ಚುನಾವಣೆಯಲ್ಲಿ ಶಶಿಕಲಾ ಸ್ಪರ್ಧೆ?: ದಿನಕರನ್ ನೀಡಿದ ಸುಳಿವು
ಚೆನ್ನೈ, ಫೆಬ್ರವರಿ 6: ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ಎಐಎಡಿಎಂಕೆಯ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ? ಅವರ ಸೋದರಳಿಯ ಟಿಟಿವಿ ದಿನಕರನ್ ಅವರ ಗುಪ್ತ ಭಾಷೆಯ ಹೇಳಿಕೆಯು ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುವ ಬಗ್ಗೆ ಸುಳಿವು ನೀಡಿದೆ.
ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ತಮಿಳುನಾಡಿನಲ್ಲಿ ದಿನಕರನ್ ಅವರು ದೇವಾಲಯಗಳ ಪ್ರವಾಸ ನಡೆಸುತ್ತಿದ್ದಾರೆ. ಶಶಿಕಲಾ ಅವರು ಖಂಡಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ. 'ಚಿನ್ನಮ್ಮ' ಬೆಂಗಳೂರಿನಿಂದ ಬಂದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ 'ನಿಸ್ಸಂಶಯವಾಗಿ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಒಂದು ವೇಳೆ ಶಶಿಕಲಾ ಸ್ಪರ್ಧಿಸುವುದಾದರೆ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆಯೇ ಎಂಬ ಪ್ರಶ್ನೆಗೆ, ಅದನ್ನು ಅವರೇ ನಿರ್ಧರಿಸಲಿದ್ದಾರೆ ಎಂದಿದ್ದಾರೆ. ಹಾಗೆಯೇ ಆಡಳಿತಾರೂಢ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಕುರಿತಾದ ಸಂದೇಹಕ್ಕೆ 'ಕಾದು ನೋಡಿ' ಎಂದು ಹೇಳಿದ್ದಾರೆ.

ಕಾನೂನಿನ ಪ್ರಕಾರ ಶಶಿಕಲಾ ಅವರು ಇನ್ನೂ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ದಿನಕರನ್ ನೀಡಿರುವ ಹೇಳಿಕೆ ಕೂಡ ಊಹಾಪೋಹದಿಂದ ಕೂಡಿದೆಯೇ ಅಥವಾ ಕಾನೂನಿನಲ್ಲಿನ ಲೋಪಗಳನ್ನು ಬಳಸಿಕೊಂಡು ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆರು ವರ್ಷದ ನಂತರ ಶಶಿಕಲಾ ಕಣಕ್ಕೆ ಇಳಿಯಬಹುದು ಅಥವಾ ತಮ್ಮ ಸಂಬಂಧಿಕರು ಹಾಗೂ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜಕೀಯವಾಗಿ ಸಕ್ರಿಯರಾಗಿರುವ ಸಾಧ್ಯತೆಯೂ ಇದೆ.
ಕಾನೂನಿನ ಪ್ರಕಾರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ನಾಲ್ಕು ವರ್ಷ ಶಿಕ್ಷೆ ಅನುಭವಿಸಿದವರು ಶಿಕ್ಷೆ ಅವಧಿ ಮುಗಿದ ಬಳಿಕ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.












Click it and Unblock the Notifications