ಆದಾಯ ತೆರಿಗೆ ವಂಚನೆ ಪ್ರಕರಣ: ತಮಿಳು ನಟ ವಿಜಯ್ ವಿಚಾರಣೆ
ಚೆನ್ನೈ, ಫೆಬ್ರವರಿ 5: ಸಿನಿಮಾ ಸಂಸ್ಥೆಯೊಂದರಲ್ಲಿ ನಡೆದಿದೆ ಎನ್ನಲಾದ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳು ನಟ ವಿಜಯ್ ಅವರನ್ನು ಬುಧವಾರ ವಿಚಾರಣೆಗೆ ಒಳಪಡಿಸಿದರು.
ಕಳೆದ ವರ್ಷ ಭರ್ಜರಿ ಹಿಟ್ ಆದ 'ಬಿಗಿಲ್' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಎಜಿಎಸ್ ಸಿನಿಮಾಸ್ ಸಂಸ್ಥೆ ಹಾಗೂ ಸಿನಿಮಾ ಫೈನಾನ್ಷಿಯರ್ ಅನ್ಬು ಚೆಳಿಯನ್ ಅವರ ಮಧುರೈ ಆಸ್ತಿಗಳ ಮೇಲೆ ಕೂಡ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ಲೋಕೇಶ್ ಕನಗರಾಜ್ ನಿರ್ದೇಶನದ 'ಮಾಸ್ಟರ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ವಿಜಯ್ ಅವರನ್ನು ವಿಚಾರಣೆಗೆ ಒಳಪಡಿಸಲು ಆದಾಯ ತೆರಿಗೆ ಇಲಾಖೆ ಅದಿಕಾರಿಗಳ ತಂಡ ನೇವೇಲಿಗೆ ತೆರಳಿತ್ತು. ಅವರ ವಿಚಾರಣೆ ನಡೆಸುವ ವೇಳೆಯೇ ಎಜಿಎಸ್ ಸಿನಿಮಾಸ್ ಮತ್ತು ಎಜಿಎಸ್ ಎಂಟರ್ಟೈನ್ಮೆಂಟ್ ಒಳಗೊಂಡಂತೆ ಎಜಿಎಸ್ ಸಮೂಹಕ್ಕೆ ಸೇರಿದ ಸುಮಾರು 20 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಐಟಿ ದಾಳಿ ನಡೆದಿದೆ.

ಬಿಗಿಲ್ ಲಾಭದ ಬಗ್ಗೆ ಪ್ರಶ್ನೆ
ಫೆ. 1ರಿಂದಲೂ ವಿಜಯ್ ನೇವೇಲಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಅವರಿಗೆ ಐಟಿಯಿಂದ ನೋಟಿಸ್ ಹೊರಡಿಸಲಾಗಿತ್ತು ಎನ್ನಲಾಗಿದೆ. ವಿಜಯ್ ವಿಚಾರಣೆಯಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತ್ತು. 'ಬಿಗಿಲ್' ಸಿನಿಮಾಕ್ಕೆ ವಿಜಯ್ ಪಡೆದ ಸಂಭಾವನೆ ಮತ್ತು ಅದರ ಲಾಭಾಂಶದಿಂದ ಪಡೆದ ಮೊತ್ತ ಹಾಗೂ ಇತರೆ ಸಂಗತಿಗಳ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಜಯ್ ಬುಧವಾರ ಸಂಜೆ ಚೆನ್ನೈನ ಇಸಿಆರ್ ನಿವಾಸಕ್ಕೆ ಮರಳಲಿದ್ದು, ಆಗಲೂ ಅವರ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ.

ತಮಿಳು ಸಿನಿಮಾಗಳ ಫೈನಾನ್ಷಿಯರ್
ಸಿನಿಮಾ ಫೈನಾನ್ಷಿಯರ್ ಅನ್ಬು ಚೆಳಿಯನ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆಯೂ ಐಟಿ ದಾಳಿ ನಡೆದಿದೆ. ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುವುದರಿಂದಾಗಿ ಸಿನಿಮಾ ಉದ್ಯಮದಲ್ಲಿ ಚಿರಪರಿಚಿತರಾಗಿರುವ ಅನ್ಬು, ಅನೇಕರಿಗೆ ವಂಚಿಸಿದ್ದಾರೆ ಎಂಬ ಆರೋಪವೂ ಇದೆ. ಸಾಲದ ವಿಚಾರವಾಗಿ ತೀವ್ರ ಕಿರುಕುಳ ನೀಡಿ ತಮಿಳು ನಿರ್ಮಾಪಕ ಅಶೋಕ್ ಕುಮಾರ್ 2017ರ ನವೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಪ್ರಕರಣ ಅನ್ಬು ಮೇಲಿದೆ.

ವಿಜಯ್ ವಿರುದ್ಧ ಬಿಜೆಪಿ ಆರೋಪ
ವಿಜಯ್ ಅವರ ಬಿಗಿಲ್ ಸಿನಿಮಾಕ್ಕೂ ಹಿಂದಿನ 'ಮೆರ್ಸಲ್' ಮತ್ತು 'ಸರ್ಕಾರ್' ಸಿನಿಮಾಗಳು ಕೂಡ ಭಾರಿ ವಿವಾದ ಸೃಷ್ಟಿಸಿದ್ದವು. 'ಮೆರ್ಸಲ್' ಚಿತ್ರದಲ್ಲಿ ಜಿಎಸ್ಟಿ ಮತ್ತು ಅಪನಗದೀಕರಣವನ್ನು ತೀವ್ರವಾಗಿ ಟೀಕಿಸಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ 2017ರಲ್ಲಿ ಆ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿತ್ತು. ವಿಜಯ್ ಕ್ರೈಸ್ತರಾಗಿರುವುದರಿಂದ ಬಿಜೆಪಿ ಸರ್ಕಾರವನ್ನು ಟೀಕಿಸುವಂತಹ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು.

2015ರಲ್ಲಿ ಐಟಿ ದಾಳಿ
ವಿಜಯ್ ನಟನೆಯ 'ಪುಲಿ' ಬಿಡುಗಡೆಗೂ ಮುನ್ನ 2015ರ ಸೆಪ್ಟೆಂಬರ್ನಲ್ಲಿ ವಿಜಯ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಅದೇ ಸಂದರ್ಭದಲ್ಲಿ ಸಹ ನಟಿಯರಾದ ನಯನತಾರಾ ಮತ್ತು ಸಮಂತಾ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆಯೂ ಐಟಿ ದಾಳಿ ಹಾಗೂ ಪರಿಶೀಲನೆ ಮಾಡಲಾಗಿತ್ತು. 'ನಾನು ಸರಿಯಾದ ರೀತಿಯಲ್ಲಿ ಆದಾಯ, ಸಂಪತ್ತು ಮತ್ತು ವೃತ್ತಿ ತೆರಿಗೆಗಳನ್ನು ಕಟ್ಟುತ್ತಿದ್ದೇನೆ. ನಾನು ತೆರಿಗೆ ವಂಚನೆ ಮಾಡಿದ್ದೇನೆಯೋ ಇಲ್ಲವೋ ಎಂದು ತಿಳಿಯಲು ಅವರು ದಾಳಿ ನಡೆಸಿದ್ದರು. ನಮ್ಮ ಕುಟುಂಬ ಮತ್ತು ಸಿಬ್ಬಂದಿ ಅವರಿಗೆ ಸಂಪೂರ್ಣ ಸಹಕಾರ ನೀಡಿ ಎಲ್ಲ ದಾಖಲೆಗಳನ್ನೂ ಮತ್ತು ಪುರಾವೆಗಳನ್ನೂ ನೀಡಿತ್ತು' ಎಂದು ವಿಜಯ್ ತಿಳಿಸಿದ್ದರು.












Click it and Unblock the Notifications