ಕಾಡಾನೆ ದಾಳಿಗೆ ಮೂಡಿಗೆರೆಯ ಹುಲ್ಲೆಮನೆಯಲ್ಲಿ ಮತ್ತೊಂದು ಬಲಿ
ಚಿಕ್ಕಮಗಳೂರು, ನವೆಂಬರ್ 20: ಕಾಡಾನೆ ದಾಳಿ ಕಾಫಿನಾಡಿನಲ್ಲಿ ಮುಂದುವರಿದಿದೆ. ಹುಲ್ಲು ಕೊಯ್ಯುತ್ತಿದ್ದ ಮಹಿಳೆ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ನಡೆದಿದೆ.
ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಶೋಭಾ ಎಂದಿನಂತೆ ಭಾನುವಾರ ಕೂಡ ಬೆಳಗ್ಗೆ ಹಸುವಿನಿಂದ ಹಾಲು ಕರೆದು, ಅದನ್ನು ಗ್ರಾಮದ ಕೆಲ ಮನೆಗೆ ವಿತರಿಸಿ ತನ್ನ ಪತಿ ಸತೀಶ್ ಗೌಡರೊಂದಿಗೆ ಅಡಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಜೊತೆಗೆ ಗ್ರಾಮದ ವಿಜಯ ಎಂಬುವರು ಕೂಡ ಆ ಸ್ಥಳದಲ್ಲೇ ಹುಲ್ಲು ಕೊಯ್ಯುತ್ತಿದ್ದರು.
ಈ ಸಂದರ್ಭದಲ್ಲಿ ದಿಢೀರ್ ಕಾಡಾನೆ ಪ್ರತ್ಯಕ್ಷವಾಗಿದೆ. ವಿಜಯ ಎಂಬುವರ ಸಾಕು ನಾಯಿ ಅಲ್ಲಿಯೇ ಇದ್ದಿದ್ದರಿಂದ ಕಾಡಾನೆ ನೋಡಿ ನಾಯಿ ಬೊಗಳಿದ ಸಮಯದಲ್ಲಿ ವಿಜಯ ಹಾಗೂ ಸತೀಶ್ ತಪ್ಪಿಸಿಕೊಂಡಿದ್ದಾರೆ. ಆದರೆ ಶೋಭಾ ತೋಟದಿಂದ ರಸ್ತೆಗೆ ದಾಟುವ ಸಂದರ್ಭದಲ್ಲಿ ಆನೆ ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ಸಾಯಿಸಿದೆ. ನಂತರ ಕಾಡಾನೆ ಕಾಫಿ ತೋಟದಲ್ಲಿ ತೆರಳಿ ಮರೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಡಾನೆ ದಾಳಿಯಿಂದ ಈ ವರ್ಷದಲ್ಲಿ ಶೋಭಾ ಸೇರಿದಂತೆ 3 ಸಾವು ಸಂಭವಿಸಿದೆ. ಕೆಂಜಿಗೆ ಗ್ರಾಮದ ಆನಂದ ದೇವಾಡಿಗರನ್ನು ಕೊಂದಿದ್ದ ಆನೆಯೇ ಇಂದು ಶೋಭಾ ಅವರನ್ನು ಹತ್ಯೆ ಮಾಡಿದೆ.
ತಾಲೂಕಿನಲ್ಲಿ 35ಕ್ಕೂ ಅಧಿಕ ಕಾಡಾನೆ ತಿರುಗಾಡಿಕೊಂಡಿವೆ. ಯಾವ ಆನೆಯಿಂದ ಯಾವ ರೀತಿಯಲ್ಲಿ ಅಪಾಯ ಬರುವುದೋ ಏನೋ? ಒಂದೆರಡು ಕಾಡಾನೆ ಹಿಡಿದರೆ ಸಾಲದು. ಎಲ್ಲಾ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಈ ಘಟನೆ ಬೆನ್ನಲ್ಲೇ ಸುತ್ತಮತ್ತಲಿನ ಸಾವಿರಾರು ಜನರು ಹುಲ್ಲೇಮನೆ ಕುಂದೂರಿಗೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಬಾರದ ಹಿನ್ನೆಲೆಯಲ್ಲಿ ಜನರು ಅವರು ವಿರುದ್ಧವೂ ಕೆಂಡಾಮಂಡಲವಾದರು. ಮೃತರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು, ಇದೇ ಕೊನೆಯ ಸಾವಾಗಬೇಕು. ಮುಂದೆಂದೂ ಇಂತಹ ಘಟನೆ ಮರಕಳಿಸಬಾರದು ಎಂದು ಅರಣ್ಯ ಇಲಾಖೆಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆಯೂ ನಿಷ್ಟ್ರಯೋಜಕವಾಗಿದ್ದೂ ಕಾಡಾನೆಗಳನ್ನ ಹಿಮ್ಮೆಟ್ಟಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿಮಗೆ ಕಾಡಾನೆ ಹಾವಳಿಯನ್ನ ನಿಯಂತ್ರಣ ಮಾಡಲು ಸಾಧ್ಯವಿಲ್ಲದಿದ್ದರೆ ನಾವೇ ನಿಯಂತ್ರಿಸುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ವೈಜ್ಞಾನಿಕವಾಗಿ ಕಾಡಾನೆಗಳನ್ನ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಸಾಲು ಸಾಲು ವೈಫಲ್ಯ ಅನುಭವಿಸುತ್ತಿರುವುದು ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಕಾಡಾನೆ-ಮಾನವ ಸಂಘರ್ಷ ಮುಂದುವರಿದಿದ್ದು, ಅಮಾಯಕರು ಜೀವ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ.












Click it and Unblock the Notifications