"ಇದು ಸ್ಟಾಲಿನ್ ನಿಮಗೆ ಕೊಡುತ್ತಿರುವ ಭರವಸೆ..."
ಚೆನ್ನೈ, ಮಾರ್ಚ್ 29: ತಮ್ಮ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶ ನೀಡುವುದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಜನರಿಗೆ ಭರವಸೆ ನೀಡಿದ್ದಾರೆ.
ಸಿಎಎ ವಿಷಯದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಎಐಎಡಿಎಂಕೆ ಮೇಲೆ ಹರಿಹಾಯ್ದ ಅವರು, ರಾಜ್ಯಸಭೆಯಲ್ಲಿ ಎಐಎಡಿಎಂಕೆ ಹಾಗೂ ಪಿಎಂಕೆ ಸದಸ್ಯರು ಈ ಕಾಯ್ದೆ ವಿರುದ್ಧ ಮತ ಚಲಾಯಿಸಿದ್ದರೆ, ಇಂದು ಸಿಎಎ ಇರುತ್ತಿರಲಿಲ್ಲ. ದೇಶಾದ್ಯಂತ ಅಲ್ಪಸಂಖ್ಯಾತರ ಈ ಅವಸ್ಥೆಗೆ ಈ ಎರಡು ಪಕ್ಷಗಳೇ ಕಾರಣ ಎಂದು ದೂಷಿಸಿದರು.
ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್
ಸೋಮವಾರ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಎಐಎಡಿಎಂಕೆಯದ್ದು ನಾಟಕ. ಚುನಾವಣೆಗಾಗಿ ಹೊಸ ನಾಟಕಗಳನ್ನು ಮಾಡುತ್ತಿದೆ. ಸಿಎಎ ವಿರುದ್ಧ ನಮ್ಮ ಪಕ್ಷ ಮೊದಲೂ ಪ್ರತಿಭಟನೆ ನಡೆಸಿತ್ತು. ಸಹಿ ಅಭಿಯಾನ ನಡೆಸಿತ್ತು" ಎಂದು ವಿವರಿಸಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ ಖಂಡಿತ ಈ ಕಾಯ್ದೆಯನ್ನು ರದ್ದುಗೊಳಿಸುತ್ತೇವೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಇದು ಸ್ಟಾಲಿನ್ ನಿಮಗೆ ಕೊಡುತ್ತಿರುವ ಭರವಸೆ ಎಂದು ಹೇಳಿದರು.
ಈಚೆಗೆ ಕೇಂದ್ರ ಪರಿಚಯಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧವೂ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದ ಕುರಿತು ಸಿಎಂ ಪಳನಿಸ್ವಾಮಿ ಮೇಲೆ ಸ್ಟಾಲಿನ್ ವಾಗ್ದಾಳಿ ನಡೆಸಿದರು.
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.