ಗಣೇಶ ಚತುರ್ಥಿ ಮೆರವಣಿಗೆ: ತಮಿಳುನಾಡಿನಲ್ಲಿ ಯುವಕನ ಹತ್ಯೆ
ಚೆನ್ನೈ, ಸೆಪ್ಟೆಂಬರ್ 1: ಗಣೇಶ ಚತುರ್ಥಿ ಮೆರವಣಿಗೆಯಲ್ಲಿ ಮುಂದಾಳತ್ವ ವಹಿಸಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ಸೋಮವಾರ ನಡೆದಿದೆ.
ರಾಮನಾಥಪುರಂ ಸಮೀಪದ ವಸಂತನಗರದ ಕಲ್ಲಾರ್ ಬೀದಿಯ ಸಾಮಿನಾಥನ್ ಎಂಬುವವರ ಮಗ ಅರುಣ್ ಕುಮಾರ್ (21) ಹತ್ಯೆಯಾದ ಯುವಕ. ಅರುಣ್ ಮತ್ತು ಅವರ ಸ್ನೇಹಿತ ಯೋಗೇಶ್ವರಮ್ ಸೋಮವಾರ ಮಧ್ಯಾಹ್ನ ಎಟಿಎಂ ಒಂದರ ಮುಂದೆ ನಿಂತು ಮಾತನಾಡುತ್ತಿದ್ದರು. ಆಗ ಮೂರು ಬೈಕ್ನಲ್ಲಿ ಬಂದ 9 ಮಂದಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಸುತ್ತವರಿದರು. ಅರುಣ್ ಮತ್ತು ಯೋಗೇಶ್ವರಂ ಇಬ್ಬರನ್ನೂ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಇಬ್ಬರನ್ನೂ ರಾಮನಾಥಪುರಂನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಅರುಣ್ ಕುಮಾರ್ ಆಸ್ಪತ್ರೆಯಲ್ಲಿ ಅಸುನೀಗಿದರು. ಯೋಗೇಶ್ವರಂ ಅವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಹಿಂದೂ-ಮುಸ್ಲಿಂ ಸಂಘರ್ಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ.
ರಾಮನಾಥಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೆ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ರಾಮನಾಥಪುರಂದವರೇ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅದರ ಮೂಲಕ ಅಪರಾಧಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಮೂವರು ಶಂಕಿತರನ್ನು ಬಂಧಿಸಲಾಗಿದೆ.
ತಮ್ಮ ಬೀದಿಯಲ್ಲಿ ನಡೆದ ಗಣೇಶ ಚತುರ್ಥಿ ಮೆರವಣಿಗೆಯ ಮುಂದಾಳತ್ವವನ್ನು ಅರುಣ್ ವಹಿಸಿದ್ದರು. ಈ ಕಾರಣಕ್ಕಾಗಿಯೇ ಅವರ ಹತ್ಯೆ ನಡೆದಿದೆ. ಇದರ ಹಿಂದೆ ಎಸ್ಡಿಪಿಐ ಅಥವಾ ಪಿಎಫ್ಐ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದೆ ಎಂದು ಆರೋಪಿಸಲಾಗಿದೆ.












Click it and Unblock the Notifications