ಚಿಕ್ಕಬಳ್ಳಾಪುರದಲ್ಲಿ ಮಳೆಯ ಅಬ್ಬರ: ಕುಶಾವತಿ ನದಿಯಲ್ಲಿ ಕೊಚ್ಚಿ ಹೋದ ಗ್ರಾ.ಪಂ. ಸದಸ್ಯ
ಚಿಕ್ಕಬಳ್ಳಾಪುರ, ನವೆಂಬರ್ 13: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ನವಿಲುಗುರ್ಕಿ ರಸ್ತೆ ಬಳಿ ರಭಸವಾಗಿ ನದಿ ನೀರು ಹರಿಯುತ್ತಿದ್ದು, ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ನವಿಲಗುರ್ಕಿಯ ಗಂಗಾಧರ್ ಗೌಡ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಗುಡಿಬಂಡೆಯ ಅಮಾನಿಬೈರಸಾಗರ ಕೆರೆಗೆ ಕುಶಾವತಿ ನದಿ ನೀರು ಬರುವಂತಹ ನವಿಲುಗುರ್ಕಿ ಬಳಿ ರಸ್ತೆಯ ಮೇಲೆ ದೊಡ್ಡ ಕಾಲುವೆ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು, ಗ್ರಾ.ಪಂ. ಸದಸ್ಯ ನವಿಲುಗುರ್ಕಿಯ ಗಂಗಾಧರ್ ಗೌಡ ಈ ರಸ್ತೆ ಮೂಲಕ ರಾಮಪಟ್ಟಣ ಗ್ರಾಮದಿಂದ ನವಿಲುಗುರ್ಕಿಗೆ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದಾಗ, ನೀರಿನ ರಭಸಕ್ಕೆ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳಕ್ಕೆ ಗುಡಿಬಂಡೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಗಂಗಾಧರ್ ಅವರನ್ನು ಹುಡುಕಾಡುತ್ತಿದ್ದಾರೆ. ಗಂಗಾಧರ್ ಆರೋಗ್ಯ ಸಚಿವ ಸುಧಾಕರ್ರವರ ಕಟ್ಟಾ ಅಭಿಮಾನಿ ಎನ್ನಲಾಗಿದೆ. ಗುಡಿಬಂಡೆ ಹಾಗೂ ಪೇರೆಸಂದ್ರ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಗಂಗಾಧರ್ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಸೇತುವೆ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ನೀರಿನಲ್ಲಿ ಸಾಹಸ ಮಾಡಲು ಹೋದ ವ್ಯಕ್ತಿ ಇದುವರೆಗೂ ಪತ್ತೆಯಾಗದೇ ಇರುವುದು ಕುಟುಂಬಸ್ಥರು ದುಃಖದಲ್ಲಿದ್ದರೆ, ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿದೆ.












Click it and Unblock the Notifications