ಚಿಕ್ಕಮಗಳೂರಿನಲ್ಲಿ ಯುವತಿ ಬಲಿ ಪಡೆದ ರಸ್ತೆ ಗುಂಡಿ, ಸಂಘಟನೆಗಳ ಪ್ರತಿಭಟನೆ
ಚಿಕ್ಕಮಗಳೂರು, ನವೆಂಬರ್ 4: ಪಾಸ್ಪೋರ್ಟ್ ಪರಿಶೀಲನೆಗಾಗಿ ತಂದೆ ಜತೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಗುಂಡಿ ತುಂಬಿದ್ದ ರಸ್ತೆಯಲ್ಲಿ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಸಿಂದೂಜಾ (23) ಮೃತ ಯುವತಿ. ಯುವತಿಯು ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ವೇರಿಫಿಕೇಶನ್ಗಾಗಿ ತನ್ನ ತಂದೆ ಜತೆ ಬೈಕ್ನಲ್ಲಿ ಹೋಗುತ್ತಿದ್ದಳು. ದಂಡರಮಕ್ಕಿ ಸಮೀಪ ರಸ್ತೆಯಲ್ಲಿನ ಭಾರಿ ಗುಂಡಿಯನ್ನು ಗಮನಿಸದ ಸಿಂದೂಜಾ ತಂದೆ ಬೈಕನ್ನು ಗುಂಡಿಯಲ್ಲಿ ಇಳಿಸಿದ್ದರು. ಇದರಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಸಿಂದೂಜಾ ಗಂಭೀರವಾಗಿ ಗಾಯಗೊಂಡಿದ್ದರು.
ಸಿಂದೂಜಾ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಹಾಸನಕ್ಕೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ತಿಪಟೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಸಿಂದೂಜಾ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಕೆಲಸಕ್ಕೆ ತೆರಳಲು ಪಾಸ್ ಪೋರ್ಟ್ ವೆರಿಫಿಕೇಶನ್ ಗಾಗಿ ನಗರ ಪೊಲೀಸ್ ಠಾಣೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ.

ರಸ್ತೆ ಸರಿ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ ಎಂದು ಸಿಂದೂಜಾ ತಂದೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವತಿ ಸಾವಿನ ಬಳಿಕ ಎಚ್ಚೆತ್ತಿರುವ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಕಾಂಗ್ರೆಸ್, ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳು ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿವೆ, ಜಿಲ್ಲಾ ಕಾಂಗ್ರೆಸ್ ಸಂಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆಗಿಡ, ಅಡಿಕೆ ಸಸಿ ನೆಟ್ಟು ಪ್ರತಿಭಟನೆ ನಡೆಸಿದೆ.

ಯುವತಿ ಸಿಂದೂಜಾ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಗೊಂಡಿದೆ. ಗುಂಡಿ ಮುಚ್ಚದ ಪಿಡಬ್ಲುಡಿ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದೆ












Click it and Unblock the Notifications