ಹುಟ್ಟು ಹಬ್ಬದ ದಿನವೇ ಬೆನ್ನಟ್ಟಿದ ಜವರಾಯ: ಚಿಕ್ಕಮಗಳೂರಿನಲ್ಲಿ ಯುವಕನ ದಾರುಣ ಸಾವು
ಚಿಕ್ಕಮಗಳೂರು, ಜನವರಿ 31: ಹುಟ್ಟು ಹಬ್ಬದ ದಿನವೇ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ತರೀಕೆರೆ ಪಟ್ಟಣದ ಮಾಚೇನಹಳ್ಳಿ ನಿವಾಸಿ ಗೋಪಿ (18) ಮೃತ ಯುವಕ ಎಂದು ಗುರುತಿಸಲಾಗಿದೆ.
ಮೃತ ಗೋಪಿ ತನ್ನ ಹುಟ್ಟು ಹಬ್ಬದ ದಿನ ಸೌದೆ ತರಲೆಂದು ಎತ್ತಿನ ಗಾಡಿಯಲ್ಲಿ ಕಾಡಿಗೆ ಹೋಗಿದ್ದನು. ಬಳಿಕ ಸೌದೆಗಳನ್ನು ಸಂಗ್ರಹಿಸಿ ತೆಗೆದುಕೊಂಡು ರಾತ್ರಿ ವಾಪಸ್ ಗ್ರಾಮದ ಕಡೆ ಬರುವಾಗ ಎತ್ತಿನ ಗಾಡಿ ಪಲ್ಟಿಯಾಗಿದೆ. ಘಟನೆಯಲ್ಲಿ ಗೋಪಿ ಗಾಡಿಯಿಂದ ಕೆಳಕ್ಕೆ ಬಿದ್ದಿದ್ದು, ಯುವಕನ ಮೇಲೆ ಸೌದೆಗಳ ಸಮೇತ ಎತ್ತಿನ ಗಾಡಿ ಬಿದ್ದಿದೆ.

ಎತ್ತಿನ ಗಾಡಿಯ ಭಾರ ಹಾಗೂ ಹಾಗೂ ಸೌದೆಯಡಿ ಸಿಲುಕಿದ್ದ ಯುವಕ ಗಂಭಿರ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದನು. ಈ ಮಾರ್ಗವಾಗಿ ಬಂದ ಗ್ರಾಮಸ್ಥರು ಕೂಡಲೇ ಆತನನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಯುವಕ ಆಸ್ಪತ್ರೆಯ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಇನ್ನು ಇತ್ತ ಯುವಕ ಮನೆಯಲ್ಲಿ ಮನೆ ಮಗನ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಗನ ಹುಟ್ಟುಹಬ್ಬದ ಆಚರಣೆಗೆ ಕುಟುಂಬಸ್ಥರು ತಯಾರಿ ಮಾಡಿಕೊಂಡಿದ್ದರು. ಈ ವೇಳೆ ಮಗನ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಿಡಿದಿದ್ದು, ಮೃತ ಗೋಪಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪ ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಚಳ್ಳಕೆರೆಯ ವೆಂಕಟೇಶ( 57 ) ಹಾಗೂ ಚಿತ್ರಯ್ಯನಟ್ಟಿ ವೆಂಕಟೇಶ್ (55 ) ಮೃತ ದುರ್ದೈವಿಗಳು. ಚಾಲಕನ ನಿದ್ರೆ ಮಂಪರಿನಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾಗಿದೆ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕಿಶೋರ್ ಎನ್ನುವವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿವಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications