ಚಿಕ್ಕಮಗಳೂರಿನಲ್ಲಿ ಇಂದಿನಿಂದ ದತ್ತ ಜಯಂತಿ ಸಂಭ್ರಮ
ಚಿಕ್ಕಮಗಳೂರು, ಡಿಸೆಂಬರ್ 10: ಹಿಂದೂ ಮುಸಲ್ಮಾನರ ಧಾರ್ಮಿಕ ಭಾವೈಕ್ಯ ಕೇಂದ್ರವಾಗಿರುವ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಮೂರು ದಿನಗಳ ಕಾಲ ದತ್ತ ಜಯಂತಿಯ ಸಂಭ್ರಮ ಸಡಗರ.
ದತ್ತಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೋಳರಾಮೇಶ್ವರ ದೇವಾಲಯದಿಂದ ಮಹಿಳೆಯರ ನೇತೃತ್ವದಲ್ಲಿ ಹೊರಟ ಸಂಕೀರ್ತನಾ ಯಾತ್ರೆ ನಗರದ ಐಜಿ ರಸ್ತೆ ಮೂಲಕ ಕಾಮಧೇನು ಗಣಪತಿ ದೇವಾಲಯದಲ್ಲಿ ಕೊನೆಗೊಂಡಿತು. ಸಂಕೀರ್ತನಾ ಯಾತ್ರೆಯಲ್ಲಿ ಸಚಿವ ಸಿ.ಟಿ ರವಿ ಸೇರಿದಂತೆ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳದ ಮುಖಂಡರು ಭಾಗವಹಿಸಿದ್ದರು.

ಅನುಸೂಯ ಜಯಂತಿಯಲ್ಲಿ ಈ ಬಾರಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿಯ ಮೊದಲ ದಿನದ ಪೂಜೆ ದತ್ತಾತ್ರೇಯ ಸ್ವಾಮಿಯ ತಾಯಿ ಅನುಸೂಯ ದೇವಿಗೆ ಮೀಸಲಾಗಿತ್ತು. ಪಂಚ ಪತಿವ್ರತೆಯರಲ್ಲಿ ಒಬ್ಬಳೆನಿಸಿಕೊಂಡಿರುವ ಅನುಸೂಯ ದೇವಿಯ ಪೂಜೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋದು ಭಕ್ತರ ನಂಬಿಕೆ.

ಅನುಸೂಯ ಜಯಂತಿಗೆ ರಾಜ್ಯದ ಮೂಲೆ ಮೂಲೆಗಳಿಂದಲೂ ಮಹಿಳಾ ಭಕ್ತರ ದಂಡು ಹರಿದು ಬಂದಿತ್ತು. ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಕಲ್ಪಿಸಿ ಹಿಂದೂ ಅರ್ಚಕರ ನೇಮಕ ಮಾಡಬೇಕು. ದತ್ತ ಪೀಠವನ್ನು ಹಿಂದೂಗಳ ಪುಣ್ಯಕ್ಷೇತ್ರ ಎಂದು ಘೋಷಿಸಿ ಎನ್ನುವ ಆಗ್ರಹ ಭಕ್ತರಿಂದ ಈ ಬಾರಿಯೂ ಕೇಳಿ ಬಂತು.












Click it and Unblock the Notifications