ಹೆಣ್ಣು ಮಗುವಿಗೆ ಜನ್ಮವಿತ್ತ ಪುರುಷ: ಬೇಸ್ತು ಬಿದ್ದ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ, ಮಾರ್ಚ್ 28: ಕೊರೊನಾ ವಿಚಾರದಲ್ಲಿ ಹರಿದಾಡುತ್ತಿರುವ ವದಂತಿ, ಸುಳ್ಳುಸುದ್ದಿ ಮಾಡಿರುವ ಆವಾಂತರಗಳು ಒಂದೆರಡಲ್ಲ. ಧರ್ಮಸ್ಥಳ ದೇವಾಲಯದ ನಂದಾದೀಪ ಆರಿ ಹೋಯಿತು, ಉಡುಪಿ ಜಿಲ್ಲೆ ಕಾಪು ಮಾರಿಗುಡಿ ದೇವಾಲಯದಿಂದ ಟೀಗೆ ಅರಸಿಣ ಹಾಕಿ ಕುಡಿಯಬೇಕು ಎನ್ನುವ ಆದೇಶ ಬಂದಿದೆ..ಹೀಗೆ..
ಆದರೆ, ಇಲ್ಲೊಬ್ಬ, ಸಾಮಾಜಿಕ ತಾಣದಲ್ಲಿ ವದಂತಿ ಹರಿಯಬಿಟ್ಟವನು ಭಾರೀ ಕಿರಾತಕನೇ ಇರಬೇಕು.. ಇದನ್ನು ನಂಬಿ, ಚಿಕ್ಕಬಳ್ಳಾಪುರದ ಜನತೆ ಅವಧಿಗೆ ಮುನ್ನವೇ ಭರ್ಜರಿ ಏಪ್ರಿಲ್ ಫೋಲ್ ಗೆ ಒಳಗಾದರು. ಸಾಮಾಜಿಕ ತಾಣದಲ್ಲಿ ಹರಿದಾಡಿದ ವದಂತಿ ಹೀಗಿದೆ:
'ಆಂಧ್ರಪ್ರದೇಶದ ಹಿಂದೂಪುರದಲ್ಲಿ ಪುರುಷನೊಬ್ಬ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾನೆ. ಆ ಹೆಣ್ಣುಮಗು ಅರ್ಧ ಹಂದಿ, ಅರ್ಧ ಮನುಷ್ಯನನ್ನು ಹೋಲುತ್ತದೆ. ಇದು, ಜಗತ್ತಿಗೆ ಎದುರಾಗುವ ಕೇಡುಕಾಲದ ಸಂಕೇತ. ಹಾಗಾಗಿ, ಇಡೀ ರಾತ್ರಿ ಯಾರೂ ಮಲಗಬಾರದು'.

'ಇದನ್ನು ಯಾರು ಪಾಲಿಸುವುದಿಲ್ಲವೋ ಅವರಿಗೆ ಕೊರೊನಾ ಸೋಂಕು ತಗುಲುವುದು ಕನ್ಫರ್ಮ್. ಒಬ್ಬನೇ ಮಗನಿರುವ ಕುಟುಂಬದವರು, ಇನ್ನೊಬ್ಬನೇ ಮಗನಿರುವ ಇನ್ನೊಂದು ಮನೆಯಿಂದ ನೀರನ್ನು ತಂದು, ಮಧ್ಯರಾತ್ರಿ ಎರಡು ಗಂಟೆಗೆ ತೆಂಗಿನಮರದ ಬುಡದಲ್ಲಿ ಸ್ನಾನವನ್ನು ಮಾಡಬೇಕು/ಮಾಡಿಸಬೇಕು'.
'ಸ್ನಾನ ಮಾಡಿದ ನಂತರ ದೇವರಿಗೆ ಪೂಜೆ ಸಲ್ಲಿಸಬೇಕು. ಇದನ್ನು ಯಾರೂ ನಿರ್ಲ್ಯಕ್ಷ ಮಾಡಬಾರದು. ಮಾಡಿದರೆ, ಕೊರೊನಾ ಸಾವುನೋವಿಗೆ ನೀವೇ ಕಾರಣರಾಗುತ್ತೀರಾ' ಎನ್ನುವ ಸಂದೇಶ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಸಂಚಲನ ಮೂಡಿಸಿತ್ತು.
ಈ ಸುದ್ದಿಯನ್ನು ನಂಬಿದ ಜನತೆ, ನಿದ್ದೆಯಲ್ಲಿ ಮಲಗಿದ್ದ ಪುಟ್ಟ ಗಂಡು ಮಕ್ಕಳನ್ನೂ ಎಬ್ಬಿಸಿ, ಸ್ನಾನ ಮಾಡಿಸಿದ್ದಾರೆ. ಎಲ್ಲಾ ಆದ ಮೇಲೆ ಇದೊಂದು ಸುಳ್ಳುಸುದ್ದಿಯೆಂದು ತಿಳಿದುಬಂದಿದೆ. ಇಂತಹ ಸುದ್ದಿ ಇನ್ನು ಮುಂದೆ ಬಂದರೆ, ಪೊಲೀಸರಿಗೆ ಮೊದಲು ತಿಳಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್ ಕುಮಾರ್ ಸೂಚಿಸಿದ್ದಾರೆ.












Click it and Unblock the Notifications