ಮಹಾಮಾರಿ ಕೊರೊನಾ 4ನೇ ಅಲೆಯ ಭೀತಿ: ಚಿಕ್ಕಬಳ್ಳಾಪುರದಲ್ಲಿ ಲಸಿಕೆಗೆ ಹೆಚ್ಚಿದ ಬೇಡಿಕೆ
ಚಿಕ್ಕಬಳ್ಳಾಪುರ, ಜನವರಿ, 17: ಕೊರೊನಾ 4ನೇ ಅಲೆಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಲು ಪ್ರತಿಯೊಬ್ಬರು ಮುಂಜಾಗ್ರತೆ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಕಡ್ಡಾಯ ಮಾಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಮೊದಲ ಸತ್ತಿನ ಲಸಿಕೆ 10,88,669, ಎರಡನೇ ಸುತ್ತಿನ ಲಸಿಕೆ 18,93,779 ಹಾಗೂ ಮುಂಜಾಗ್ರತಾ ಲಸಿಕೆಯನ್ನು 2,86,460 ಮಂದಿಗೆ ನೀಡಲಾಗಿದೆ. ರೂಪಾಂತರ ತಳಿಯ ಓಮೈಕ್ರಾನ್ನ ಉಪ ತಳಿ ಕೋವಿಡ್ ಬಿಎಫ್7 ವೈರಾಣು ಭೀತಿ ಶುರುವಾಗುತ್ತಿದ್ದಂತೆ 18 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯಲು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಅನಾವರಣಗೊಳಿಸಿದ ಬಸವರಾಜ ಬೊಮ್ಮಾಯಿ
ಸಾರ್ವಜನಿಕರು ಲಸಿಕೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯ ನಿರಂತರವಗಿ ನಡೆಯುತ್ತಿದೆ. ಹಾಗಯೇ ಜನರಿಗೆ ಲಭ್ಯವಿರುವ ಲಸಿಕೆ ನೀಡಲಾಗುತ್ತಿದೆ. ಮೊದಲನೇ ಸುತ್ತಿನಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನೇ ಹಚ್ಚು ಜನರು ಪಡೆದುಕೊಂಡಿದ್ದಾರ. ಎರಡನೇ ಸುತ್ತು ಕೊವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಕೊವಿಶೀಲ್ಡ್ಗೆ ಬೇಡಿಕೆ ಹೆಚ್ಚಾಗಿದೆ.
ಮತ್ತೆ ಕೊರೊನಾ 4ನೇ ಅಲೆ ಭೀತಿ ಶುರು
ಮೊದಲ ಮತ್ತು ಎರಡನೇ ಅಲೆಯಲ್ಲಿ ಜನ ಸಾಕಷ್ಟು ಪ್ರಮಾಣದಲ್ಲಿ ನೋವುಗಳನ್ನು ಅನುಭವಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಲಸಿಕೆಯನ್ನು ನೀಡಲು ಮುಂದಾಗಿತ್ತು. ಇದರಿಂದಾಗಿ ತೀವ್ರತರವಾದ ಪರಿಣಾಮವನ್ನು ಎದುರಿಸುವಲ್ಲಿ ತಪ್ಪಿಸಿದಂತಾಯಿತು. ಈಗಲೂ ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹಾವಳಿ ಮುಂದುವರೆದಿದೆ. ಭಾರತದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಸಮರ್ಪಕ ಚಿಕಿತ್ಸೆ ಮತ್ತು ಲಸಿಕೆಯಿಂದ.
ಚಿಕ್ಕಬಳ್ಳಾಪುರ: ಕೆ.ಸುಧಾಕರ್ ಭವಿಷ್ಯದ ಉತ್ತಮ ನಾಯಕ ಎಂದ ವಸತಿ ಸಚಿವ ಸೋಮಣ್ಣ
ಜನಪ್ರತಿನಿಧಿಗಳಿಂದಲೇ ನಿಯಮ ಉಲ್ಲಂಘನೆ
ಒಂದು ವಾರದಿಂದ ಚಿಕ್ಕಬಳ್ಳಾಪುರ ಉತ್ಸವದ ಸಂದರ್ಭದಲ್ಲಿ, ಸಿನಿಮಾ, ಮೆರವಣಿಗೆ, ಆದಿಯೋಗಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಜನ ಗುಂಪು ಗುಂಪಾಗಿ ಓಡಾಡಿದ್ದಾರೆ. ಸಾಕಷ್ಟು ಮಂದಿ ಮಾಸ್ಕ್ ಧರಿಸದೆ ಇದಿದ್ದು ಕೂಡ ಕಂಡುಬಂದಿದೆ. ಇದರಿಂದಾಗಿ 18 ವರ್ಷ ಮೇಲ್ಪಟ್ಟವರು ಮುಂಜಾಗ್ರತೆಗಾಗಿ ಲಸಿಕೆ ಪಡೆದುಕೊಂಡು ಕೋವಿಡ್ನಿಂದ ದೂರವಾಗಬೇಕು.
ಜಿಲ್ಲೆಯ ಜನರ ಬಳಿ ವೈದ್ಯರ ಮನವಿ
ಲಸಿಕೆ ಅಭಿಯಾನ ಗುರಿ ಮೀರಿ ಸಾಧನೆಯಾಗಿದ್ದು, ಈಗಲೂ ಸಹ ಸಾಕಷ್ಟು ಮಂದಿ ಲಸಿಕೆ ಪಡೆದುಕೊಳ್ಳದೆ ಇರುವವರು ಇದ್ದಾರೆ. ಅವರೆಲ್ಲರೂ ಸಹ ಲಸಿಕೆ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಕೆಲ ಮಧುಮೇಹಿ, ಕಿಡ್ನಿ, ಹೃದಯ ಸಂಬಂಧಿ ಕಾಯಿಲೆ, ಗರ್ಭಿಣಿ, ಬಾಣಂತಿಯರು ಸಕಾಲಕ್ಕೆ ಲಸಿಕೆ ಪಡೆದುಕೊಳ್ಳುವುದು ಸೂಕ್ತವಾಗಿದೆ. ಇದರಿಂದಾಗಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಸಲಹೆ ನೀಡಿದರು.
ಶಿಬಿರಗಳ ಮೂಲಕ ಲಸಿಕಾ ಅಭಿಯಾನ
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮುಂಜಾಗ್ರತೆಗಾಗಿ ಲಸಿಕೆ ನೀಡಲು ಮುಂದಾಗಿದ್ದೇವೆ. ಪ್ರತಿ ಗ್ರಾಮದಲ್ಲೂ ಶಿಬಿರಗಳ ಮೂಲಕ ಲಸಿಕಾ ಅಭಿಯಾನ ನಡೆಸಲಾಗುವುದು. ಜಿಲ್ಲೆಯಲ್ಲಿ ಮುಂಜಾಗ್ರತಾ ಲಸಿಕೆ ಕೊವಿಶೀಲ್ಡ್ಗೆ ಬೇಡಿಕೆ ಹೆಚ್ಚಾಗಿದ್ದು, 28 ಸಾವಿರ ಲಸಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಲಸಿಕೆ ಬಂದ ಕೂಡಲೇ ಪ್ರತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಸಾರ್ವಜನಿಕರಿಗೆ ನೀಡಲಾಗುವುದು. ಎರಡನೇ ಸುತ್ತಿನ ಸಲಿಕೆ ಪಡೆದುಕೊಂಡ 60 ದಿನದ ನಂತರ ಮುಂಜಾಗ್ರತಾ ಲಸಿಕೆ ಸ್ವಯಂ ಪ್ರೇರಿತರಾಗಿ ಪಡೆದುಕೊಳ್ಳಬೇಕು ಎಂದರು.
ಕೇವಲ ಒಂದು ಪ್ರಕರಣ ದಾಖಲು
ಮೊದಲ ಸುತ್ತಿಗಿಂತ ಎರಡನೇ ಸುತ್ತಿನ ಪ್ರಗತಿ ಹೆಚ್ಚಾಗಿದೆ. ಹೊರ ರಾಜ್ಯ, ಜಿಲ್ಲೆಯ ಜನ ನಮ್ಮ ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ಎರಡನೇ ಸುತ್ತಿನ ಗುರಿ ಹೆಚ್ಚಾಗಿದೆ. ಜನವರಿಯಲ್ಲಿ ಜಿಲ್ಲೆಯಾದ್ಯಂತ ಇದುವರೆಗೂ 2,702 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, ಆ ಪೈಕಿ ಕೇವಲ ಒಂದು ಕೋವಿಡ್ ಪ್ರಕರಣ ಮಾತ್ರ ದಾಖಲಾಗಿದೆ. ಆ ವ್ಯಕ್ತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಾಮಾರಿ ಕೊರೊನಾ 4ನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮುಂಜಾಗ್ರತಾ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕೋವಿಡ್ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಚಿಕ್ಕಬಳ್ಳಾಪುರ ಡಿಎಚ್ಒ ಡಾ.ಎಸ್.ಎಸ್.ಮಹೇಶ್ ಕುಮಾರ್ ಮನವಿ ಮಾಡಿದರು.