ಬಾವಿಯಲ್ಲಿ ಈಜಲು ಹೋದ ಯುವಕ ನೀರು ಪಾಲು: ಕುಟುಂಬಸ್ಥರ ಆಕ್ರಂದನ!
ಚಿಕ್ಕಬಳ್ಳಾಪುರ ಅಕ್ಟೋಬರ್ 23: ಬಾವಿಯಲ್ಲಿ ಈಜಲು ಹೋದ ಯುವಕ ನೀರು ಪಾಲಾದ ದಾರುಣ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಗುಡಿಬಂಡೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಳಿ ಇರುವ ಬಾಲಕರ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿರುವ ಬೆಳಗಿರಿ ರಂಗನ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ.
ಗೌರಿಬಿದನೂರು ತಾಲೂಕಿನ, ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದ ವಿದ್ಯಾರ್ಥಿ ವೆಂಕಟಾಚಲಪತಿ ( 17 ವರ್ಷ) ಮೃತ ದುರ್ದೈವಿ. ಈ ಯುವಕ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಟ್ಟಣದ ವಿದ್ಯಾರ್ಥಿನಿಲಯದಲ್ಲೆ ವಾಸವಿದ್ದು ಕಾಲೇಜಿಗೆ ಹೋಗುತ್ತಿದ್ದನು. ಎಂದಿನಂತೆ ಕಾಲೇಜಿನಿಂದ ಮಧ್ಯಾಹ್ನ ಊಟ ಮಾಡಲು ಬಂದು ಊಟ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಬೆಳಗಿರಿ ರಂಗನ ಬಾವಿಯಲ್ಲಿ ಈಜಲು ಹೋಗಿದ್ದ ಎಂದು ತಿಳಿದು ಬಂದಿದೆ.

ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ದೂರಲಾಗಿದೆ. ಯುವಕ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಸಹಪಾಠಿಗಳ ಜೊತೆ ಕಲ್ಯಾಣಿಯಲ್ಲಿ ಈಜಾಡುವಾಗ ಮೃತ ವಿದ್ಯಾರ್ಥಿ ಕಲ್ಯಾಣಿಯಲ್ಲಿ ಬಿದ್ದು ಎರಡು ಭಾರಿ ಮೆಲಕ್ಕೆ ಬಂದು ಮತ್ತೆ ನೀರಿನ ಒಳಗಡೆ ಹೋದವನು. ನಂತರ ಆತ ಮೇಲೆ ಬರದೆ ಇದ್ದಾಗ ಗಾಬರಿಗೊಂಡ ಸ್ನೇಹಿತರು ವಿದ್ಯಾರ್ಥಿನಿಲಯದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಸ್ಥಳಕ್ಕೆ ಬಂದು, ನಂತರ ಪೊಲಿಸರಿಗೆ ಮತ್ತು ಅಗ್ನಿಶಾಮಕ ದಳದ ಸಿಬ್ದಂದಿಗೆ ಮಾಹಿತಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ನೀರಿಗೆ ಇಳಿದು ಕಾರ್ಯಚರಣೆ ಶುರು ಮಾಡಿದ್ದಾರೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ಮಾಡಿದರು ಸಹ ವಿದ್ಯಾರ್ಥಿ ಪತ್ತೆಯಾಗಿಲ್ಲ. ಕತ್ತಲಾದರು ಸಿಬ್ಬಂದಿ ಕಾರ್ಯಚರಣೆ ಮುಂದುವರೆಸಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಚರಣೆ ಮುಂದುವರೆಸಿದ್ದು, ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಜನ ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು ಸಹ ನೀರಿಗೆ ಇಳಿದು ಮೃತ ದೇಹವನ್ನು ಹುಡುಕಲು ಆಕ್ಸಿಜನ್ ಸೇರಿದಂತೆ ಯಾವುದೇ ಸುರಕ್ಷಿತ ಸಾಮಗ್ರಿಗಳನ್ನು ಸ್ಥಳಕ್ಕೆ ತಂದಿರಲಿಲ್ಲ. ತಾಲೂಕು ಕೇಂದ್ರದಲ್ಲಿರುವ ಅಗ್ನಿ ಶಾಮಕ ದಳ ಕಚೇರಿಯಲ್ಲಿ ಸುರಕ್ಷಿತ ಸಾಮಾಗ್ರಿಗಳು ಇಲ್ಲದಿದ್ದರೆ, ಆಳದಲ್ಲಿರುವ ಮೃತ ದೇಹವನ್ನು ಹುಡುಕಲು ಇನ್ಯಾರ ಬಳಿ ಕೇಳಬೇಕೆಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-
ಪಟ್ಟಣದ ಬಿಳಿಗಿರಿ ರಂಗನ ಬಾವಿಯಲ್ಲಿ ಐಟಿಐ ವಿದ್ಯಾರ್ಥಿ ಮುಳುಗಿ ಮೃತ ಪಟ್ಟಿರುವ ಸ್ಥಳಕ್ಕೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ. ರವೀಂದ್ರ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ ನಿಟ್ಟಾಲಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ತೇಜಾನಂದರೆಡ್ಡಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿ ರೆಡ್ಡಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದ್ದು, ಕಾರ್ಯಾಚರಣೆಯನ್ನು ವೀಕ್ಷಿಸಿ, ಮಾಹಿತಿ ಪಡೆದು, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.












Click it and Unblock the Notifications