ಸಿಎಂ ಬಗ್ಗೆ ಚಪ್ಪಲಿ ಮಾತು: ಪಳನಿಸ್ವಾಮಿ ಕ್ಷಮೆ ಕೋರಿದ ಎ ರಾಜಾ
ಚೆನ್ನೈ, ಮಾರ್ಚ್ 27: ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅವರ ತಾಯಿ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಡಿಎಂಕೆ ಸಂಸದ ಎ. ರಾಜಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಸಿಎಂ ಪಳನಿಸ್ವಾಮಿ ಮತ್ತು ಅವರ ತಾಯಿ ಬಗ್ಗೆ ಡಿಎಂಕೆ ಸಂಸದ ಎ. ರಾಜಾ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, "ನನ್ನ ಟೀಕೆಗಳಿಂದಾಗಿ ಸಿಎಂಗೆ ತೀವ್ರ ನೋವುಂಟಾಗಿದೆ ಎಂದು ತಿಳಿದು ಬೇಸರವಾಯಿತು. ನನ್ನ ಟೀಕೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ, "ಎಂದು ಹೇಳಿದರು
ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದು ನನ್ನ ಭಾಷಣದ ಮುಖ್ಯ ಉದ್ದೇಶವಾಗಿರಲಿಲ್ಲ. ಬದಲಿಗೆ ಎರಡು ನಾಯಕರ ಜೀವನದ ಬಗ್ಗೆ ಹೋಲಿಕೆ ಮಾಡಿದ್ದೇನೆ ಎಂದು ಡಿಎಂಕೆ ಸಂಸದ ಎ. ರಾಜಾ ಸ್ಪಷ್ಟನೆ ನೀಡಿದ್ದಾರೆ.

ಡಿಎಂಕೆ ಸಂಸದನ ವಿರುದ್ಧ ಸಿಎಂ ಸಿಡಿಮಿಡಿ:
ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಡಿಎಂಕೆ ಸಂಸದ ಎ ರಾಜಾ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ರಾಜ್ಯದ ಒಬ್ಬ ಮುಖ್ಯಮಂತ್ರಿ ಬಗ್ಗೆಯೇ ಇಷ್ಚೊಂದು ಹಗುರವಾಗಿ ಮಾತನಾಡುತ್ತಿರುವಾಗ ಇನ್ನು ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗೆ ಎಂದು ಪಳನಿಸ್ವಾಮಿ ಕಿಡಿ ಕಾರಿದ್ದರು. ಎ ರಾಜಾ ನೀಡಿದ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಎ ರಾಜಾ ನೀಡಿದ್ದ ನಿಂದನಾತ್ಮಕ ಹೇಳಿಕೆ:
"ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಬೆಲ್ಲದ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ಟಾಲಿನ್ಗೆ ಸಮಾನ ಸ್ಪರ್ಧೆ ಎಂದು ಹೇಳುವುದಕ್ಕೆ ಹೇಗೆ ನ್ಯಾಯ? ನಿಮ್ಮ ಮೌಲ್ಯವು ನಮ್ಮ ನಾಯಕ ಸ್ಟಾಲಿನ್ರ ಚಪ್ಪಲಿಯ ಬೆಲೆಗಿಂತ ಕಡಿಮೆ ಆಗಿರುತ್ತದೆ" ಎಂದು ಎ ರಾಜಾ ಹೇಳಿಕೆ ನೀಡಿದ್ದರು.
ತಮಿಳುನಾಡಿನಲ್ಲಿ 20 ಕಡೆ ಬಿಜೆಪಿ ಅಭ್ಯರ್ಥಿಗಳು:
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳ ಚುನಾವಣೆಗೆ ಪ್ರಾದೇಶಿಕ ಎಐಎಡಿಎಂಕೆ ಪಕ್ಷದ ಜೊತೆಗೆ ಭಾರತೀಯ ಜನತಾ ಪಕ್ಷವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಅಖಾಡದಲ್ಲಿ ಬಿಜೆಪಿಯು 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications