ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು
ಚೆನ್ನೈ, ಮೇ 19 : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಗಿಮುದ್ದೆ ಉಂಡು ಬಂದಿದ್ದ 68 ವರ್ಷದ ಕುಮಾರಿ ಜೆ.ಜಯಲಲಿತಾ ಅವರು ನಾಲ್ಕನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ. 234 ವಿಧಾನಸಭೆ ಸ್ಥಾನಗಳಲ್ಲಿ 121ರಲ್ಲಿ ಅವರ ಪಕ್ಷ ಎಐಎಡಿಎಂಕೆ ಮುನ್ನಡೆ ಸಾಧಿಸಿದ್ದು, ಡಿಎಂಕೆ ಮುಖಭಂಗ ಅನುಭವಿಸಿದೆ.[ವಿಜಯೋತ್ಸಾಹದ ಚಿತ್ರಗಳು]
ಬಹುಮತ ಪಡೆದರೆ ನಾನೇ ಮತ್ತೆ ಮುಖ್ಯಮಂತ್ರಿ ಎಂದು ಘೋಷಿಸಿದ್ದ 93 ವರ್ಷದ ಹಿರಿಯಜ್ಜ ಎಂ. ಕರುಣಾನಿಧಿ ಮೇಲೆ ತಮಿಳುನಾಡಿನ ಮತದಾರರು ಎಳ್ಳಷ್ಟೂ ಕರುಣೆ ತೋರಿಸಿಲ್ಲ. ಡಿಎಂಕೆ ಮತ್ತು ಮಿತ್ರಪಕ್ಷಗಳು ಬೆಳಿಗ್ಗೆ 9.55ರ ಸುಮಾರಿಗೆ 89 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಬಹುಮತಕ್ಕೆ ಬೇಕಿರುವುದು 118 ಸ್ಥಾನಗಳು. [ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]
ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೇವಲ 1 ರು. ಪಗಾರ ಪಡೆದಿದ್ದ 'ಅಮ್ಮ' ಜಯಲಲಿತಾ ನೀಡಿದ 1 ರು. ಇಡ್ಲಿ ಸಾಂಬಾರಿಗೆ ತಮಿಳುನಾಡಿನ ಮತದಾರರು ಮರುಳಾಗಿದ್ದಾರೆ. ನೀನೇ ನನ್ನ ತಾಯಿ, ನೀನೇ ನನ್ನ ದೈವ, ನೀನೇ ನಮಗೆ ಗತಿ ಎನ್ನುತ್ತ ತಮಿಳುನಾಡಿನ ಮತದಾರರು ಅಮ್ಮನಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. [ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]

ಚೆನ್ನೈನ ರಾಧಾಕೃಷ್ಣನ್ ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಲಲಿತಾ ಅವರಿಗೆ ಮಂಗಳಮುಖಿ ಸಿ ದೇವಿ (ಎನ್ಎಂಕೆ) ಮತ್ತು ಶಮಿಲಾ ಮುತ್ತುಚೋಳನ್ (ಡಿಎಂಕೆ) ಸೆಡ್ಡು ಹೊಡೆದಿದ್ದರು. ಇವರಲ್ಲಿ ಯಾರ ಕೊರಳಿಗೆ ಜಯದ ಮಾಲೆ ಬೀಳಲಿದೆ ಎಂಬುದು ಇನ್ನೂ ತಿಳಿದುಬರಬೇಕಿದೆ.
ಗಾಲಿ ಕುರ್ಚಿಯ ಮೇಲೆಯೇ ವರ್ಷಗಳಿಂದ ಕುಳಿತಿರುವ ಕರುಣಾನಿಧಿ ತನ್ನ ಮಗ ಸ್ಟಾಲಿನ್ ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದೆ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಅವರ ಪಕ್ಷಕ್ಕೆ ಮುಳುವಾಗಿರುವ ಸಾಧ್ಯತೆಯಿದೆ. ಅಲ್ಲದೆ, ಬೆಂಗಳೂರಿನಲ್ಲಿ ಜೈಲೂಟ ಉಂಡುಬಂದ ನಂತರ ಜಯಲಲಿತಾ ಅವರ ಮೇಲೆ ಅನುಕಂಪದ ಅಲೆಯೂ ಎದ್ದಿರುವ ಸಾಧ್ಯತೆ ಇದೆ. [ಐದು ರಾಜ್ಯಗಳ ಮತಗಟ್ಟೆ ಸಮೀಕ್ಷೆ ಪ್ರಕಟ: ಯಾವ ಪಕ್ಷಕ್ಕೆ ಎಷ್ಟು?]












Click it and Unblock the Notifications