ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟು ಜನರನ್ನು ಯಾಮರಿಸುತ್ತಿದ್ದಾರೆ: ಸುಧಾಕರ್ ವಿರುದ್ಧ ಕೆ.ಪಿ.ಬಚ್ಚೇಗೌಡ ಆರೋಪ
ಎರಡು ಬಾರಿ ಶಾಸಕನಾಗಿರುವ ಕೆ. ಸುಧಾಕರ್ ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟುಕೊಂಡು ಜನರನ್ನು ಯಾಮರಿಸಿಕೊಂಡು ಬರುತ್ತಿದ್ದಾರೆ ಎಂದು ಕೆ.ಪಿ. ಬಚ್ಚೇಗೌಡ ಆರೋಪಿಸಿದರು.
ಚಿಕ್ಕಬಳ್ಳಾಪುರ, ಫೆಬ್ರವರಿ, 05: ಕಳೆದ 4 ವರ್ಷಗಳಿಂದ ಬಡವರಿಗೆ ನಿವೇಶನ ಹಂಚಿಕೆ ಮಾಡದ ಸಚಿವ ಡಾ.ಕೆ.ಸುಧಾಕರ್, ಈಗ ತಾರತೂರಿಯಲ್ಲಿ ಹಕ್ಕುಪತ್ರ ವಿತರಿಸುವ ಮೂಲಕ ಬಡವರನ್ನು ವಂಚಿಸಲು ಮುಂದಾಗಿದ್ದಾರೆ. ಹಕ್ಕುಪತ್ರ ವಿತರಿಸುವ ಮೊದಲು ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಗುರುತಿಸಿಲ್ಲ. ತುಟಿಗೆ ತುಪ್ಪ ಸವರಿ ಮತ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಚಿಕ್ಕಬಳ್ಳಾಪುರದಲ್ಲಿ ಆರೋಪಿಸಿದರು. ಹಾಗೆಯೇ ಎರಡು ಬಾರಿ ಶಾಸಕನಾಗಿರುವ ಸುಧಾಕರ್ ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟುಕೊಂಡು ಜನರನ್ನು ಯಾಮರಿಸಿಕೊಂಡು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಶನಿವಾರ ನಡೆದ ಜೆಡಿಎಸ್ ಕುಟುಂಬ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಚಿವ ಸುಧಾಕರ್ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇಲ್ಲದಿದ್ದರೆ ಜನರಿಗೆ ಅವರು ಸಿಗುತ್ತಿರಲಿಲ್ಲ ಎಂದರು.
ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದ್ದು, ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಬಂದಿಲ್ಲ. ನನಗಿಂತ ಪ್ರಮಾಣಿಕರು ಇದ್ದರೆ ಅವರಿಗೆ ಮತ ನೀಡಿದರೆ ನನಗೆ ಅಭ್ಯಂತರವಿಲ್ಲ. ಭ್ರಷ್ಟರನ್ನು ಕ್ಷೇತ್ರದಿಂದ ಒಡಿಸುವ ಕೆಲಸ ಮಾಡಬೇಕು. ಅವರು ಅಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಎಚ್ಚರಿಸುವ ಕೆಲಸ ಕಾರ್ಯಕರ್ತರ ಮೇಲಿದೆ. ಜೆಡಿಎಸ್ ಕುಟುಂಬ ಸಮಾವೇಶ ನಿಗಧಿಯಾದ ನಂತರ 20 ಕೋಟಿ ರೂಪಾಯೊ ಸಾಲ ವಿತರಣೆ ಕಾರ್ಯಕ್ರಮ ನಿಗದಿ ಮಾಡಿದೆ. ಎರಡು ಬಾರಿ ಶಾಸಕನಾಗಿರುವ ಸುಧಾಕರ್ ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟುಕೊಂಡು ಜನರನ್ನು ಯಾಮರಿಸಿಕೊಂಡು ಬರುತ್ತಿದ್ದಾರೆ. ಜನ ಯಾವುದೇ ಅಮಿಷಗಳಿಗೆ ಒಳಗಾಗಬಾರದು ಎಂದು ಸಲಹೆ ನೀಡಿದರು.
Karnataka Assembly Election 2023: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಬಡ ಜನರನ್ನು ವಂಚಿಸುವ ಪ್ರಯತ್ನ
ಹಿಂದೆ ಸಿದ್ದರಾಮಯ್ಯನವರ ಜೊತೆ ಇದ್ದಾಗ ಯಾರೊಬ್ಬರಿಗೂ ನಿವೇಶನ ನೀಡಲಿಲ್ಲ. ಇದುವರೆಗೂ ಎಲ್ಲೂ ಬಡಾವಣೆ ನಿರ್ಮಿಸಿಲ್ಲ, ನಿವೇಶನ ಗುರುತಿಸಿಲ್ಲ. ಗ್ರಾಮೀಣ ಭಾಗದ ಬಡ ಜನರನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದಾಗಿ ಜನ ಎಚ್ಚರಿಕೆಯಿಂದ ಇರಬೇಕು. ತುಟಿಗೆ ತುಪ್ಪ ಸವರಿ ಹೋದರೆ ಮತ್ತೆ ಆ ಮನುಷ್ಯ ಕೈಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಅಮಯಾಕರ ವಿರುದ್ಧ ದೂರು
ಕ್ಷೇತ್ರದಲ್ಲಿ ಆಡಳಿತ ಪಕ್ಷದ ಮುಖಂಡರು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಅಮಯಾಕರ ವಿರುದ್ಧ ದೂರುಗಳನ್ನು ದಾಖಲಿಸಿರುವ ಕೆಲಸ ಆಗುತ್ತಿದ್ದೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಬಾಲ ಕತ್ತರಿಸಬೇಕಾಗುತ್ತದೆ. ನಂತರ ಬೆಕ್ಕಿನಂತೆ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೆಣಗಳ ಮೇಲೆ ಲೂಟಿ ಮಾಡಿರುವ ಹಣ
ಜೆಡಿಎಸ್ ವೀಕ್ಷಕಿ ಕವಿತಾ ರೆಡ್ಡಿ ಮಾತನಾಡಿ, ಕ್ಷೇತ್ರದ ಸಚಿವ ಡಾ.ಕೆ.ಸುಧಾಕರ್ ಕೊರೊನಾ ಹೆಣಗಳ ಮೇಲೆ ಲೂಟಿ ಮಾಡಿರುವ ಹಣವನ್ನು ಮತದಾರರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಎಷ್ಟೋ ಆತ್ಮಗಳ ದುಡ್ಡು ಅದು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಗೆ ಕೊರತೆಯಿಲ್ಲ. ಅಭ್ಯರ್ಥಿ ಗೆಲುವಿಗೆ ಇರುವ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರಾಗಿ, ಆರೋಗ್ಯ ಸಚಿವರಾಗಿ ಮಾಡಿರುವ ಕೆಲಸವೇನು. ಮಹಿಳೆಯರನ್ನು ಮಹಿಳೆಯರೆ ಜಾಗೃತಿಗೊಳಿಸಬೇಕು. ಬೂತ್ ಮಟ್ಟದಿಂದ ಈ ಜಾಗೃತಿ ಕೆಲಸ ಆಗಬೇಕು. ಮುಂದಿನ ಚುನಾವಣೆಯಲ್ಲಿ ಕೆ.ಪಿ.ಬಚ್ಚೇಗೌಡರನ್ನು ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸುಳ್ಳು ಕೇಸ್ಗಳನ್ನ ಹಾಕಿಸಿ ಬೆದರಿಸ್ತಿದ್ದಾರೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾಕಾಂತ್ ಮಾತನಾಡಿ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಕುಟುಂಬ ಸಮಾವೇವನ್ನು ವಿಫಲಗೊಳಿಸಲು ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. 10 ವರ್ಷಗಳಿಂದ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸ್ಗಳನ್ನು ಹಾಕಿಸಿ ಬೆದರಿಸುತ್ತಿದ್ದಾರೆ. ಸ್ವಾಭಿಮಾನದಿಂದ ಜೀವನ ನಡೆಸುವ ವಾತಾವರಣ ಸೃಷ್ಟಿಯಾಗಬೇಕು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸಮಾವೇಶದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ತಾಲೂಕು ಅಧ್ಯಕ್ಷ ಮುನಿರಾಜು, ಮುಖಂಡರಾದ ಚದಲಪುರ ನಾರಾಯಣಸ್ವಾಮಿ, ಡಾ.ಎನ್.ನಾರಾಯಣಸ್ವಾಮಿ, ಡಾ.ಪ್ರಶಾಂತ್, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ, ಯುವ ಘಟಕದ ಉಪಾಧ್ಯಕ್ಷ ಜೀಡಮಾಕಲಹಳ್ಳಿ ಅಖಿಲ್ ರೆಡ್ಡಿ, ಯದಾರ್ಲಹಳ್ಳಿ ಮಂಜಣ್ಣ, ಜೀಗಾನಹಳ್ಳಿ ವೆಂಕಟೇಶ್, ನಮಿಲಗುರ್ಕಿ ವೆಂಕಟನಾರಾಯಣ, ಚನ್ನಹಳ್ಳಿ ಸಿ.ವಿ. ಲಕ್ಷ್ಮಣರೆಡ್ಡಿ, ತಾಲೂಕು ಅಧ್ಯಕ್ಷ ಅಣ್ಣಮ್ಮ, ಯುವ ಘಟಕದ ಅಧ್ಯಕ್ಷೆ ಶಿಲ್ಪಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.