ಗುಡಿಸಲಲ್ಲಿ ವಾಸ, ಮಣ್ಣಿನ ಒಲೆಯಲ್ಲಿ ಅಡುಗೆ; ಇದು ಅಭ್ಯರ್ಥಿಯ ಆಸ್ತಿ!
ಚೆನ್ನೈ, ಮಾರ್ಚ್ 23: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ಮೌಲ್ಯ ಘೋಷಣೆ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ಕೋಟ್ಯಧಿಪತಿಗಳೇ ಆಗಿದ್ದಾರೆ. ಆದರೆ ಸಿಪಿಐನಿಂದ ಸ್ಪರ್ಧಿಸುತ್ತಿರುವ ಕೆ. ಮಾರಿಮುತ್ತು ಎಂಬ ಅಭ್ಯರ್ಥಿ ವಿವರ ಅಚ್ಚರಿ ಹುಟ್ಟಿಸುತ್ತದೆ.
ಗುಡಿಸಲಿನಲ್ಲಿ ಜೀವಿಸುತ್ತಾ, ಕೆಲವೇ ಸಾವಿರ ರೂಪಾಯಿಯನ್ನು ಕೈಯಲ್ಲಿಟ್ಟುಕೊಂಡಿರುವುದಾಗಿ ಘೋಷಿಸಿರುವ ಕೆ. ಮಾರಿಮುತ್ತು ತಮ್ಮ ಕ್ಷೇತ್ರದಲ್ಲಿರುವ ಬಡವರ ಕನಸುಗಳನ್ನು ನನಸು ಮಾಡುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ತಿರುತಿರೈಪೂಂಡಿ 1971ರಿಂದಲೂ ಸಿಪಿಐ ಭದ್ರಕೋಟೆಯಾಗಿದ್ದು, 2016ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಿ. ಅದಾಲರಸನ್ ಇಲ್ಲಿ ಸ್ಥಾನ ಗೆದ್ದಿದ್ದರು. ಸಿಪಿಐ ಈಗ ಡಿಎಂಕೆ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಎಐಎಡಿಎಂಕೆಯ ಸಿ ಸುರೇಶ್ ಕುಮಾರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಮುಂದೆ ಓದಿ...
ತಮಿಳುನಾಡು ಚುನಾವಣೆ; ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ?
ತಿರುತಿರೈಪೂಂಡಿಯಿಂದ ಮಾರಿಮುತ್ತು ಕಣದಲ್ಲಿ
234 ವಿಧಾನಸಭೆ ಕ್ಷೇತ್ರಗಳಿಗೆ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟದ ಮೈತ್ರಿಯಲ್ಲಿ ಸಿಪಿಐ ಆರು ಸ್ಥಾನಗಳಿಂದ ಸ್ಪರ್ಧಿಸುತ್ತಿದೆ. ತಿರುವಾರೂರು ಜಿಲ್ಲೆಯ ಕಾಯ್ದಿರಿಸಿದ ತಿರುತಿರೈಪೂಂಡಿಯಿಂದ ಮಾರಿಮುತ್ತು ಅವರನ್ನು ಕಣಕ್ಕಿಳಿಸಲಾಗಿದೆ.
ಮಾರಿಮುತ್ತು ಆಸ್ತಿ ಮೌಲ್ಯ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮದೇ ಜೊತೆಗಾರರು ಕೋಟಿ ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಘೋಷಿಸಿದ್ದಾರೆ. ಹಲವು ಪ್ರತಿಸ್ಪರ್ಧಿಗಳು ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ. ಆದರೆ ಮಾರಿಮುತ್ತು ಗುಡಿಸಲಿನಲ್ಲಿ ನೆಲೆಸಿದ್ದು, ಬಡ ಜನರ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಮಾರಿಮುತ್ತು ಅವರ ಪತ್ನಿ 75 ಸೆಂಟ್ ಭೂಮಿ ಹೊಂದಿದ್ದು, 3000 ಸಾವಿರ ರೂ ನಗದು ಇಟ್ಟುಕೊಂಡಿದ್ದಾರೆ. ಬ್ಯಾಂಕ್ನಲ್ಲಿ 58,156 ರೂಪಾಯಿಗಳಿವೆ. ಚರಾಸ್ತಿ 79,304 ರೂ ಇದ್ದು, ಸ್ಥಿರಾಸ್ತಿ ಮೌಲ್ಯ 1.75 ಲಕ್ಷವಾಗಿದೆ. ಮಾರಿಮುತ್ತುಗೆ ಯಾವುದೇ ಸ್ಥಿರಾಸ್ತಿ ಇಲ್ಲ.
ತಮಿಳುನಾಡು: ಮತದಾರನ ಮನೆಯಲ್ಲಿ ಬಟ್ಟೆ ತೊಳೆದ ಎಐಎಡಿಎಂಕೆ ಅಭ್ಯರ್ಥಿ!
"ತನ್ನ ಪರಿಹಾರದ ಹಣವನ್ನು ಬೇರೊಬ್ಬರಿಗೆ ನೀಡಿದ್ದರು"
ನನ್ನ ಕ್ಷೇತ್ರದ ಜನರು ಬಡವರಾಗಿದ್ದಾರೆ. ಅವರಿಗೆ ಮನೆಗಳನ್ನು ನಿರ್ಮಿಸಲು ಬೇರೆ ಮಾರ್ಗಗಳಿಲ್ಲ. ಹೀಗಾಗಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳುತ್ತಾರೆ ಮಾರಿಮುತ್ತು. 1994ರಿಂದ ಇವರು ಸಕ್ರಿಯ ರಾಜಕೀಯದಲ್ಲಿದ್ದು, ಮಾರಿಮುತ್ತು ಕುಟುಂಬ ಕಡುವಾಕುಡಿ ಗ್ರಾಮದಲ್ಲಿದೆ. ಎಲ್ಪಿಜಿ ಅನಿಲ ಪಡೆಯಲೂ ಸಾಧ್ಯವಾಗದ ಕಾರಣ ಮಣ್ಣಿನ ಒಲೆಯಲ್ಲೇ ಅಡುಗೆ ಮಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಗಾಜಾ ಚಂಡಮಾರುತದಿಂದಾಗಿ ತನ್ನ ಗುಡಿಸಲನ್ನೇ ಮಾರಿಮುತ್ತು ಕಳೆದುಕೊಂಡಿದ್ದರು. ಸ್ವಯಂಸೇವಾ ಸಂಸ್ಥೆಯೊಂದು ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ್ದು, ಪರಿಹಾರದಿಂದ ಹೊರಗುಳಿದಿದ್ದ ಹಳ್ಳಿಯ ಇನ್ನೊಬ್ಬ ವ್ಯಕ್ತಿಗೆ ಆ ಹಣವನ್ನು ಕೊಟ್ಟು ಮನೆ ದುರಸ್ತಿಗೆ ನೆರವಾಗಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ."ಕೃಷಿ ಭೂಮಿ ರಕ್ಷಣೆ ನನ್ನ ಜವಾಬ್ದಾರಿ"
ತಾನು ಅಧಿಕಾರಕ್ಕೆ ಬಂದರೆ ಕೃಷಿ ಭೂಮಿಯನ್ನು ರಕ್ಷಿಸುತ್ತೇನೆ ಹಾಗೂ ಕ್ಷೇತ್ರದಲ್ಲಿ ಉದ್ಯೋಗ ಖಾತ್ರಿ ತರುತ್ತೇನೆ ಎಂದು ಹೈಡ್ರೋಕಾರ್ಬನ್ ಯೋಜನೆ ವಿರುದ್ಧದ ಆಂದೋಲನಗಳಲ್ಲಿ ಮುಂದಿದ್ದ ಮಾರಿಮುತ್ತು ಭರವಸೆ ನೀಡಿದ್ದಾರೆ. ತನ್ನ ಕ್ಷೇತ್ರದ ಬಡಜನರ ಉದ್ಧಾರ ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ.