ಚಿಕ್ಕಬಳ್ಳಾಪುರದಲ್ಲಿ ಸಿರಿಧಾನ್ಯ ಬೆಳೆಯಲು ರೈತ ಮಹಿಳೆಯರಿಗೆ ಉತ್ತೇಜನ
ಚಿಕ್ಕಬಳ್ಳಾಪುರ ಡಿಸೆಂಬರ್ 15: ಸಾಂಪ್ರದಾಯಿಕ ಕೃಷಿಯಲ್ಲಿ ಸಿರಿಧ್ಯಾನಗಳ ಕೃಷಿಯು ರೈತರಿಗೆ ವರದಾನವಾದ ವಿಶೇಷ ಮತ್ತು ವಿಶಿಷ್ಟವಾದ ಕೃಷಿಯಾಗಿದೆ. ಹಿಂದಿನ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಈಗಿನ ಕಾಲದಲ್ಲೂ ಸಹ ವಿಶಿಷ್ಟ ಗುಣಗಳಿಂದ ಕೂಡಿದ ಭೂಮಿಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬಹುದೆಂದು ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ರವರು ತಿಳಿಸಿದರು.
ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ 2023-24ನೇ ಸಾಲಿನ ಆತ್ಮಯೋಜನೆ ಹಾಗೂ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ "ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ"ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ವಿಧವಿಧವಾದ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಸಿರಿಧಾನ್ಯ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ದೇಶ ಅಗ್ರಸ್ಥಾನದಲ್ಲಿದೆ. ಅಕ್ಕಿ, ಗೋದಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೆ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ ಎಂದು ರೈತ ಮತ್ತು ರೈತ ಮಹಿಳೆಯರಿಗೆ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಿದರು.
ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳು:
ಎಲ್ಲಾ ತಾಲ್ಲೂಕುಗಳಿಂದ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿ ಬಗೆ ಬಗೆಯ ಸಿಹಿ ಮತ್ತು ಖಾರ ಖಾದ್ಯಗಳಾದ ನವಣೆ, ಸಜ್ಜೆ ಉಂಡೆ, ನವಣೆ ಬಿಸಿ ಬೇಳೆ ಬಾತ್, ನವಣೆ ಪಾಯಸ, ಸಜ್ಜೆ ಸಂಗಟಿ, ರಾಗಿ ಲಟ್ಟು, ಶಾವಿಗಿ ಹುಗ್ಗಿ, ಸಾವೆ ಬಿಸ್ಕತ್, ಸಜ್ಜೆ ಜಿಲೇಬಿ, ಕೊರಲೆ ಪಾಯಸ, ನವಣೆ ಲಡ್ಡು, ನವಣೆ ಬಿರಿಯಾನಿ, ಸಜ್ಜೆ ಮಾದಲಿ ಸೇರಿದಂತೆ ಬಗೆ ಬಗೆಯ ಖಾದ್ಯ ಮತ್ತು ತಿನಿಸುಗಳ ಕುರಿತು ಮೆಚ್ಚುಗೆ ವ್ಯಕ್ತವಾಯಿತು.
ಚಿಂತಾಮಣಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಮಂಜುಳಾ ರವರು ಮಾತನಾಡಿ, ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು ಮತ್ತು ರೈತರು ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಲಾಭ ಗಳಿಸಬಹುದು ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆಯ ಪ್ರಶ್ನೆಯೇ ಇರುವುದಿಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟ ಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸಹ ಪ್ರದ್ಯಾಪಕರಾದ ಡಾ. ಸ್ನೇಹಲ್ ಗಿರಿಲಾಲ್ ರವರು ಮಾತನಾಡಿ, ಸರ್ವ ರೋಗಕ್ಕೂ ರಾಮಬಾಣ ಸಿರಿಧಾನ್ಯ. ಸಿರಿಧಾನ್ಯದೊಂದಿಗೆ ನಿಮ್ಮ ಆರೋಗ್ಯಕರ ಜೀವನ ಪ್ರಾರಂಭಿಸಿ, ಇತ್ತೀಚಿಗೆ ಬದಲಾದ ಜೀವನ ಶೈಲಿಯಿಂದ ಮನುಷ್ಯರಿಗೆ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹ ಹೀಗೆ ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಜನರು ನಿಶಕ್ತರಾಗಿದ್ದಾರೆ.
ಹಾಗಾಗಿ ಈ ಸಂದಂರ್ಭದಲ್ಲಿ ಪೌಷ್ಠಿಕಾಂಶಗಳನ್ನು) ಒಳಗೊಂಡಿರುವ ಸಿರಿಧಾನ್ಯ ಅವಶ್ಯಕತೆ ಜನರಿಗಿದೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗದೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ವಿಪರೀತ ಬೊಜ್ಜು ಮತ್ತು ಕೊಬ್ಬಿನ ಅಂಶ ಜೊತೆಗೆ ಕೊಲೆಸ್ಟ್ರಾಲ್ ಅಂಶ ತುಂಬಿಕೊಳ್ಳುವುದನ್ನು ತಪ್ಪಿಸುತ್ತದೆ ಎಂದು ತಿಳಿಸಿದರು.
ಜೊತೆಗೆ ಜನರಿಗೆ ಆಹಾರ ಮತ್ತು ಪಶುಗಳ ಮೇವಿನ ಬೆಳೆಯಾಗಿರುವ ಈ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇಲ್ಲ. ಮಳೆಯಾಧರಿತವಾಗಿ ಹಾಗೂ ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡ ಬೆಳೆಯುವ ಧಾನ್ಯಗಳೆಂದರೆ ಸಿರಿಧಾನ್ಯಗಳಾಗಿವೆ ಎಂದು ತಿಳಿಸಿದರು.
ಕುರುಬೂರು ಕೆ.ವಿ.ಕೆ ತಾಂತ್ರಿಕ ಅಧಿಕಾರಿ ಡಾ. ಆರ್. ಅರುಣಾಜಿ ರವರು ಮಾತನಾಡಿ, ಸಿರಿಧಾನ್ಯಗಳಲ್ಲಿ ಬಹಳಷ್ಟು ಹೆಚ್ಚಿನ ಪ್ರಮಾಣದ ಪೌಷ್ಠಿಕ ಸತ್ವಗಳಾದ ಮೇಗ್ನಿಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳು ಸೇರಿವೆ. ಆದರೆ ಸಿರಿಧಾನ್ಯಗಳಲ್ಲಿ ಯಾವುದೇ ಬಗೆಯ ಗುಟ್ಲೆನ್ ಅಂಶ ಮತ್ತು ಆಮ್ಲದ ಅಂಶ ಇರುವುದಿಲ್ಲ.
ಸಿರಿಧಾನ್ಯಗಳ ಆಹಾರದಲ್ಲಿರುವ ಅಂಶಗಳು ಮನುಷ್ಯನ ಆರೋಗ್ಯವನ್ನು ಸಮತೋಲನ ರೀತಿಯಲ್ಲಿ ಕಾಪಾಡುವುದರಿಂದ ಹೃದಯ ಸಮಸ್ಯೆಗಳಾಗಲಿ ಅಥವಾ ಬೇರೆ ಇನ್ನಾವುದೇ ದುಷ್ಟ ಖಾಯಿಲೆಗಳಾಗಲಿ ಕಾಡುವುದಿಲ್ಲ. ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೊಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಠಿಕಾಂಶಗಳ ಲಾಭವೇ ಹೆಚ್ಚು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಪಿ. ಮಂಜುರಾಣಿ, ಡಿ.ಎ.ಟಿ.ಸಿ ಕಾಗತಿ ಸಹಾಯ ಕೃಷಿ ನಿರ್ದೇಶಕಿ ಚೇತನಾ, ಕುರುಬೂರು ಕೆ.ವಿ.ಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಪಾಪಿರೆಡ್ಡಿ, ವಿಜ್ಞಾನಿ ವಿಶ್ವನಾಥ್, ಉಪ ಯೋಜನಾ ನಿರ್ದೇಶಕರು(ಆತ್ಮ) ಸತೀಶ್ ಕುಮಾರ್, ಕಂಪ್ಯೂಟರ್ ಪ್ರೋಗ್ರಾಮರ್ ನಟರಾಜು.ಎಸ್, ಆತ್ಮ ಸಿಬ್ಬಂದಿಗಳು, ಡಿ.ಎ.ಟಿ.ಸಿ ಕಾಗತಿ ಸಿಬ್ಬಂದಿಗಳು, ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.












Click it and Unblock the Notifications