Chikkaballapur: ಬಿಸಿಯೂಟ ವಿತರಣೆಗೆ ಕಾಣದ ಕೈಗಳ ವಿರೋಧ, ರಾಜಕೀಯ ಹೈಡ್ರಾಮಾ!
ಚಿಕ್ಕಬಳ್ಳಾಪುರ ಅಕ್ಟೋಬರ್ 4: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಖಾಸಗಿ ಸಂಸ್ಥೆಯಿಂದ ಉಚಿತ ಬಿಸಿಯೂಟ ಒದಗಿಸುವ ಸೇವೆ ವಿಚಾರವು ರಾಜಕೀಯ ಹೈಡ್ರಾಮಾಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ಹಸಿವು ನೀಗಿಸಲು ಆಳುವವರಿಂದಲೇ ವಿರೋಧ ವ್ಯಕ್ತವಾದಂತೆ ಕಾಣಿಸುತ್ತಿದೆ.
ಸಮಾಜ ಸೇವಕರಾದ ಸಂದೀಪ್ ಬಿ ರೆಡ್ಡಿ ನೇತೃತ್ವದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದು, ಇದರ ನಡುವೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಬೈಪಾಸ್ ಬಳಿಯ ಮಹಿಳಾ ಕಾಲೇಜಿನಲ್ಲಿ ಸಂಸ್ಥೆಯಿಂದ ಪ್ರತಿನಿತ್ಯ ಬಿಸಿಯೂಟ ಒದಗಿಸುವಂತೆ ಬೇಡಿಕೆಯನ್ನು ಸಲ್ಲಿಸಿದ್ದರು, ಇದರ ಅನ್ವಯ ಟ್ರಸ್ಟ್ ವತಿಯಿಂದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲು ಮುಂದಾಗಿತ್ತು. ಮೊದಲು ಇದಕ್ಕೆ ಅನುಮತಿ ನೀಡಿದ್ದ ಕಾಲೇಜಿನ ಪ್ರಾಂಶುಪಾಲರು, ಕೊನೇ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದು, ಇದಕ್ಕೆ ರಾಜಕೀಯ ಒತ್ತಡವೇ ಪ್ರಮುಖ ಕಾರಣ ಎನ್ನಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ.

ಗೇಟ್ ಹೊರ ಭಾಗದಲ್ಲಿ ಊಟ ವಿತರಣೆ:
ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಬಿಸಿ ಬಿಸಿ ಪಲಾವ್ ತಯಾರಿಸಿಕೊಂಡು ಬಂದಿದ್ದ ಟ್ರಸ್ಟ್ ನ ಅಧ್ಯಕ್ಷ ಸಂದೀಪ್ ರೆಡ್ಡಿ ಮತ್ತು ಸಿಬ್ಬಂದಿಯನ್ನು ಕಾಲೇಜಿನ ಒಳಗೆ ಬಿಡಲಿಲ್ಲ, ಗೇಟ್ ಹಾಕಿ, ಬಂದ್ ಮಾಡಿದ್ದಲ್ಲದೇ ಬಾಲಕಿಯರನ್ನು ನಿಗದಿತ ಅವಧಿಗಿಂತಲೂ ಒಂದು ಗಂಟೆ ಮುಂಚೆ ಮನೆಗೆ ಕಳುಹಿಸಿದ್ದು. ಇರುವ ವಿದ್ಯಾರ್ಥಿನಿಯರಿಗೂ ಅಹಾರ ಸೇವಿಸಲು ಬಿಡಲಿಲ್ಲ. ಇದರಿಂದ ಹೊರಭಾಗದಲ್ಲಿಯೇ ಇದ್ದವರಿಗೆ ತಂದಿದ್ದ ಆಹಾರವನ್ನು ವಿತರಿಸಬೇಕಾಯಿತು.
ರಾಜಕೀಯ ಗಲಾಟೆ:
ಹಿಂದೆ ಪೆರೇಸಂದ್ರ, ಮಂಡಿಕಲ್ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದ ಸಂದರ್ಭದಲ್ಲಿ ಟ್ರಸ್ಟ್ ಗೆ ಅವಕಾಶ ನೀಡಿರಲಿಲ್ಲ. ಇದರ ನಡುವೆ ಚಿಕ್ಕಬಳ್ಳಾಪುರದ ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಪೋಶೆಟ್ಟಹಳ್ಳಿ ಶಾಲೆಯನ್ನು ದತ್ತು ಪಡೆದುಕೊಂಡು ಹೈಟೆಕ್ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದು ಈಗ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಯೂಟ ಸೇವೆಗೆ ಕ್ಷೇತ್ರದ ಹೊಸ ಜನಪ್ರತಿನಿಧಿ ವಿರೋಧ ವ್ಯಕ್ತಪಡಿಸಿ ಒತ್ತಡ ಹೇರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಹುಷಾರ್ :
ತನ್ನ ವ್ಯವಹಾರಗಳಿಗೆ ನೀವು ಅಡ್ಡಿಪಡಿಸಿದರೆ ಸಮರ್ಥವಾಗಿ ಎದುರಿಸುವ ಶಕ್ತಿ ತನಗಿದೆ, ಯಾರಿಗೆ ಯಾವ್ಯಾವ ರೀತಿಯಲ್ಲಿ ಉತ್ತರಿಸಬೇಕೋ ಆ ಶಕ್ತಿ ತನಗಿದೆ ಎಂದರು. ಆದರೆ, ಬಡ ಮಕ್ಕಳ ಶೈಕ್ಷಣಿಕ ವಿಚಾರ ಮತ್ತು ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಕಿರಿಕಿರಿ ಉಂಟು ಮಾಡಿದರೆ ಸುಮ್ಮನೆ ಇರುವುದಿಲ್ಲ. ಶಾಸಕರಾಗಲಿ ಸಂಸಾದರಾಗಲಿ ತನ್ನ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದರೆ, ನಿಮ್ಮ ಬಂಡವಾಳವನ್ನು ಸಹ ಬಿಚ್ಚಿಡಬೇಕಾಗುತ್ತದೆ, ನಿಮ್ಮ ಲೋಪದೋಷಗಳು ತನಗೆ ಗೊತ್ತಿದೆ ಎಂಬ ವಿಚಾರವು ನಿಮಗೆ ತಿಳಿದಿದೆ ಎಂದು ಸಂದೀಪ್ ರೆಡ್ಡಿ ಸ್ಥಳೀಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಕ್ಷೇತ್ರದ ನಾಯಕರು ಎಲ್ಲೆಲ್ಲಿ ಏನೇನು ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತನ್ನ ಬಳಿ ಇದೆ. ಜನರ ಹಿತವನ್ನು ಬಿಟ್ಟು ಸ್ವಂತ ಕೆಲಸಗಳು ಎನೇನು ಆಗಿವೆ ಎನ್ನುವುದು ಗೊತ್ತು. ಸುಮ್ಮನೆ ನನ್ನ ತಂಟೆಗೆ ಬರಬೇಡಿ, ಬಂದರೆ ಬಂಡವಾಳ ಬಿಚ್ಚಿ ದಾರಿಯಲ್ಲಿ ನಿಲ್ಲಿಸಲಾಗುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಯಾವುದೇ ರಾಜಕೀಯ ಉದ್ದೇಶದಿಂದ ಶೈಕ್ಷಣಿಕ ಸೇವಾ ಚಟುವಟಿಕೆಯನ್ನು ಕೈಗೊಳ್ಳುತ್ತಿಲ್ಲ. ಅಗತ್ಯವಿದ್ದಲ್ಲಿ ಈಗಲೇ ಕಾಗದದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ಬರೆದುಕೊಡುತ್ತೇನೆ ಎಂದರು.
ನಿರ್ಧಾರವನ್ನು ಸ್ವಾಗತಿಸಿದ್ದವರು ಇಂದು ಉಲ್ಟಾ -
ಕಳೆದ ಒಂದು ವಾರದ ಹಿಂದೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ಕಾಲೇಜಿನಲ್ಲಿರುವ ಹಲವು ಸವಲತ್ತುಗಳ ಕೊರತೆಯನ್ನು ಹೊಂದಿರುವ ಬಡ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಪ್ರತಿನಿತ್ಯ 600ಕ್ಕೂ ಅಧಿಕ ವಿದ್ಯಾರ್ಥಿನಿಯರಿಗಾಗಿ ಮಧ್ಯಾಹ್ನ ವೇಳೆ ಬಿಸಿಯೂಟ ಸೇವೆ ಒದಗಿಸುವುದಾಗಿ ಘೋಷಿಸಿದ್ದರು.
ಜಿಲ್ಲಾ ಕೇಂದ್ರಕ್ಕೆ ವಿವಿಧ ತಾಲೂಕುಗಳ ಗ್ರಾಮೀಣ ಭಾಗಗಳಿಂದ ಬೆಳಗ್ಗೆಯೇ ಕಾಲೇಜಿಗೆ ಆಗಮಿಸುವ ಸಂದರ್ಭದಲ್ಲಿ ಅನೇಕರು ಉಪಾಹಾರ ಸೇವಿಸಿರುವುದಿಲ್ಲ. ಹಸಿವಿನಲ್ಲಿ ಪಾಠ ಪ್ರವಚನಗಳನ್ನು ಕೇಳಿ ಮತ್ತೆ ಸಂಜೆ ಮನೆಗೆ ಹೋದ ಬಳಿಕ ಹೊಟ್ಟೆ ತುಂಬಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಹೋಗಲಾಡಿಸಲು ಮತ್ತು ಶೈಕ್ಷಣಿಕ ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಲಿ ಎಂಬ ಉದ್ದೇಶ ಹೊಂದಿರುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಇದಕ್ಕೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದರು, ಹಾಗೆಯೇ ಕೊಟ್ಟ ಮಾತಿನಂತೆ ಗುರುವಾರ ಅಗತ್ಯ ವ್ಯವಸ್ಥೆ ಕೈಗೊಂಡ ಸಂದರ್ಭದಲ್ಲಿ, ಸ್ಥಳೀಯ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಬಿಸಿಯೂಟವನ್ನು ನಿರಾಕರಿಸುವ ಧೋರಣೆಯನ್ನು ಕಾಲೇಜು ಆಡಳಿತ ಮಂಡಳಿ ಪ್ರದರ್ಶಿಸಿದ್ದು ಅಸಮಾಧಾನಕ್ಕೆ ಕಾರಣವಾಯಿತು.
ವಿದ್ಯಾರ್ಥಿನಿಯರಿಗೆ ಅಭಯ ನೀಡಿದ ಸಂದೀಪ್ ರೆಡ್ಡಿ :
ಸರಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ಮಧ್ಯಾಹ್ನ ಬಿಸಿಯೂಟ ಕೊಡಲು ನಿರ್ಧರಿಸಿದ್ದೇನೆ. ಕಾಲೇಜಿನ ಒಳಗೆ ಬಿಸಿಯೂಟ ವಿತರಣೆ ಮಾಡಲು ಅವಕಾಶ ನೀಡುವ ತನಕ ಕಾಲೇಜು ಗೇಟಿನ ಮುಂದೆಯೇ ಊಟ ಕೊಡುತ್ತೇನೆ. ನಮ್ಮ ಸೇವೆಗೆ ಹಾಗೂ ನಿಮ್ಮ ಊಟಕ್ಕೆ ಅಡ್ಡ ಬೀಳುತ್ತಿರುವವರು ಏನು ಮಾಡುತ್ತಾರೋ ಮಾಡಲಿ ನೋಡೋಣ ಎಂದು ಕಾಲೇಜಿನ ಗೇಟಿನ ಮುಂದೆ ಬಂದು ವಿದ್ಯಾರ್ಥಿನಿಯರಿಗೆ ಊಟ ಬಡಿಸುವ ಜೊತೆಗೆ, ವಿದ್ಯಾರ್ಥಿನಿಯರ ಜೊತೆ ಸಂದೀಪ ರೆಡ್ಡಿ ಅವರು ಊಟ ಮಾಡಿದರು. ನಿಮ್ಮ ಜತೆ ಸದಾ ನಾನಿರುತ್ತೇನೆ ಯಾರಿಗೆಲ್ಲ ಊಟ ಮಾಡಬೇಕು ಎನಿಸುತ್ತದೋ ಅವರು ಧೈರ್ಯವಾಗಿ ಬಂದು ಊಟ ಸ್ವೀಕರಿಸಿ ಎಂದು ಧೈರ್ಯ ತುಂಬಿದರು.
ಬೇಡಿಕೆಗೆ ಸ್ಪಂದಿಸಿದ್ದೇ ತಪ್ಪಾ? ರಾಜಕೀಯ ಮಾಡುವವರು ಬೇರೆ ಕಡೆ ಮಾಡಲಿ, ಬಡ ಮಕ್ಕಳ ಊಟದ ವಿಷಯದಲ್ಲಿ ಏಕೆ, ರೀತಿಯ ಚಿತಾವಣೆಗಳಿಂದ ಏನು ಮಾಡಲು ಸಾಧ್ಯವಿಲ್ಲ, ಸಾಧ್ಯವಾದರ ಒಳ್ಳೆಯ ಕೆಲಸ ಮಾಡಿ. ಆದರೆ ಬಡವರ ಅನ್ನಕ್ಕೆ ಕಲ್ಲು ಹಾಕಬೇಡಿ ಎಂದು ಜನಪ್ರತಿನಿಧಿಗಳು, ಕಾಲೇಜಿನ ಆಡಳಿತ ಮಂಡಳಿಗೆ ಸಂದೀಪ್ ರೆಡ್ಡಿ ಮನವಿ ಮಾಡಿದರು.
'ಕಾಲೇಜಿನ ಆಹ್ವಾನದಂತೆ ಕಾರ್ಯಕ್ರಮಕ್ಕೆ ಬಂದಿದ್ದೆ, ಅವರ ಬೇಡಿಕೆಯಂತೆ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿದ್ದೆ. ಆದರೆ ಕಳೆದ 10 ದಿನಗಳಿಂದ ನಾನಾ ಕಾರಣಕೊಟ್ಟು ತಡೆಯಲು ಯತ್ನಿಸಿದ್ದರು. ಆದರೆ ನಾನು ಕೊಟ್ಟ ಮಾತಿನಂತೆ ವಿದ್ಯಾರ್ಥಿನಿಯರಿಗೆ ಕಾಲೇಜಿನ ಗೇಟಿನ ಮುಂಭಾಗವೇ ಊಟ ವಿತರಿಸುತ್ತೇನೆ. ಯಾರೇ ಇರಬಹುದು. ಅವರ ಕೆಲಸವನ್ನು ಅವರು ಮಾಡಿಕೊಳ್ಳಲಿ ವಿನಾಕಾರಣ ಒಳ್ಳೆಯ ಕೆಲಸಗಳಿಗೆ ಅಡ್ಡಹಾಕಿದರೆ ಸಮ್ಮನೆ ಇರಲ್ಲ' ಎಂದು ಚಿಕ್ಕಬಳ್ಳಾಪುರ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿ ಹೇಳಿದರು.
'ನಮ್ಮ ಬೇಡಿಕೆಯಂತೆ ಸಂದೀಹ ಬಿ ರೆಡ್ಡಿ ಊಟದ ವ್ಯವಸ್ಥೆಗೆ ಒಪ್ಪಿದ್ದರು, ಆದರೆ ನಾವು ಎಲ್ಲರ ಅನುಮತಿ ಪಡೆಯಬೇಕಿದೆ. ಕೆಲಸದ ಒತ್ತಡದಿಂದ ಅನುಮತಿ ಪಡೆಯಲು ತಡವಾಗಿದೆ, ಉನ್ನತ ಶಿಕ್ಷಣ ಇಲಾಖೆ ಆಯುಕ್ತರ ಅನುಮತಿ ಪಡೆಯುತ್ತೇವೆ' ಎಂದು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಯ್ಯ ಹೇಳಿದರು.












Click it and Unblock the Notifications