ಮೂರು ಬಾರಿ ಸಿಎಂ ಆಗಿದ್ದ ಪನ್ನೀರ್ ಈಗ ಡಿಸಿಎಂ!
ಚೆನ್ನೈ, ಆಗಸ್ಟ್ 14 : ತಮಿಳುನಾಡಿನಲ್ಲಿ ಓ ಪನ್ನೀರ್ ಸೆಲ್ವಂ ಅವರು ಇತಿಹಾಸ ಸೃಷ್ಟಿಸಿದ್ದಾರೆ. 'ಅಮ್ಮ'ನ ಕೃಪಾಕಟಾಕ್ಷದಿಂದ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಶ್ವೇತವಸ್ತ್ರಧಾರಿ ಪನ್ನೀರ್, ಉಪ ಮುಖ್ಯಮಂತ್ರಿಯಾಗಿ ಕುರ್ಚಿಯನ್ನು ಅಲಂಕರಿಸಿದ್ದಾರೆ.
ಆರು ತಿಂಗಳ ಹಿಂದೆ ಎಐಎಡಿಎಂಕೆ ಇಬ್ಭಾಗವಾದ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಸಲ್ಲಿಸಿದ್ದ 66 ವರ್ಷದ ಪನ್ನೀರ್ ಸೆಲ್ವಂ ಅವರು, ಮುಖ್ಯಮಂತ್ರಿಯಾಗಿರುವ ಕೆ. ಪಳನಿಸ್ವಾಮಿ ಅವರಿಗೆ ಡೆಪ್ಯುಟಿಯಾಗಿ ತಮಿಳುನಾಡಿನಲ್ಲಿ ರಾಜ್ಯಭಾರ ಮಾಡಲಿದ್ದಾರೆ.

ಹಿಂದೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು ಈಗ ಅಧಿಕಾರದ ಆಸೆಯಿಂದಾಗಿ ಕೆಳಭಡ್ತಿ ಪಡೆದುಕೊಂಡು ಉಪ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಟೀಕಾಸ್ತ್ರಗಳು ಕೇಳಿಬರುತ್ತಿವೆ. ಏನೇ ಆಗಲಿ, ದಿವಂಗತ ಜಯಲಲಿತಾ ಅವರ ಸಮಾಧಿಗೆ ಹೋಗಿ ಆಶೀರ್ವಾದ ಪಡೆದುಕೊಂಡು ಬಂದ ಪನ್ನೀರ್ ಅಮ್ಮನ ಪ್ರೇರಣೆಯಿಂದಲೇ ಉಪ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದ್ದಾರೆ.
2001ರಲ್ಲಿ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿ, ಸುಪ್ರೀಂ ಕೋರ್ಟಿನಿಂದ ನಿಷೇಧಕ್ಕೊಳಗಾಗಿದ್ದಾಗ, ಪನ್ನೀರ್ ಸೆಲ್ವಂ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗುವ ಸುಯೋಗ ಪಡೆದುಕೊಂಡಿದ್ದರು. ನಂತರ, 2014ರಲ್ಲಿ ಜಯಲಲಿತಾಗೆ ಬೆಂಗಳೂರಿನ ಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾಗ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು. 2016ರ ಡಿಸೆಂಬರ್ 6ರಂದು ಜಯಲಲಿತಾ ಅವರು ಅಸುನೀಗಿದ ನಂತರ ಪನ್ನೀರ್ ಅವರನ್ನು ಪಟ್ಟದ ಮೇಲೆ ಕೂಡಿಸಲಾಗಿತ್ತು.
ಮೂರು ಬಾರಿಯೂ ಅಲ್ಪಾವಧಿಯ ಮುಖ್ಯಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂ ಅವರು ಗಟ್ಟಿಗಿತ್ತಿ ಶಶಿಕಲಾ ನಟರಾಜನ್ ವಿರುದ್ಧ ತಿರುಗಿಬಿದ್ದಿದ್ದರು. ನಂತರ ಶಶಿಕಲಾ ನಟರಾಜನ್ ಅವರ ಹಿಂಬಾಲಕ ಪಳನಿಸ್ವಾಮಿ ಜೊತೆ ಕೈಜೋಡಿಸಿದ್ದು, ಎಐಎಡಿಎಂಕೆ ಪಕ್ಷವನ್ನು ಒಗ್ಗೂಡಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅವರು ಸೋಮವಾರ ಪ್ರಮಾಣವನ್ನೂ ಸ್ವೀಕರಿಸಿದರು.












Click it and Unblock the Notifications