ಇಂದಿನಿಂದ ವಾರಾಂತ್ಯದಲ್ಲೂ ನಂದಿ ಬೆಟ್ಟ ಪ್ರವೇಶ ಮುಕ್ತ; ಪಾಸ್ ಇದ್ದವರಿಗೆ ಮಾತ್ರ ಅವಕಾಶ
ಚಿಕ್ಕಬಳ್ಳಾಪುರ, ಮಾರ್ಚ್ 26: ಇಂದಿನಿಂದ ವಾರಾಂತ್ಯದಲ್ಲೂ ವಿಶ್ವವಿಖ್ಯಾತ ಗಿರಿಧಾಮ ನಂದಿ ಬೆಟ್ಟ ಪ್ರವೇಶಕ್ಕೆ ಮುಕ್ತ ಅವಕಾಶ ಇರಲಿದೆ. ಹೀಗಾಗಿ ಶನಿವಾರ ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಂದಿ ಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ.
ಪಾಸ್ ಇದ್ದವರಿಗೆ ಮಾತ್ರ ನಂದಿ ಗಿರಿಧಾಮಕ್ಕೆ ಪ್ರವೇಶ ಅವಕಾಶ ಇರಲಿದ್ದು, ಆನ್ಲೈನ್ನಲ್ಲಿ ಶೇ.50ರಷ್ಟು ಪಾಸ್ಗಳು ಲಭ್ಯವಿರಲಿದೆ. ಇನ್ನೂ ಶೇಕಡಾ 50ರಷ್ಟು ಪಾಸ್ಗಳು ಕೌಂಟರ್ನಲ್ಲಿ ವಿತರಣೆ ಮಾಡಲಾಗುತ್ತದೆ.
ನಂದಿ ಗಿರಿಧಾಮದ ಪ್ರವೇಶದಲ್ಲಿರುವ ಪಾಸ್ ಕೌಂಟರ್ನಲ್ಲಿ 1,000 ಬೈಕ್, 300 ಫೋರ್ ವ್ಹೀಲರ್ ವಾಹನಕ್ಕೆ ಮಾತ್ರ ಅವಕಾಶ ಇದೆ. ಬೆಟ್ಟದಲ್ಲಿ ಜನಜಂಗುಳಿಯನ್ನು ತಡೆಯುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ರೀತಿಯ ಕ್ರಮ ತೆಗೆದುಕೊಂಡಿದೆ.

ವಾರಾಂತ್ಯದ ದಿನಗಳಾದ ಶನಿವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶುಕ್ರವಾರ ಸಂಜೆ 6 ಗಂಟೆಯೊಳಗೆ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಪಡೆಯಬೇಕು. ಇನ್ನು ಭಾನುವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶನಿವಾರ ಸಂಜೆ 6 ಗಂಟೆಯೊಳಗೆ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಪಡೆಯಬೇಕು.
ಆನ್ಲೈನ್ನಲ್ಲಿ ಪ್ರವೇಶ ಪತ್ರ ದೊರಕದವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ನಲ್ಲಿ ಆಫ್ಲೈನ್ ಟಿಕೆಟ್ ಪಡೆದು ಪ್ರವಾಸ ಕೈಗೊಳ್ಳಬಹುದು. ಶೇ.50ರಷ್ಟು ಆನ್ಲೈನ್ ಮತ್ತು ಶೇ.50ರಷ್ಟು ಆಫ್ಲೈನ್ ಟಿಕೆಟ್ಗಾಗಿ ನಿಗದಿಗೊಳಿಸಲಾಗಿದ್ದು, ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡುವವರು ನಂದಿಬೆಟ್ಟಕ್ಕೆ ಭೇಟಿ ನೀಡಲು KSTDC ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬೇಕು.

ಆನ್ಲೈನ್/ಆಫ್ಲೈನ್ ಟಿಕೆಟ್ ಸಿಗದವರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಪ್ರವಾಸಿಗರು ಆನ್ಲೈನ್ ಟಿಕೆಟ್ ಖಾತರಿಪಡಿಸಿಕೊಂಡು ಪ್ರವಾಸ ಕೈಗೊಳ್ಳಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಮನವಿ ಮಾಡಿದ್ದಾರೆ.
ನಿಲುಗಡೆಯನುಸಾರ ವಾಹನಗಳ ಪ್ರವೇಶಕ್ಕೆ ಅವಕಾಶ
ನಂದಿ ಗಿರಿಧಾಮದ ಮೇಲ್ಭಾಗದಲ್ಲಿ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್ಸು ಸೇರಿದಂತೆ 300 ಲಘು (ಪೋರ್ ವೀಲರ್) ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು.
ಬೆಟ್ಟದ ಮೇಲ್ಭಾಗಕ್ಕೆ ಚಲಿಸಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್ಗಳನ್ನು ವಿತರಿಸಿ, ನಂದಿ ಗಿರಿಧಾಮ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ದ್ವಿಚಕ್ರ ವಾಹನದಲ್ಲಿ ಬರುವ ಒಬ್ಬ ಸವಾರನಿಗೆ 50 ರೂ. ಇಬ್ಬರು ಸವಾರರ ವಾಹನಕ್ಕೆ 70 ರೂ, ನಾಲ್ಕು ಚಕ್ರದ ಎಲ್.ಎಂ.ವಿ ಲಘು ವಾಹನಗಳಿಗೆ 125 ರೂ.ಗಳು, ನಾಲ್ಕು ಚಕ್ರದ ಎಚ್.ಜಿ.ವಿ ವಾಹನಗಳಿಗೆ 150 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.

ನಂದಿ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಸುಮಾರು 10ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಭಾನುವಾರ ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ನಿಂತಿದ್ದರು. ಪ್ರವೇಶ ನೀಡದೇ ಜನರನ್ನು ವಾಪಸ್ ಕಳಿಸಿದ್ದರು.
ಪ್ರವಾಸಿಗರಿಗೆ ನಿರ್ಬಂಧ;
2021ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ನಂದಿ ಗಿರಿಧಾಮದ ರಸ್ತೆ ಕುಸಿದ ಪರಿಣಾಮ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಆಗ ಗಿರಿಧಾಮದ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.
ರಸ್ತೆ ದುರಸ್ಥಿ ಕಾಮಗಾರಿ ಪೂರ್ಣಗೊಂಡ ಬಳಿಕ ಡಿಸೆಂಬರ್ 1ರಿಂದ ಗಿರಿಧಾಮಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನೀಡಲಾಗಿತ್ತು. ಆದರೆ ವಾರಾಂತ್ಯದ ಶನಿವಾರ ಮತ್ತು ಭಾನುವಾರದ ದಿನಗಳಂದು ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು.
ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಠವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮ ಜಿಲ್ಲೆಯ ಅಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿತ್ತು.












Click it and Unblock the Notifications