ಶಬರಿಮಲೆಗೆ ಹೋದವನಿಗೆ 5 ಕೋಟಿ ಲಾಟರಿ ಹೊಡೀತು!

ತಮಿಳುನಾಡು ವಿದ್ಯುತ್ ಮಂಡಳಿಯಲ್ಲಿ ಕ್ಯಾಷಿಯರ್ ಆಗಿರುವ ಎ. ಬೆತ್ತರಸು ಅದೃಷ್ಟಶಾಲಿ ವ್ಯಕ್ತಿ. ಕಳೆದ ತಿಂಗಳು ಜನವರಿಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗಿದ್ದ ಬೆತ್ತರಸುಗೆ ದೇವಸ್ಥಾನದ ಬಳಿ ಲಾಟರಿ ಮಾರಾಟಗಾರನೊಬ್ಬ ಟಿಕೆಟ್ ಖರೀದಿಸುವಂತೆ ಪೀಡಿಸಿದ್ದ.
ಕೊನೆಗೆ, ಬೆತ್ತರಸು ಲಾಟರಿ ಟಿಕೆಟ್ ಖರೀದಿಸಿದ್ದರು. ಅದು ಕ್ರಿಸ್ಮಸ್- ನೂತನ ಸಂವತ್ಸರದ ಬಂಪರ್ ಬಹುಮಾನದ ಲಾಟರಿ ಟಿಕೆಟ್ ಆಗಿತ್ತು. ಟಿಕೆಟ್ ಖರೀದಿಸಿದ್ದ ಬೆತ್ತರಸು ಆ ಬಗ್ಗೆ ಮರೆತಿದ್ದರು. ಆದರೆ ಕನಸು ಮನಸಿನಲ್ಲೂ ತನಗೆ ಈ ಪಾಟಿ ಲಾಟರಿ ಹೊಡೆಯುತ್ತದೆ ಅಂತ ಆತ ಅಂದುಕೊಂಡಿರಲಿಲ್ಲವಂತೆ.
ಶಬರಿಮಲೆಗೆ ಹೋಗುವ ಹಾದಿಯಲ್ಲಿ ಇಡುಕ್ಕಿ ಜಿಲ್ಲೆಯಲ್ಲಿ ಖರೀದಿಸಿದ್ದರು. ಅಯ್ಯಪ್ಪ ಸ್ವಾಮಿ ದರ್ಶನದ ನಂತರ ಮನೆಗೆ ವಾಪಸಾದ ಮೇಲೆ ಜನವರಿ 16ರಂದು ಆನ್ ಲೈನ್ ಮೂಲಕ ಫಲಿತಾಂಶ ನೋಡಿದ ಬೆತ್ತರಸುಗೆ ಆಶ್ಚರ್ಯ ಕಾದಿತ್ತು. ಬಂಪರ್ ಪ್ರೈಸ್ ಆತನಿಗೇ ಒಲಿದಿತ್ತು. ಗಮನಾರ್ಹವೆಂದರೆ ತಮಿಳುನಾಡಿನಲ್ಲಿ ಲಾಟರಿ ನಿಷೇಧಿಸಲಾಗಿದೆ (ಕರ್ನಾಟಕದಲ್ಲಿಯೂ).
ತಮಿಳುನಾಡು ವಿದ್ಯುತ್ ಮಂಡಳಿಯಲ್ಲಿ ಲೈನ್ ಇನ್ಸ್ ಪೆಕ್ಟರ್ ಆಗಿದ್ದ ಅಪ್ಪ ಅಯ್ಯದೊರೈ ಅಕಾಲಿಕವಾಗಿ ಮೃತಪಟ್ಟ ನಂತರ ಬೆತ್ತರಸು ಕಷ್ಟದ ಬದುಕಿಗೆ ದೂಡಲ್ಪಟ್ಟರು. ನಾಲ್ಕು ಸೋದರಿಯ ಪೈಕಿ ಇಬ್ಬರು ತಂಗಿಯರಿಗೆ ಮದುವೆ ಮಾಡಿಸಬೇಕಾದ ಜವಾಬ್ದಾರಿ ಬೆತ್ತರಸು ಹೆಗಲೇರಿತ್ತು.
ಬಾಡಿಗೆ ಮನೆಯಲ್ಲಿ ತಾಯಿ, ಸೋದರಿಯರೊಂದಿಗೆ ಜೀವನ ದೂಡುತ್ತಿದ್ದ ಬೆತ್ತರಸು, ಇದೀಗ ಪ್ರತಿಷ್ಠಿತ ಅಣ್ಣಾನಗರ ಭಾಗದಲ್ಲಿಯೇ ಬೃಹತ್ ಬಂಗಲೆ ಖರೀದಿಸಲು ಮುಂದಾಗಿದ್ದಾರೆ. ಅಲ್ಲಿ ಸೋದರಿಯರು ಮತ್ತು ಹೆತ್ತಮ್ಮನಿಗೆ ಒಳ್ಳೆಯ ಬದುಕು ಕಟ್ಟಿಕೊಡಲು ಮನಸ್ಸು ಮಾಡಿದ್ದಾರೆ.
ಬಂಪರ್ ಬಹುಮಾನದ ಒಂದಷ್ಟು ಭಾಗ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡವರು ಮತ್ತು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೂ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಅಣ್ಣಾ ನಗರ ಬ್ರಾಂಚಿನ ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಲಾಟರಿ ಟಿಕೆಟ್ ಹಸ್ತಾಂತರಿಸಿರುವ ಬೆತ್ತರಸು, ಶೀಘ್ರವೇ ಬ್ಯಾಂಕಿನವರು ಬಹುಮಾನದ ಹಣವನ್ನು ತನ್ನ ಉಳಿತಾಯ ಖಾತೆಗೆ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications