ನಂದಿ ಬೆಟ್ಟದ ಮೇಲೆ ಖಾಸಗಿ ವಾಹನಗಳಿಗೆ ನಿರ್ಬಂಧ
Recommended Video
ಚಿಕ್ಕಬಳ್ಳಾಪುರ, ನವೆಂಬರ್ 14 : ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದ ಮೇಲೆ ಖಾಸಗಿ ವಾಹನ ನಿಷೇಧಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ವಾರಂತ್ಯಗಳಲ್ಲಿ ವಾಹನ ನಿಷೇಧವನ್ನು ಜಾರಿಗೆ ತರಲಾಗುತ್ತದೆ.
ಅರಣ್ಯ ಇಲಾಖೆ ಹಿವಮದ್ ಗೋಪಾಲಸ್ವಾಮಿ ಬೆಟ್ಟದ ಮೇಲೆ ಖಾಸಗಿ ವಾಹನ ನಿಷೇಧಿಸಿದೆ. ಇದೇ ಮಾದರಿಯಲ್ಲಿ ನಂದಿ ಬೆಟ್ಟದ ಮೇಲೆ ವಾಹನ ಸಂಚಾರ ನಿಷೇಧಿಸಲು ಬೆಟ್ಟದ ನಿರ್ವಹಣೆಯ ಹೊಣೆ ಹೊತ್ತಿರುವ ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ.
ವಾರಂತ್ಯದಲ್ಲಿ ಸಾವಿರಾರು ಜನರು ಸೂರ್ಯೋದಯ ವೀಕ್ಷಣೆ ಮಾಡಲು ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಖಾಸಗಿ ವಾಹನಗಳು ಬೆಟ್ಟದ ಮೇಲೆ ಹೋಗುವುದರಿಂದ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ವಾಯು ಮಾಲಿನ್ಯ ಉಂಟಾಗುತ್ತಿದೆ.

ಆದ್ದರಿಂದ, ತೋಟಗಾರಿಕಾ ಇಲಾಖೆ ವಾಹನ ಸಂಚಾರ ಬಂದ್ ಮಾಡಲು ತೀರ್ಮಾನಿಸಿದೆ. ಪ್ರವಾಸಿಗರು ಬೆಟ್ಟದ ಕೆಳಗೆ ತಮ್ಮ ವಾಹನವನ್ನು ಪಾರ್ಕ್ ಮಾಡಬೇಕಾಗುತ್ತದೆ. ಅಲ್ಲಿಂದ ಬೆಟ್ಟದ ಮೇಲೆ ತೆರಳಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಕೆಎಸ್ಆರ್ಟಿಸಿ ಅಧಿಕಾರಿಗಳು, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈ ಕುರಿತು ಒಂದು ಸುತ್ತಿನ ಸಭೆ ನಡೆಸಿದ್ದಾರೆ. ನಂದಿ ಬೆಟ್ಟದ ತಪ್ಪಲಿನಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಯಿತು.
ಜಿಲ್ಲಾಧಿಕಾರಿಗಳಿಗೆ ಪಾರ್ಕಿಂಗ್ಗೆ ಸೂಕ್ತ ಪ್ರದೇಶವನ್ನು ಗುರುತಿಸುವಂತೆಯೂ ಸೂಚನೆ ಕೊಡಲಾಗಿದೆ. ಪಾರ್ಕಿಂಗ್ ಸ್ಥಳ ನಿರ್ಮಾಣವಾದ ಬಳಿಕ ಬೆಟ್ಟದ ಮೇಲೆ ವಾರಂತ್ಯದಲ್ಲಿ ಖಾಸಗಿ ವಾಹನ ನಿಷೇಧಿಸಲಾಗುತ್ತದೆ.
ವಾಹನಗಳನ್ನು ಬೆಟ್ಟದ ಮೇಲೆ ನಿರ್ಬಂಧಿಸುವುದರಿಂದ ನಂದಿ ಬೆಟ್ಟದಲ್ಲಿನ ವಾಯು ಮಾಲಿನ್ಯವೂ ಕಡಿಮೆಯಾಗಲಿದೆ. ಶನಿವಾರ ಮತ್ತು ಭಾನುವಾರ ಬೆಂಗಳೂರು ನಗರದಿಂದಲೇ ಸಾವಿರಾರು ಜನರು ನಂದಿ ಬೆಟ್ಟ ವೀಕ್ಷಣೆಗೆ ತೆರಳುತ್ತಾರೆ.












Click it and Unblock the Notifications