ತ.ನಾಡು ಅಸೆಂಬ್ಲಿ ಚುನಾವಣೆ: ಡಿಎಂಕೆ ನಾಚಿಸುವಂತಹ ಬಿಜೆಪಿ ಮೈತ್ರಿಕೂಟದ ಚುನಾವಣಾ ಪ್ರಣಾಳಿಕೆ
ಚೆನ್ನೈ, ಮಾರ್ಚ್ 17: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರಲ್ಲಿ ದೇವರನ್ನು ಕಾಣುವ ಪರಿಪಾಠ, ಓಲೈಕೆಯ ಪರಮಾವಧಿ ತಮಿಳುನಾಡು ರಾಜಕೀಯದಲ್ಲಿ ತುಸು ಜಾಸ್ತಿಯೇ. ಕರುಣಾನಿಧಿ-ಜಯಲಲಿತಾ ಜೀವಿತಾವಧಿಯಲ್ಲಿ ಇದು ತಾರಕಕ್ಕೇರಿದ್ದು ಗೊತ್ತೇ ಇದೆ.
ಜಯಲಲಿತಾ ನಿಧನದ ನಂತರ ಒಂದು ಹಂತಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ರಿಮೋಟ್ ಕಂಟ್ರೋಲ್ ಅನ್ನು ತನ್ನ ಬಳಿ ಇಟ್ಟುಕೊಂಡಿರುವ ಬಿಜೆಪಿ, ಹಾಲೀ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷವನ್ನು ಮುಂದೆ ಇಟ್ಟುಕೊಂಡು, ತೆರೆಯ ಹಿಂದೆ ರಾಜಕೀಯ ಮಾಡುತ್ತಿದೆ.
ಮುಂದಿನ ತಿಂಗಳು, ಏಪ್ರಿಲ್ ಆರರಂದು ತಮಿಳುನಾಡು ಅಸೆಂಬ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಎಐಎಡಿಎಂಕೆ, ಅಧಿಕಾರಕ್ಕೇರಲು ಡಿಎಂಕೆ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದೆ. ಅದರ ಭಾಗವಾಗಿ, ಎರಡೂ ಕಡೆಯಿಂದ ಪ್ರಣಾಳಿಕೆ ಕೂಡಾ ಬಿಡುಗಡೆಯಾಗಿದೆ.
ಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಿದ ಒಂದು ದಿನದ ನಂತರ, ಎಐಎಡಿಎಂಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡುವ ಭರವಸೆಯನ್ನು ಈಡೇರಿಸುತ್ತವೆಯೋ ಎನ್ನುವುದು ನಂತರದ ಪ್ರಶ್ನೆಯಾದರೂ, ಎಐಎಡಿಎಂಕೆ ನೀಡಿದ ಭರವಸೆಯಂತೂ ವಿರೋಧಿಗಳನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಏನಿದೆ ಅಂತ ಭರವಸೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಪ್ರಣಾಳಿಕೆ
'ಪ್ರತಿವರ್ಷ ಪ್ರತಿಯೊಂದು ಮನೆಗೆ ಕನಿಷ್ಠ ಆರು ಅಡುಗೆ ಸಿಲಿಂಡರ್, ನೀಟ್ ಪರೀಕ್ಷೆ ರದ್ದು, ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಉದ್ಯೋಗಕ್ಕಾಗಿ 500 ವಿದ್ಯಾರ್ಥಿಗಳಿಗೆ ತರಬೇತಿ, ಯುವಕರಿಗೆ ಉದ್ಯೋಗ ನೀಡುವ ಯೋಜನೆ, ಸ್ಟಾರ್ಟ್ ಅಪ್ಗಳಿಗೆ ಮತ್ತು ಹೊಸ ಉದ್ಯಮಿಗಳಿಗೆ ಕನಿಷ್ಠ 5 ವರ್ಷಗಳವರೆಗೆ ತೆರಿಗೆ ವಿನಾಯಿತಿ' ಈ ರೀತಿಯ ಭರವಸೆಯನ್ನು ಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.

ಎಂ.ಕೆ.ಸ್ಟಾಲಿನ್ ರಿಂದ ಪ್ರಣಾಳಿಕೆ ಬಿಡುಗಡೆ
ಇನ್ನು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಪ್ರಣಾಳಿಕೆ ಮಾಡಿ, 'ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ಮಹಿಳೆಯರಿಗೆ ಉಚಿತ ಸ್ಥಳೀಯ ಸಾರಿಗೆ ಸೌಲಭ್ಯ, ಸ್ಥಳೀಯರಿಗೆ 75% ಉದ್ಯೋಗ ಮೀಸಲಾತಿ, ಹಿಂದೂ ದೇಗುಲಗಳಿಗೆ ಭೇಟಿ ನೀಡುವ ಸುಮಾರು ಒಂದು ಲಕ್ಷ ಜನರಿಗೆ 25 ಸಾವಿರ ರೂವರೆಗೂ ಆರ್ಥಿಕ ಸಹಾಯ, ಪೆಟ್ರೋಲ್ ಮೇಲೆ 5ರೂ ಹಾಗೂ ಡೀಸೆಲ್ ಮೇಲೆ 4ರೂ ಕಡಿತ, ಅಡುಗೆ ಅನಿಲದ ಮೇಲೆ 100ರೂ ಸಬ್ಸಿಡಿ' ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ
ಇವೆರಡನ್ನೂ ಮೀರಿಸುವಂತಹ ಭರವಸೆಗಳ ಮಹಾಪೂರವನ್ನೇ ಎಐಎಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. 'ಪ್ರತಿವರ್ಷ ಪ್ರತಿಯೊಂದು ಮನೆಗೆ ಕನಿಷ್ಠ ಆರು ಅಡುಗೆ ಸಿಲಿಂಡರ್, ರಾಜ್ಯದ ಪ್ರತಿಯೊಂದು ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ, ಪ್ರತೀ ಮನೆಯಲ್ಲಿನ ಉದ್ಯೋಗವಿಲ್ಲದ ಗೃಹಿಣಿಯರಿಗೆ (house wife) ಮಾಸಿಕ ಒಂದೂವರೆ ಸಾವಿರ ರೂಪಾಯಿ, ರೈತರಿಗೆ ವಾರ್ಷಿಕ 7,500 ಸಬ್ಸಿಡಿ, ಉಚಿತ ಸೋಲಾರ್ ಸ್ಟೌವ್, ಪ್ರತೀ ಮನೆಗೂ ವಾಷಿಂಗ್ ಮೆಷಿನ್, ಶಿಕ್ಷಣದ ಮೇಲಿನ ಸಾಲಮನ್ನಾ' ಈ ರೀತಿಯ ಹಲವು ಜನಪ್ರಿಯ ಘೋಷಣೆಗಳನ್ನು ಎಐಎಡಿಎಂಕೆ ಮಾಡಿದೆ.
Recommended Video

ಎಐಎಡಿಎಂಕೆ-ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ಬೆಚ್ಚಿಬಿದ್ದ ಡಿಎಂಕೆ ಮೈತ್ರಿಕೂಟ
ಇದಲ್ಲದೇ, ಸೂರಿಲ್ಲದವರಿಗೆ ಉಚಿತ ಮನೆ ಕಟ್ಟಿಸಿ ಕೊಡುವುದು, ಉಚಿತ ದಿನಸಿ ಪದಾರ್ಥಗಳನ್ನು ಮನೆಬಾಗಿಲಿಗೆ ಕಳುಹಿಸುವ ವ್ಯವಸ್ಥೆ, ಹೆರಿಗೆ ರಜೆಯನ್ನು ಒಂದು ವರ್ಷಕ್ಕೆ ಏರಿಸುವುದು, ಪೌರತ್ವ ತಿದ್ದುಪಡಿ ಮಸೂದೆ ರದ್ದತಿಗೆ ಕೇಂದ್ರಕ್ಕೆ ಒತ್ತಾಯ ಇಂಥ ಅಂಶಗಳನ್ನೂ ಎಐಎಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಎಐಎಡಿಎಂಕೆ ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ಜನಪ್ರಿಯ ಪ್ರಣಾಳಿಕೆಯನ್ನೇ ನೀಡುವ ಮೂಲಕ ಡಿಎಂಕೆಗೆ ತಲೆನೋವು ತಂದಿದೆ.












Click it and Unblock the Notifications