ರಾಜಕೀಯ ಲಾಭಕ್ಕಾಗಿ ವೈದ್ಯಕೀಯ ಕಾಲೇಜು ನಿರ್ಮಿಸಿಲ್ಲ: ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ, ಜುಲೈ 08: ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕು ಎನ್ನುವುದು ಚಿಕ್ಕ ವಯಸ್ಸಿನಲ್ಲೇ ಕನಸು ಕಂಡಿದ್ದೆ, ಅದು ನನಸಾಗುವ ಸಮಯ ಸಮೀಪಿಸಿದೆ, ಜನವರಿಯಲ್ಲಿ ಕಾಲೇಜಿನ ಕಟ್ಟಡ ಉದ್ಘಾಟನೆಯಾದಾಗ ಕನಸು ಸಂಪೂರ್ಣ ಸಾಕಾರಗೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಅವರು ಇಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಮೊದಲ ಬ್ಯಾಚ್ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಕೆಲವರು ಎಲ್ಲಾ ವಿಚಾರಗಳಲ್ಲೂ ರಾಜಕೀಯ ಹುಡುಕುತ್ತಾರೆ. ಶಾಸಕರ ಊರಿಗೆ ಹತ್ತಿರವಿರುವುದಕ್ಕೆ ಕಾಲೇಜು ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಚಿಕ್ಕಬಳ್ಳಾಪುರದ ಜೊತೆಗೆ ಇಡೀ ಕರ್ನಾಟಕವೇ ನನ್ನೂರು. ಯಾವುದೇ ಸ್ವಾರ್ಥಕ್ಕಾಗಿ ಈ ಜಾಗ ಆಯ್ಕೆ ಮಾಡಿಲ್ಲ. ಯೋಗ್ಯವಾದ ಜಾಗ ಎಂದು ನಿರ್ಧಾರ ಮಾಡಿಯೇ ಯೋಜನೆ ರೂಪಿಸಿದ್ದೇವೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹತ್ತಿರ ಹಾಗೂ ಪ್ರಯಾಣಕ್ಕೆ ಅನುಕೂಲ ಇರುವ ಪ್ರದೇಶ ಇದಾಗಿದೆ. ಆಂಧ್ರಪ್ರದೇಶ ಗಡಿ ಭಾಗದ ಜನರಿಗೂ ಇದು ಹತ್ತಿರವಾಗಿದೆ ಎಂದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಚಿಕ್ಕಬಳ್ಳಾಪುರದಿಂದ ಕನಕಪುರಕ್ಕೆ ಕಾಲೇಜಿನ ಯೋಜನೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆದಿತ್ತು. ಮೆಡಿಕಲ್ ಕಾಲೇಜನ್ನು ಜಿಲ್ಲೆಗೆ ವಾಪಾಸ್ ತರುವಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋರಿದ್ದೆ. ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗ ಕೊಟ್ಟ ಮಾತನ್ನು ಉಳಿಸಿಕೊಂಡರು ಎಂದು ನೆನೆದರು.
ನಾನು ಟಿಕೆಟ್ ಕೊಡದಿದ್ರೆ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ: ಸಿದ್ದರಾಮಯ್ಯ
ಬಿಎಸ್ವೈ ಮೊದಲ ಕ್ಯಾಬಿನೆಟ್ನ ಮೊದಲ ನಿರ್ಣಯ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದೇ ಆಗಿತ್ತು. ನಂತರ ಜಿಲ್ಲಾಧಿಕಾರಿ ಮತ್ತು ತಂಡ ಸಾಕಷ್ಟು ಕೆಲಸ ಮಾಡಿ ಮೊದಲ ಬ್ಯಾಚ್ ಕೂಡ ಆರಂಭವಾಗಿದೆ ಎಂದು ಶ್ಲಾಘಿಸಿದರು.
ಅಮ್ಮನ ನೆನೆದು ಡಾ.ಕೆ.ಸುಧಾಕರ್ ಭಾವುಕ
ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಯಾಕಿಲ್ಲ ಎಂದು ಚಿಕ್ಕವಯಸ್ಸಿನಲ್ಲೇ ಯೋಚಿಸುತ್ತಿದ್ದೆ. ಎರಡು ಸಂದರ್ಭದಲ್ಲಿ ಇಲ್ಲಿ ಮೆಡಿಕಲ್ ಕಾಲೇಜಿನ ಅನಿವಾರ್ಯತೆ ಕಾಡಿತ್ತು. ದ್ವಿತೀಯ ಪಿಯುಸಿ ಮುಗಿಸಿದಾಗ ನಾನು ಇಲ್ಲೇ ಕಲಿಯಬೇಕು ಎಂದು ಇಷ್ಟಪಟ್ಟಾಗ ಮೊದಲ ಬಾರಿ ಅನಿಸಿತ್ತು.
ನನ್ನ ಅಮ್ಮನನ್ನು ಕಳೆದುಕೊಂಡಾಗ ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಅನಿವಾರ್ಯ ಏಕೆ ಎಂದು ಎರಡನೇ ಬಾರಿ ಅರಿವಾಯಿತು. ಹಳ್ಳಿಯಲ್ಲಿದ್ದ ಅಮ್ಮನಿಗೆ ಆರೋಗ್ಯ ಸಮಸ್ಯೆಯಾದಾಗ ಹತ್ತಿರದಲ್ಲಿ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಅವರನ್ನು ಕಳೆದುಕೊಳ್ಳಬೇಕಾಯಿತು. ಬೆಂಗಳೂರು ನಮಗೆ ಹತ್ತಿರದ ವೈದ್ಯಕೀಯ ಸೇವೆಯ ಸ್ಥಳವಾಗಿತ್ತು. ಈ ಘಟನೆ ನನ್ನ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ ಎಂಬುದನ್ನು ತಿಳಿಸಿತು. ಈ ಅಪೇಕ್ಷೆಯನ್ನು ಭಗವಂತ ನನ್ನ ಮೂಲಕ ಈಡೇರಿಸಿದ್ದಾನೆ. ಅದಕ್ಕಾಗಿ ಆತನಿಗೆ ಚಿರಋಣಿ ಎಂದು ಹೇಳಿ ಭಾವುಕರಾದರು.
ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ನಿರ್ಮಾಣ
ರಾಜ್ಯದಲ್ಲಿ ಒಂದೇ ಸಂದರ್ಭದಲ್ಲಿ 4 ವೈದ್ಯಕೀಯ ಕಾಲೇಜುಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಈ ಕೆಲಸ ಆಗಿದೆ. ಕೇಂದ್ರ ಸರ್ಕಾರ ಶೇಕಡ 60 ರಷ್ಟು ಧನ ಸಹಾಯ ನೀಡುತ್ತದೆ. ಉಳಿದ ಶೇಕಡ 40 ರಾಜ್ಯ ಸರ್ಕಾರ ಭರಿಸುತ್ತದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಸೇರಿದಂತೆ ಒಂದೇ ಸಮಯಕ್ಕೆ 4 ಕಾಲೇಜುಗಳು ಆರಂಭವಾದರೂ, ಚಿಕ್ಕಬಳ್ಳಾಪುರದಲ್ಲಿ ಮೊದಲ ಬ್ಯಾಚ್ ಆರಂಭವಾಗಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ದೇವರು ಎಲ್ಲೆಡೆ ಇರಲಾರ ಎಂದು ವೈದ್ಯರನ್ನು ಸೃಷ್ಟಿ ಮಾಡಿದ್ದಾನೆ. ದೇವರು, ವೈದ್ಯರು, ವೈದ್ಯಕೀಯ ಸಿಬ್ಬಂದಿಯಿಂದ ಮಾತ್ರ ಜೀವ ಉಳಿಸಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ದೂರ ದೃಷ್ಟಿಯಿಂದ ಇವತ್ತು ದೇಶದಲ್ಲಿ ಯುಜಿ ಮತ್ತು ಪಿಜಿ ಸೇರಿ 75,000 ಇದ್ದ ಮೆಡಿಕಲ್ ಸೀಟ್ಗಳು 1.5 ಲಕ್ಷಕ್ಕೆ ಏರಿಕೆಯಾಗಿವೆ. ಈ ಹಿಂದೆ ಒಂದೇ ಒಂದು ಏಮ್ಸ್ ಇತ್ತು. ಇವತ್ತು 11 ಏಮ್ಸ್ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ 1,400-1,500 ಜನರಿಗೆ ಒಬ್ಬ ವೈದ್ಯರು ಇದ್ದರು. ಆದರೆ ಈಗ ಕರ್ನಾಟಕದಲ್ಲಿ 950 ಜನರಿಗೆ ಒಬ್ಬ ವೈದ್ಯರಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಬ್ಯಾಲೆನ್ಸ್ ಮುಖ್ಯ
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿಗಳು ಬಹಳ ವಿಶೇಷ ವಿದ್ಯಾರ್ಥಿಗಳಾಗಿರಬೇಕು ಎಂದು ಬಯಸುತ್ತೇನೆ. ಆ ವಿಶೇಷತೆ ಪೋಷಕರನ್ನು, ಸಂಸ್ಥೆಯನ್ನು ಮತ್ತು ದೇಶವನ್ನು ಹೆಮ್ಮೆಯಿಂದ ಇರುವಂತೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಬ್ಯಾಲೆನ್ಸ್ ಇರಬೇಕು. ಅದನ್ನು ಅರ್ಥ ಮಾಡಿಕೊಂಡವರು ಜೀವನದಲ್ಲಿ ಅತ್ಯಂತ ಯಶಸ್ವಿಯಾಗುತ್ತಾರೆ. ಕಾಲೇಜು ಜೀವನ ಎಲ್ಲವನ್ನೂ ಕಲಿಸುತ್ತದೆ ಎಂದು ಕಿವಿಮಾತು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ವಿದ್ಯಾಸಂಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ಗಳು ಮುಚ್ಚಿದ್ದವು. ಆದರೆ ಆಸ್ಪತ್ರೆಗಳು ಮಾತ್ರ ಸೇವೆಗೆ ಸಿದ್ಧವಾಗಿ ನಿಂತಿದ್ದವು. ಹೀಗಾಗಿ ವೈದ್ಯರನ್ನು ಕೋವಿಡ್ ವಾರಿಯರ್ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸೈನಿಕರು ಆಪತ್ತು ಬಂದಾಗ ಮುಂದೆ ನಿಂತು ಜನರನ್ನು ರಕ್ಷಣೆ ಮಾಡುತ್ತಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್ ಸಮಯದಲ್ಲಿ ಈ ಕೆಲಸ ಮಾಡಿದ್ದಾರೆ ಎಂದರು.
ನರ್ಸ್ಗಳು ಮಾನವೀಯ ಗುಣ ಹೊಂದಿರಬೇಕು
ವೈದ್ಯರ ಚಿಕಿತ್ಸೆಯಿಂದ ಜನರು ಬದುಕುತ್ತಾರೆ. ಆದರ ಅವರ ಸಂಖ್ಯೆ ಇರುವುದು ಕೇವಲ ಶೇಕಡ 10 ಮಾತ್ರ. ಶೇಕಡ 90 ರಷ್ಟು ನರ್ಸಿಂಗ್ ಸಿಬ್ಬಂದಿ ಇದ್ದಾರೆ. ರೋಗಿಗಳು ನರ್ಸ್ಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹೀಗಾಗಿ ನರ್ಸ್ಗಳಿಗೆ ಮಾನವೀಯ ಗುಣಗಳು ಇರಬೇಕು ಎಂದರು.
ನರ್ಸಿಂಗ್ಗೆ ವಿಶ್ವದಲ್ಲೆಡೆ ಬೇಡಿಕೆ ಇದೆ. ಜಗತ್ತಿನಾದ್ಯಂತ 8-10 ದಶಲಕ್ಷ ನರ್ಸ್ಗಳ ಬೇಡಿಕೆ ಇದೆ. ಅದರಲ್ಲೂ ಭಾರತೀಯರಿಗೆ ಹೆಚ್ಚು ಬೇಡಿಕೆ ಇದೆ. ಕರ್ನಾಟಕದಿಂದ ಹೆಚ್ಚು ನರ್ಸಿಂಗ್ ಸಿಬ್ಬಂದಿ ಹೊರಬರಬೇಕಿದೆ. ವೈದ್ಯರು ಐದೂವರೆ ವರ್ಷಗಳ ಎಂಬಿಬಿಎಸ್ ಕೋರ್ಸ್ ಮಾಡಿದರೆ ಸಾಕಾಗುವುದಿಲ್ಲ. ಸಾಮಾನ್ಯ ಜನರಿಗೂ ತಜ್ಞರು ಬೇಕು. ಎಂಬಿಬಿಎಸ್ ಕೇವಲ ಆರಂಭವಷ್ಟೆ, ಇದು ಸ್ಪೆಷಲೈಸೇಷನ್ಗೆ ತಯಾರಿ ಕೇಂದ್ರ. ಈ ದೇಶದ ಘನತೆ ಎತ್ತಿ ಹಿಡಿಯುವ ವೈದ್ಯರು ನೀವಾಗಬೇಕು ಎಂದು ಕರೆ ನೀಡಿದರು.