತ. ಅಭಿಲಾಷ್ ಶೃಂಗೇರಿ ಪಟ್ಟಣದ ಖಾಸಗಿ ಬ್ಯಾಂಕ್ನಲ್ಲಿ 3.50 ಲಕ್ಷ ರೂ. ಸಾಲ ಮಾಡಿ ಅಡಿಕೆ ತೋಟ ಮಾಡಿದ್ದರು. ಇದಕ್ಕಾಗಿ ಬ್ಯಾಂಕ್ ಅಲ್ಲದೆ ಹಲವೆಡೆ ಕೈ ಸಾಲವನ್ನು ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಬೆಳೆಗಾರರಿಗೆ ಸಿಹಿ ಸುದ್ದಿ; ಕಬ್ಬಿಗೆ FRP ದರ ನಿಗದಿ ಮಾಡಲಿರುವ ಸಿಎಂ
ಆದರೆ ಅಡಿಕೆ ತೋಟಕ್ಕೆ ಎಲೆ ಚುಕ್ಕಿ ರೋಗ ಹರಡಿದ್ದರಿಂದ ತೀವ್ರ ನೊಂದಿದ್ದ ಅವರು ಈ ಸಂಬಂಧ ಚಿಂತಾಕ್ರಾಂತರಾಗಿದ್ದರು. ಗುರುವಾರ ಬೆಳಗ್ಗೆ ರೋಗ ನಿಯಂತ್ರಣಕ್ಕೆಂದು ಮನೆಯಲ್ಲಿ ತಂದಿಟ್ಟಿದ್ದ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ನೀಡಲಾಗಿದೆ.
ಮಲೆನಾಡು ಭಾಗದಲ್ಲಿ ಅಡಿಕೆ ಹಳದಿ ರೋಗದಿಂದ ತತ್ತರಿಸಿದ್ದ ರೈತರಿಗೆ ಇತ್ತೀಚೆಗೆ ಅಡಿಕೆ ಎಲೆ ಚುಕ್ಕಿ ರೋಗ ತೀವ್ರ ಆತಂಕ ಮೂಡಿಸಿದೆ. ರೋಗ ಹತೋಟಿಗೆ ಬಾರದಿರುವುದರಿಂದ ಸಾಲ ಸೂಲ ಮಾಡಿ ಅಡಿಕೆ ತೋಟ ಮಾಡಿರುವ ರೈತರು ದಿಕ್ಕುತೋಚದಂತಾಗಿದ್ದಾರೆ. ಸರಕಾರ ಕೂಡ ಈ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ನೊಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.
ತೋಟಗಾರಿಕೆಯಿಂದ 4 ಕೋಟಿ ರೂ. ಬಿಡುಗಡೆ
ಅಡಿಕೆ ಬೆಳೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರಕಾರ ತೋಟಗಳಿಗೆ ಔಷಧ ಸಿಂಪಡಿಸಲು ತೋಟಗಾರಿಕೆ ಇಲಾಖೆ 4 ಕೋಟಿ ರೂ ಸಹಾಯಧನ ಬಿಡುಗಡೆ ಮಾಡಿದೆ. ಕಳೆದ ವಾರವೇ ಇಲಾಖೆ ಸಹಾಯಧವನ್ನು ಬಿಡುಗಡೆ ಮಾಡಿದೆ.
ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಿಂದ 1.5 ಕೋಟಿ ಹಾಗೂ ಅಡಿಕೆ ಕಾರ್ಯಪಡೆ ಖಾತೆಯಲ್ಲಿರುವ 2.5 ಕೋಟಿ ರೂ ಗಳನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳುವುದಾಗಿ ಆದೇಶದಲ್ಲಿ ತಿಳಿಸಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777