ಡಿಎಂಕೆ ಸಂಸದನಿಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕನ ಬಂಧನ: ಕಾರ್ಯಕರ್ತರ ಪ್ರತಿಭಟನೆ
ಚೆನ್ನೈ, ಸೆ. 21: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಎ ರಾಜಾ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಿಜೆಪಿ ಮುಖಂಡ ಬಾಲಾಜಿ ಉತ್ತಮ ರಾಮಸ್ವಾಮಿಯನ್ನು ಬುಧವಾರ ಬಂಧಿಸಲಾಗಿದೆ.
ಅವರು ಸನಾತನ ಧರ್ಮದ ಕುರಿತು ಹೇಳಿಕೆಗಳಿಗಾಗಿ ಎ ರಾಜಾ ಅವರಿಗೆ ಬಿಜೆಪಿಯ ಕೊಯಮತ್ತೂರು ಜಿಲ್ಲಾ ಮುಖ್ಯಸ್ಥ ಬಾಲಾಜಿ ಉತ್ತಮ ರಾಮಸ್ವಾಮಿ
ಕಳೆದ ವಾರ ಮಾಡಿದ ಭಾಷಣದಲ್ಲಿ ಬೆದರಿಕೆ ಹಾಕಿದ್ದರು. ಜೊತೆಗೆ ಧೈರ್ಯವಿದ್ದರೇ ಕೊಯಮತ್ತೂರಿನೊಳಗೆ ಕಾಲಿಡಲು ಸವಾಲು ಹಾಕಿದ್ದರು.
"ನಿಮಗೆ ಧೈರ್ಯವಿದ್ದರೆ, ಪೊಲೀಸ್ ರಕ್ಷಣೆಯಿಲ್ಲದೆ ಕೊಯಮತ್ತೂರಿನತ್ತ ಹೆಜ್ಜೆ ಹಾಕಿ ನೋಡೋಣ. ಎ ರಾಜಾ ಅವರನ್ನು ಎಲ್ಲಿಗೆ ಬೇಕಾದರೂ ಕರೆತರುವಂತೆ ನಾನು ಡಿಎಂಕೆಗೆ ಸವಾಲು ಹಾಕುತ್ತೇನೆ. ಬುದ್ಧಿಹೀನ ನಾಯಿಗಳೇ ನಿಮಗೇನು ಗೊತ್ತು ಸನಾತನ ಧರ್ಮದ ಬಗ್ಗೆ" ಎಂದು ಬಿಜೆಪಿ ಮುಖಂಡ ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪೆರಿಯಾರ್, ಸಿಎಂ, ಸಂಸದನ ವಿರುದ್ಧ ಮಾತು; ಬಂಧನ
ನೀಲಗಿರಿ ಸಂಸದ ಎ ರಾಜಾ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ವಿರುದ್ಧ ಬಿಜೆಪಿಯ ಕೊಯಮತ್ತೂರು ಜಿಲ್ಲಾ ಮುಖ್ಯಸ್ಥ ಬಾಲಾಜಿ ಉತ್ತಮ ರಾಮಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ತಂದೈ ಪೆರಿಯಾರ್ ದ್ರಾವಿಡರ್ ಕಳಗಂ ಪದಾಧಿಕಾರಿಗಳು ಪೀಲಮೇಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ವಿಚಾರಣೆಗಾಗಿ ಬಾಲಾಜಿ ಉತ್ತಮರಾಮಸ್ವಾಮಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡರು ಬಳಿಕ ಅವರನ್ನು ಬಂಧಿಸಿದ್ದರು.

ಪೊಲೀಸ್ ಠಾಣೆಯ ಹೊರಗೆ ಬಿಜೆಪಿ ಪ್ರತಿಭಟನೆ
ಬಾಲಾಜಿ ಉತ್ತಮರಾಮಸ್ವಾಮಿ ಬಂಧನದ ನಂತರ, ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಲು ಪ್ರಾರಂಭಿಸಿದರು, ಇದರಿಂದಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು.
ನಂತರ ಕೊಯಮತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಂಧಿತ ಬಾಲಾಜಿ ಉತ್ತಮರಾಮಸ್ವಾಮಿ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶೂದ್ರರನ್ನು "ವೇಶ್ಯೆಯರ ಮಕ್ಕಳು" ಎಂದಿದ್ದ ಸಂಸದ
ಸಂಸದ ಎ ರಾಜಾ ಇತ್ತೀಚೆಗೆ ಸನಾತನ ಧರ್ಮ, ಶೂದ್ರರು ಮತ್ತು ಮನುಸ್ಮೃತಿಯ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿ ವಿವಾದವನ್ನು ಹುಟ್ಟುಹಾಕಿದ್ದರು.
ದ್ರಾವಿಡರ್ ಕಳಗಂ ಸಭೆಯನ್ನುದ್ದೇಶಿಸಿ ಮಾತನಾಡಿದ ಎ ರಾಜಾ, "ಹಿಂದೂ ಆಗಿ ಉಳಿಯುವವರೆಗೂ ನೀನು ಶೂದ್ರ. ಶೂದ್ರನಾಗಿ ಉಳಿಯುವವರೆಗೂ ನೀನು ವೇಶ್ಯೆಯ ಮಗ. ಹಿಂದೂ ಆಗಿ ಉಳಿಯುವವರೆಗೂ ನೀನು ಪಂಚಮ (ದಲಿತ). ಹಿಂದೂ ಆಗಿ ಉಳಿಯುವವರೆಗೂ ನೀನು ಅಸ್ಪೃಶ್ಯ," ಎಂದು ಹೇಳಿಕೆ ನೀಡಿದ್ದರು.
ರಾಜ ಹೇಳಿಕೆಗೆ ಬಿಜೆಪಿ ಭಾರಿ ಆಕ್ರೋಶ ಹೊರ ಹಾಕಿತ್ತು. ಎ ರಾಜಾ ಅವರ ಹೇಳಿಕೆಯನ್ನು ವಿರೋಧಿಸಿ ಮಂಗಳವಾರ ಹಿಂದೂ ಪರ ಸಂಘಟನೆಗಳು ತಮಿಳುನಾಡಿನ ಕೆಲವು ಸ್ಥಳಗಳಲ್ಲಿ ಬಂದ್ಗೆ ಕರೆ ನೀಡಿದ್ದವು.

ಶೂದ್ರರು ಯಾರು? ಅವರು ಹಿಂದೂಗಳಲ್ಲವೇ?
ಸಂಸದರ ಹೇಳಿಕೆ ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆದ ಬೆನ್ನಲ್ಲ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮತ್ತೆ ಟ್ವೀಟ್ ಮಾಡಿದ್ದರು.
"ಶೂದ್ರರು ಯಾರು? ಅವರು ಹಿಂದೂಗಳಲ್ಲವೇ? ಮನುಸ್ಮೃತಿಯಲ್ಲಿ ಅವರನ್ನು ಏಕೆ ಅವಮಾನಿಸಲಾಗಿದೆ ಮತ್ತು ಹಿಂದೂಗಳ ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯ ಪ್ರವೇಶವನ್ನು ಏಕೆ ನಿರಾಕರಿಸಲಾಗಿದೆ. ದ್ರಾವಿಡ ಚಳವಳಿಯು 90% ಹಿಂದೂಗಳ ಸಂರಕ್ಷಕನಾಗಿ ಇವುಗಳನ್ನು ಪ್ರಶ್ನಿಸಿತು ಮತ್ತು ನಿವಾರಿಸಿತು. ಅದು ಯಾವತ್ತಿಗೂ ಹಿಂದೂ ವಿರೋಧಿಯಾಗಲು ಸಾಧ್ಯವಿಲ್ಲ" ಎಂದು ಎ ರಾಜಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications