ಚುನಾವಣಾ ಪ್ರಚಾರದಿಂದ ರಾಹುಲ್ ಗಾಂಧಿ ಮೇಲೆ ನಿಷೇಧ ಹೇರುವಂತೆ ಬಿಜೆಪಿ ಒತ್ತಾಯ
ಚೆನ್ನೈ, ಮಾರ್ಚ್ 4: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ತಮಿಳುನಾಡು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಪತ್ರ ಬರೆದಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ತಮ್ಮ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಮಾದರಿ ನೀತಿ ಸಂಹಿತೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಾರ್ಚ್ 1ರಂದು ಕನ್ಯಾಕುಮಾರಿಯ ಸೇಂಟ್ ಜೋಸೆಫ್ ಶಾಲೆಯ ಆವರಣವನ್ನು ತಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಅವರು, ಮಾದರಿ ನೀತಿ ಸಂಹಿತೆ ಹಾಗೂ ಐಪಿಸಿಯ ನಿಯಮಗು 1860ಅನ್ನು ಉಲ್ಲಂಘಿಸಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ ಮುರುಗನ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಐಪಿಸಿಯ 109 ಮತ್ತು 124ಎ ಸೆಕ್ಷನ್ಗಳ ಅಡಿ ಅಪರಾಧಗಳನ್ನು ಎಸಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ರಾಹುಲ್ ಗಾಂಧಿ ಅವರ ಮೇಲೆ ನಿಷೇಧ ವಿಧಿಸಬೇಕು. ಐಪಿಸಿಯ 124 ಎ (ದೇಶದ್ರೋಹ) ಸೆಕ್ಷನ್ ಅಡಿ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಸಾಧಾರಣ ಶತ್ರು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ದೇಶದಲ್ಲಿ ಹಣದ ಮೂಲಕ ಪ್ರಾಬಲ್ಯ ಮೆರೆಯುತ್ತಿರುವ ಶತ್ರುವಿನ ವಿರುದ್ಧ ನಾವು ಹೋರಾಡುತ್ತಿದ್ದೇವೆ. ತನ್ನ ವಿರೋಧಿಗಳನ್ನು ನಾಶಪಡಿಸುತ್ತಿರುವ ವೈರಿಯ ವಿರುದ್ಧ ಹೋರಾಡುತ್ತಿದ್ದೇವೆ. ಇದನ್ನು ನಾವು ಮೊದಲೂ ಮಾಡಿದ್ದೆವು. ನಾವು ಈಗ ಹೊಸದಾಗಿ ಬಂದಿರುವ ಶತ್ರುವಿಗಿಂತಲೂ ದೊಡ್ಡ ಶತ್ರುವನ್ನು (ಬ್ರಿಟಿಷರು) ಸೋಲಿಸಿದ್ದೆವು ಎಂದು ರಾಹುಲ್ ಗಾಂಧಿ ಹೇಳಿದ್ದರು. ಮುರುಗನ್ ಅವರು ತಮ್ಮ ಪತ್ರದಲ್ಲಿ ಈ ಹೇಳಿಕೆಯನ್ನು ಕೂಡ ಉಲ್ಲೇಖಿಸಿದ್ದಾರೆ.












Click it and Unblock the Notifications