ಅಮಿತ್ ಶಾ ರಾಜೀನಾಮೆ ನೀಡಿ ಹೋಗಲಿ: ಕೇಂದ್ರವನ್ನು ಎಕ್ಕಿಳಿಸಿದ ರಜನೀಕಾಂತ್
ಚೆನ್ನೈ, ಫೆ 26: ಹೆಚ್ಚಾಗಿ ನರೇಂದ್ರ ಮೋದಿ ಸರಕಾರವನ್ನು ಸಮರ್ಥಿಸಿಕೊಂಡು ಬರುವ, ತಲೈವಾ ರಜನೀಕಾಂತ್, ದೆಹಲಿ ಹಿಂಸಾಚಾರದ ವಿಚಾರದಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
'ದೆಹಲಿ ಹಿಂಸಾಚಾರದ ವಿಚಾರದಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಷ್ಟು ದೊಡ್ದ ಮಟ್ಟದಲ್ಲಿ ಹಿಂಸಾಚಾರ ನಡೆಯುವುದನ್ನು ತಪ್ಪಿಸಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳು ಏನೇನೂ ಸಾಲದು" ಎಂದು ರಜನೀಕಾಂತ್ ಬೇಸರ ವ್ಯಕ್ತ ಪಡಿಸಿದ್ದಾರೆ.
"ವಿಶ್ವದ ಪ್ರಮುಖ ನಾಯಕರೊಬ್ಬರು ಭಾರತ ಪ್ರವಾಸದಲ್ಲಿ ಇರಬೇಕಾದರೆ, ಹಿಂಸಾಚಾರವನ್ನು ಉಕ್ಕಿನ ಕೈಯಿಂದ ನಿಯಂತ್ರಣಕ್ಕೆ ತರಬೆಕಾಗಿತ್ತು" ಎಂದು ರಜನೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೇಂದ್ರ ಗೃಹ ಇಲಾಖೆಯ ಈ ವೈಫಲ್ಯತೆಯನ್ನು ನಾನು ಖಂಡಿಸುತ್ತೇನೆ. ಹಿಂಸಾಚಾರವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ರಾಜೀನಾಮೆ ಬಿಸಾಕಿ ಹೋಗಬೇಕು" ಎಂದು ರಜನೀಕಾಂತ್, ಪರೋಕ್ಷವಾಗಿ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ದೆಹಲಿಯ ಪರಿಸ್ಥಿತಿ ಕೈಮೀರಿ ಹೋಗಿದೆ. ಇನ್ನಾದರೂ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರದೇ ಹೋದಲ್ಲಿ, ಭವಿಷ್ಯದಲ್ಲಿ ಇದು ದೊಡ್ಡ ಪರಿಣಾಮ ಬೀರಲಿದೆ" ಎಂದು ರಜನೀಕಾಂತ್ ಎಚ್ಚರಿಕೆಯನ್ನು ನೀಡಿದ್ದಾರೆ.
"ಜಾತಿ, ಧರ್ಮದ ವಿಚಾರದಲ್ಲಿ ಯಾರೇ ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅದು ತಪ್ಪೇ.. ಮಾಧ್ಯಮದವರು ಇಂತಹ ಹೇಳಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡಬಾರದು" ಎಂದು ರಜನೀಕಾಂತ್ ಮನವಿ ಮಾಡಿದ್ದಾರೆ.












Click it and Unblock the Notifications