Just in: ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದ ಸೂಪರ್ ಸ್ಟಾರ್
ಚೆನ್ನೈ, ಆಗಸ್ಟ್ 08: ತನಗೆ ಮತ್ತೆ ರಾಜಕೀಯಕ್ಕೆ ಮರಳುವ ಉದ್ದೇಶವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಪುನರುಚ್ಚರಿಸಿದ್ದಾರೆ.
ನವದೆಹಲಿಯಿಂದ ಹಿಂದಿರುಗಿದ ಒಂದು ದಿನದ ನಂತರ, ರಜನಿಕಾಂತ್ ಅವರು ಸೋಮವಾರ ಚೆನ್ನೈನ ರಾಜಭವನದಲ್ಲಿ ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಭೇಟಿ ಮಾಡಿದರು. ತಮ್ಮ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ, ರಾಜ್ಯಪಾಲರೊಂದಿಗಿನ ಭೇಟಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿ, ಇದು "ಸೌಜನ್ಯದ ಭೇಟಿ" ಎಂದು ಹೇಳಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರು 2017-2021 ರವರೆಗೆ ತಮ್ಮ ಪಕ್ಷ ರಜಿನಿ ಮಕ್ಕಳ್ ಮಂದ್ರಂ (RMM) ನೊಂದಿಗೆ ರಾಜಕೀಯದಲ್ಲಿ ಅಲ್ಪಕಾಲವಿದ್ದರು. 31 ಡಿಸೆಂಬರ್ 2017 ರಂದು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ್ದರು. 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತವನ್ನು ದೃಢಪಡಿಸಿದರು. ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದರು.

ಆದರೆ, 12 ಜುಲೈ 2021 ರಂದು ರಜಿನಿ ಮಕ್ಕಳ್ ಮಂದ್ರಂ ಪಕ್ಷವನ್ನು ವಿಸರ್ಜಿಸಿದರು. ಈ ವೇಳೆ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ ಎಂದು ಹೇಳಿದ್ದರು.
ಅದಕ್ಕೂ ಮುನ್ನ ರಜನಿಕಾಂತ್ ಅವರು ಡಿಎಂಕೆ ಮತ್ತು ತಮಿಳು ಮನ್ನಿಲಾ ಕಾಂಗ್ರೆಸ್ ಮೈತ್ರಿಗೆ ಬೆಂಬಲ ನೀಡಿದ್ದರು. ಜೊತೆಗೆ ತಮಿಳುನಾಡಿನ ಜನರು ಮತ್ತು ಅವರ ಅಭಿಮಾನಿಗಳು ಆ ಮೈತ್ರಿಗೆ ಮತ ನೀಡುವಂತೆ ಕೇಳಿಕೊಂಡಿದ್ದರು.
ನಂತರ 2004 ರಲ್ಲಿ, ಅವರು ವೈಯಕ್ತಿಕವಾಗಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವುದಾಗಿ ಘೋಷಿಸಿದ್ದರು. ಆದರೆ ಭಾರತದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲವನ್ನು ಘೋಷಿಸಿರಲಿಲ್ಲ.
ಇತ್ತೀಚೆಗೆ ರಜನಿಕಾಂತ್ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇನ್ನು, ಜುಲೈ 24 ರ ಆದಾಯ ತೆರಿಗೆ ದಿನದಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಅತಿಹೆಚ್ಚು ಮತ್ತು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಯಿತು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಪ್ರಶಸ್ತಿ ಪ್ರದಾನ ಮಾಡಿದರು. ರಜನಿಕಾಂತ್ ಪರವಾಗಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಪ್ರಶಸ್ತಿ ಸ್ವೀಕರಿಸಿದರು.












Click it and Unblock the Notifications