ಚಿನ್ನದ ಓಲೆ ಕೊಡದಿದ್ದಕ್ಕೆ ಜ್ಯೂನಿಯರ್ ಕೊಂದ ವಿದ್ಯಾರ್ಥಿನಿ
ವಿಲ್ಲುಪುರಂ, ಫೆ.3: ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಕೊಡಲಿಲ್ಲ ಎಂದು ಶಾಲಾ ವಿದ್ಯಾರ್ಥಿನಿಯರು ಜಗಳವಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಅದರೆ, ತಾನು ಕೇಳಿದ್ದು ಸಿಗಲಿಲ್ಲ ಎಂಬ ಕೋಪಕ್ಕೆ ಕೊಲೆ ಮಾಡುವುದೆಂದರೆ ನಿಜಕ್ಕೂ ಘೋರ ಘಟನೆ. ಇಂಥದ್ದೊಂಡು ಘಟನೆ ಮೊಲಸೂರು ಜಿಲ್ಲೆಯಲ್ಲಿ ನಡೆದಿದೆ.
16 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ಜ್ಯೂನಿಯರ್ ವಿದ್ಯಾರ್ಥಿನಿಯೊಬ್ಬಳನ್ನು ಕೊಂದು ಹಾಕಿದ ಘಟನೆ ಜರುಗಿದೆ. 14 ವರ್ಷ ವಯಸ್ಸಿನ ಜ್ಯೂನಿಯರ್ ವಿದ್ಯಾರ್ಥಿನಿಯೊಬ್ಬಳು ಚಿನ್ನದ ಓಲೆ ಹಾಕಿಕೊಂಡು ಶಾಲೆಗೆ ಬಂದಿದ್ದಳು. ಚಿನ್ನದ ಓಲೆಗೆ ಆಸೆ ಪಟ್ಟ ಸೀನಿಯರ್ ವಿದ್ಯಾರ್ಥಿನಿ ಆಕೆಯನ್ನು ಓಲೆ ಕೊಡುವಂತೆ ಪೀಡಿಸಿದ್ದಾಳೆ ಅದರೆ, ಅದಕ್ಕೆ ಒಪ್ಪಲಿಲ್ಲ.

ಹಠ ಬಿಡದ ಸೀನಿಯರ್ ವಿದ್ಯಾರ್ಥಿನಿ ಕೊನೆಗೆ ಆಕೆಯನ್ನು ಪುಸಲಾಯಿಸಿ ಹತ್ತಿರದ ಜಮೀನಿಗೆ ಕರೆದುಕೊಂಡು ಹೋಗಿ ಕಿವಿಯೋಲೆ ಕಿತ್ತುಕೊಂಡು ಆಕೆಯನ್ನು ಬಾವಿಗೆ ತಳ್ಳಿ ಸಾಯಿಸಿದ್ದಾಳೆ.
ಕಳೆದ ಎರಡು ದಿನಗಳಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ನಿನ್ನೆ ದಿನ ಆಕೆ ಶವ ಮೊಲಸೂರಿನ ಕೋಡಿ ಗ್ರಾಮದ ಕೃಷಿ ಭೂಮಿಯ ಬಾವಿಯಲ್ಲಿ ಪತ್ತೆಯಾಗಿದೆ.
ಬಂಧಿತ ವಿದ್ಯಾರ್ಥಿನಿ ತನ್ನ ತಪ್ಪನ್ನು ಒಪ್ಪುಕೊಂಡಿದ್ದಾಳೆ. ಚಿನ್ನದ ಓಲೆಗೆ ಆಸೆಪಟ್ಟು ಈ ಕೃತ್ಯ ಎಸಗಿದೆ. ಅವಳು ನನಗೆ ಓಲೆ ಕೊಡಲಿಲ್ಲ. ಆಕೆಯಿಂದ ಓಲೆ ಕಿತ್ತುಕೊಂಡು ಬಾವಿಗೆ ತಳ್ಳಿ ಬಿಟ್ಟೆ ಎಂದಿದ್ದಾಳೆ.
ಬಾಲಕಿಯಿಂದ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಸದ್ಯ ಆಕೆ ರಿಮ್ಯಾಂಡ್ ಹೋಂನಲ್ಲಿದ್ದಾಳೆ.












Click it and Unblock the Notifications