ಅವರು ಮಾತ್ರವೇ ಗೌಡರಾ? ನಾವು ಗೌಡರಲ್ಲವಾ?: ಡಿಕೆಶಿ
ದೇವನಹಳ್ಳಿ, ಏಪ್ರಿಲ್ 10: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಅವರ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಪ್ರಚಾರ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತಿ ಲೆಕ್ಕಾಚಾರಕ್ಕೆ ಮಾತಿನ ಪೆಟ್ಟು ಕೊಟ್ಟ ಡಿ.ಕೆ.ಶಿ, ಬಿಜೆಪಿಯವರು ಮಾತ್ರವೇ ಹಿಂದೂಗಳಾ, ನಾವು ಹಿಂದೂಗಳಲ್ಲವಾ, ನಾನು ಗೌಡನಲ್ಲವಾ, ದೇವೇಗೌಡ, ಕುಮಾರಸ್ವಾಮಿ ಗೌಡರಲ್ಲವಾ? ಬಚ್ಚೇಗೌಡ ಮಾತ್ರವೇ ಗೌಡರಾ? ಎಂದು ಪ್ರಶ್ನೆ ಮಾಡಿದರು.
ಕಳೆದ ಹತ್ತು ವರ್ಷದಿಂದ ಬಚ್ಚೇಗೌಡ ದಬ್ಬಾಳಿಕೆಗೆ ಅಂಕುಶ ಹಾಕಿ ಇಡಲಾಗಿದೆ. ಈಗ ಅವರಿಗೆ ಮತ ನೀಡಿ ಗೆಲ್ಲಿಸಿ ಮತ್ತೆ ಗೂಂಡಾ ರಾಜ್ಯ ತಂದುಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ವೀರಪ್ಪ ಮೊಯ್ಲಿ ಅಲ್ಲ ನಾನೇ ಚುನಾವಣೆಗೆ ನಿಂತಿದ್ದೀನಿ’
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಚುನಾವಣೆಗೆ ನಿಂತಿದ್ದಾರೆ ಎಂಬುದನ್ನು ಮರೆತುಬಿಡಿ, ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿದುಕೊಂಡು ಮತ ಹಾಕಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

‘ಹಳೆಯದ್ದು ಮರೆಯಿರಿ ಒಟ್ಟಾಗಿ ಕೆಲಸ ಮಾಡಿ’
ಜೆಡಿಎಸ್-ಕಾಂಗ್ರೆಸ್ ಈ ಭಾಗದಲ್ಲಿ ದಶಕಗಳಿಂದಲೂ ಜಿದ್ದಾ-ಜಿದ್ದಿ ರಾಜಕಾರಣ ಮಾಡಿಕೊಂಡು ಬಂದಿದೆ, ಆದರೆ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಳೆಯದನ್ನು ಮರೆತು ನಾವು ಒಂದಾಗಿದ್ದೇವೆ, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿ ಎಂದು ಅವರು ಹೇಳಿದರು.

ಬಿಜೆಪಿಯವರು ಕೇವಲ ಸುಳ್ಳು ಹೇಳಿದ್ದಾರೆ
ಬಿಜೆಪಿಯವರು ವೋಟು ಕೇಳಲು ಬಂದರೆ ಹದಿನೈದು ಲಕ್ಷ ಖಾತೆಗೆ ಏಕೆ ಬರಲಿಲ್ಲ ಎಂದು ಪ್ರಶ್ನೆ ಮಾಡಿ, ಉದ್ಯೋಗಗಳನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿ, ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಲೇ ಬಂದಿದ್ದಾರೆ ಎಂದು ಡಿಕೆಶಿ ಹೇಳಿದರು.

ಮೂರು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ
ಡಿಕೆ ಶಿವಕುಮಾರ್ ಅವರು ಇಂದು ಕೋಲಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹಾಗೂ ಸ್ಥಳೀಯ ಕಾಂಗ್ರೆಸ್-ಜೆಡಿಎಸ್ ಮುಖಂಡರು ಇದ್ದರು.












Click it and Unblock the Notifications